ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ:
ಅತಿಥಿ ಶಿಕ್ಷಕರಿಗೆ ಸುಪ್ರೀಂ ಕೋರ್ಟ್ ಅದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ, ಜೊತೆಗೆ ಸೇವಾ ಭದ್ರತೆ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.ಪಟ್ಟಣದ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು 45 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಯಾವುದೇ ಭದ್ರತೆ ಇಲ್ಲದೆ ಕೇವಲ ಗೌರವ ಧನದ ಆಧಾರದ ಮೇಲೆ ಅಭಧ್ರತೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಕ್ರಮ ಕೈಗೊಂಡಿಲ್ಲ. ಇತ್ತೀಚಿನ ಬಜೆಟ್ ನಲ್ಲಿ ನಮ್ಮ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಮಸ್ತ ಅತಿಥಿ ಶಿಕ್ಷಕರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಎರಡು ದಿನ ನಡೆದ ಶಾಲೆ ತೋರೆಯೋಣ ಅಭಿಯಾನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅತಿಥಿ ಶಿಕ್ಷಕರ ಸಭೆ ಕರೆದು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆವಿಗೂ ನಮ್ಮ ಬೇಡಿಕೆ, ಹಕ್ಕೊತ್ತಾಯಗಳನ್ನು ಈಡೇರಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆ ತೊರೆದು ಮುಂದಿನ ಮಾರ್ಚ್ ತಿಂಗಳು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗವುದು. ಕನಿಷ್ಠ ವೇತನ 25 ಸಾವಿರ ರು. ವೇತನ ನೀಡಬೇಕು, ಅತಿಥಿ ಶಿಕ್ಷಕರ ನೇಮಕಾತಿ ವೇಳೆ ಸೇವಾ ಹಿರಿತನಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವರ್ಷಗಳಿಂದಲೂ ಸೇವಾದೃಢೀಕರಣ ಪತ್ರ ನೀಡುವುದರ ಜೊತೆಗೆ ವರ್ಷಕ್ಕೆ 5 ರಷ್ಟು ಕೃಪಾಂಕ ನೀಡಬೇಕು, ಇತರೆ ರಾಜ್ಯಗಳಾದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಅತಿಥಿ ಶಿಕ್ಷಕರ ವಿಚಾರದಲ್ಲಿ ತೆಗೆದು ಕೊಂಡ ತೀರ್ಮಾನದಂತೆ ಸೇವಾಹಿರಿತನ, ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಖಾಯಂ ಮಾಡಬೇಕು, ಅತಿಥಿ ಶಿಕ್ಷಕ ಪದವನ್ನು ಕೈಬಿಟ್ಟು ಅರೆಕಾಲಿಕ ಶಿಕ್ಷಕರು ಎಂಬ ಪದ ಬಳಸಬೇಕೆಂಬುವುದು ನಮ್ಮ ಹಕ್ಕೋತ್ತಾಯಗಳಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎನ್.ಎಲ್.ಭರತ್ ರಾಜ್, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಉಪಾಧ್ಯಕ್ಷ ಜೆ. ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ. ಉಪಾಧ್ಯಕ್ಷ ಸುಮಿತ್ರ ರಮ್ಯ,ರೇಖಾ,ಮಹದೇವು, ಸಹ ಕಾರ್ಯದರ್ಶಿ ನಂಜುಂಡ ಸ್ವಾಮಿ ಹನುಮಯ್ಯ,ಅನಿಲ್ ಕುಮಾರ್,.ಖಜಾಂಚಿ ಪುಟ್ಟರಾಜು ಹಾಜರಿದ್ದರು.