ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ಬೆಂಗಳೂರಿನ ನಾಗರಿಕರಿಗೆ ಆರನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’ ಘೋಷಣೆ ಮಾಡಿದೆ. ಇದರಲ್ಲಿ ಮೂರು ಸೌಲಭ್ಯಗಳನ್ನು ನೀಡಿದ್ದು, ''''''''ಇ'''''''' ಖಾತಾ ವಿತರಣೆ, ಕಟ್ಟಡ ಉಲ್ಲಂಘನೆ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ ಹಾಗೂ ''''''''ಬಿ'''''''' ಖಾತೆಯಿಂದ ''''''''ಎ'''''''' ಖಾತೆಗೆ ಬದಲಾವಣೆ ವೇಳೆ ಪರಿವರ್ತನಾ ಶುಲ್ಕದ ಶೇ.2ರಷ್ಟನ್ನು 100 ದಿನಗಳೊಳಗೆ ಪಾವತಿಸಿದರೆ ಉಳಿದ ಶೇ. 3ರಷ್ಟಕ್ಕೆ ರಿಯಾಯ್ತಿ ದೊರೆಯಲಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬೆಂಗಳೂರಿನಲ್ಲಿ 23 ಲಕ್ಷ ಆಸ್ತಿಗಳ ಪೈಕಿ 16 ಲಕ್ಷ ಆಸ್ತಿಗಳು ಎ ಖಾತಾ ಹಾಗೂ 7 ಲಕ್ಷ ಬಿ ಖಾತಾ ಇದೆ. ಬಿ ಖಾತಾ ಹೊಂದಿರುವವರಿಗೆ ಬ್ಯಾಂಕ್ ಸಾಲ, ಮಾರಾಟ ಸೇರಿ ಇತರೆ ಕಾರ್ಯಕ್ಕೆ ತೊಡಕಾಗುತ್ತಿದೆ. ಹೀಗಾಗಿ, ಬಿ ಖಾತಾಗಳನ್ನು ಎ ಖಾತಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ‘ನನ್ನ ಖಾತಾ ನನ್ನ ಹಕ್ಕು’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

‘ನನ್ನ ಖಾತೆ, ನನ್ನ ಹಕ್ಕು’ ಅಭಿಯಾನ ಮೂರು ತಿಂಗಳ ಕಾಲ ಪ್ರತಿ ಶನಿವಾರ ನಡೆಯಲಿದೆ. ಮೇ 16ರಂದು ಬೆಳಗ್ಗೆ 10ಕ್ಕೆ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ‘ಪ್ರತಿ ಶನಿವಾರ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 10 ರಂತೆ 50 ಸ್ಥಳಗಳಲ್ಲಿ ಈ ಅಭಿಯಾನ (ಇ-ಖಾತಾ ಸಿಟಿಜನ್ ಓಪನ್ ಹೌಸ್) ಕಾರ್ಯಕ್ರಮ ನಡೆಯಲಿದೆ.ಈ ಅಭಿಯಾನದ ಸ್ಥಳಗಳನ್ನು ಮುಂಚಿತವಾಗಿ ತಿಳಿಸಲಾಗುವುದು’ ಎಂದರು.

‘ಇ’ ಖಾತಾ ಆಂದೋಲನ ದೇಶದ ಅತಿದೊಡ್ಡ ಸಮಗ್ರ ಡಿಜಿಟಲ್‌ ನಗರ ಆಸ್ತಿ ದಾಖಲೆ ವ್ಯವಸ್ಥೆಯಾಗಿದೆ. 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ನಾಗರಿಕರ ಕೈಗೆ ತಲುಪಿಸಿದೆ. ಹಳೆಯ, ಅಸ್ಪಷ್ಟ ಹಾಗೂ ಕೈಪಿಡಿ ವ್ಯವಸ್ಥೆಯನ್ನು ವೆಬ್‌ಸೈಟ್‌ನಲ್ಲಿ (https://BBMPeAasthi.karnataka.gov.in) ಪಡೆದುಕೊಳ್ಳಬಹುದು.


ನಗರದಲ್ಲಿ ದಾಖಲೆಗಳು ಸರಿ ಇರುವ ಸುಮಾರು 16 ಲಕ್ಷ ‘ಎ'''''''' ಖಾತೆಗಳಿವೆ. 7 ಲಕ್ಷ ''''''''ಬಿ'''''''' ಖಾತೆಗಳಿವೆ. ‘ಭೂ ಗ್ಯಾರಂಟಿ’ ಮೂಲಕ ಬೆಂಗಳೂರಿನ ಪ್ರತಿಯೊಬ್ಬ ನೈಜ ಆಸ್ತಿ ಮಾಲೀಕರಿಗೂ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಎಲ್ಲೆಡೆಯೂ ಲಭ್ಯವಾಗುವ ಡಿಜಿಟಲ್ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು. ಇದನ್ನು ಪಾರದರ್ಶಕ, ಸುರಕ್ಷಿತ ಹಾಗೂ ನಾಗರಿಕ ಕೇಂದ್ರಿತ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಲಾಗಿದೆ ಎಂದರು.

ಶೇ.60 ರಿಯಾಯಿತಿ:

‘ಬಿ’ ಖಾತೆಯಿಂದ ‘ಎ’ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದವರು ದಾಖಲೆಗಳನ್ನು ಸರಿಯಾಗಿ ನೀಡಿದ್ದರೆ ಈಗ ಮಾರ್ಗಸೂಚಿ ದರ (ಗೈಡೆನ್ಸ್ ವ್ಯಾಲ್ಯೂ) ಶೇ.5ರಷ್ಟು ಕಟ್ಟಬೇಕಿದೆ. ಈ ಶೇ.5ರಷ್ಟು ಶುಲ್ಕದ ಪೈಕಿ ಶೇ.2ರಷ್ಟನ್ನು 100 ದಿನಗಳ ಒಳಗಾಗಿ ಪಾವತಿಸಿದರೆ ಉಳಿದ ಶುಲ್ಕಕ್ಕೆ ರಿಯಾಯ್ತಿ ದೊರೆಯಲಿದೆ. ಉದಾ: 1 ಕೋಟಿ ಆಸ್ತಿ ಬೆಲೆ ಇದ್ದರೆ 5 ಲಕ್ಷ ಶುಲ್ಕ ಪಾವತಿ ಮಾಡಬೇಕಿತ್ತು. ಈಗ 2 ಲಕ್ಷ ಕಟ್ಟಿದರೆ ಸಾಕು. ಈ ನಿಯಮದಿಂದ 7 ಲಕ್ಷ ಆಸ್ತಿ ಮಾಲೀಕರಿಗೆ ಉಪಯೋಗವಾಗಲಿದೆ. ನೂರು ದಿನಗಳಲ್ಲಿ ಈ ಉಪಯೋಗ ಪಡೆಯದಿದ್ದರೆ ನಂತರ ಶೇ.5ರಷ್ಟೇ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಪ್ರತಿಯೊಂದು ಆಸ್ತಿ ದಾಖಲೆಗಳಲ್ಲಿ ಜಿಪಿಎಸ್, ಮಾಲೀಕರ ಫೋಟೋ ಇರುತ್ತದೆ. ಒಂದೇ ಒಂದು ರೂಪಾಯಿ ಲಂಚ ಇಲ್ಲದಂತೆ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಅಧಿಕಾರಿಗಳು ಇದರ ಜವಾಬ್ದಾರಿ ಹೊತ್ತಿರುತ್ತಾರೆ. ಜೊತೆಗೆ ಆನ್‌ಲೈನ್‌ನಲ್ಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರು.

ಉಲ್ಲಂಘನೆ ಮಿತಿ ಶೇ.15ಕ್ಕೆ ಏರಿಕೆ:

ಕಟ್ಟಡದ ಉಲ್ಲಂಘನೆ ವಿನಾಯಿತಿ ಮಿತಿಯನ್ನು (ಎತ್ತರ, ಎಫ್ಎಆರ್, ಸೆಟ್ ಬ್ಯಾಕ್) ಶೇ.5 ರ ಬದಲಾಗಿ ಶೇ.15 ಕ್ಕೆ ಹೆಚ್ಚಿಸಲಾಗಿದೆ. ಶೇ.15 ರಷ್ಟು ಪ್ರಮಾಣದ ಉಲ್ಲಂಘನೆಗಳಿಗೆ ದಂಡ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯ ಒದಗಿಸಬಾರದೆಂದು ಆದೇಶಿಸಿದೆ. ಈ ಸಮಸ್ಯೆ ನಿವಾರಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ ಎಂದರು.

ನಿಯಮಾನುಸಾರ ಸೆಟ್‌ ಬ್ಯಾಕ್‌ ಬಿಡದೆ ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿರುವವರಿಗೂ ವಿನಾಯಿತಿ ನೀಡಲಾಗಿದೆ. 20*30, 30*40, 40*60 ಅಳತೆಯ ನಿವೇಶನಗಳಿಗೆ ಗರಿಷ್ಠ ಶೇ.50 ರಷ್ಟು ಸೆಟ್ ಬ್ಯಾಕ್ ರಿಯಾಯಿತಿ ನೀಡಲು ಕಾಯ್ದೆಯಲ್ಲಿ ಅವಕಾಶವಿದೆ. ನಮ್ಮ ಸರ್ಕಾರ ಈಗ ಶೇ.15 ರಷ್ಟು ವಿನಾಯಿತಿ ನೀಡಿದ್ದೇವೆ ಎಂದರು.