ಕೊಳ್ಳೇಗಾಲ ತಾಲೂಕಿನ ಸಿಲ್ಕಲ್‌ ಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಎ. ಆರ್‌. ಕೃಷ್ಣಮೂರ್ತಿ ಚಾಲನೆ ನೀಡಿದರು. ಈ ವೇಳೆ ನಂಜುಂಡಸ್ವಾಮಿ, ಚಂದ್ರು, ರಾಜೇಂದ್ರ, ಚೇತನ್‌ ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

‘ನಾಯಕತ್ವ ಬದಲಾವಣೆ ವಿಚಾರದಲ್ಲಿ ನೀವು ಯಾರ ಕಡೆ ಎಂದು ಮಾಧ್ಯಮ ಸೇರಿದಂತೆ ಎಲ್ಲರೂ ಕೇಳುತ್ತಾರೆ. ಆದರೆ ನಾನು ಗೆದ್ದಿದ್ದು ಕಾಂಗ್ರೆಸ್‌ನಿಂದ ಹಾಗಾಗಿ ನಾನು ಕಾಂಗ್ರೆಸ್‌ ಪಕ್ಷದ ಕಡೆ ಇದ್ದೇನೆ. ಈ ಸರ್ಕಾರ ಉಳಿದ ಎರಡೂವರೆ ವರ್ಷ ಪೂರೈಸಲಿದೆ’ ಎಂದು ಶಾಸಕ ಎ.ಆರ್‌. ಕೖಷ್ಣಮೂರ್ತಿ ಹೇಳಿದರು.

ತಾಲೂಕಿನ ಸಿಲ್ಕಲ್‌ಪುರ ಹಾಗೂ ಕಜ್ಜಿಹುಂಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ‘ಮುಖ್ಯಮಂತ್ರಿಗಳು ಸಮುದಾಯ ಭವನಗಳ ಅಭಿವೃದ್ಧಿಗೆ 25 ಕೋಟಿ ರು., ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರು., ನೀಡಿದ್ದು ಅದನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ’ ಎಂದರು.ಹಲವು ರಸ್ತೆಗಳ ಅಭಿವೃದ್ಧಿ:

‘ಇಂದು ಕಾಡಾ ನಿಗಮದಿಂದಲೂ ಸಹ ಚಾಟೀಪುರ, ಗಂಗವಾಡಿ, ಹೊಂಗನೂರು ರಸ್ತೆ, ಕಬಿನಿ ಬಲದಂಡೆ ನಾಲೆ, ಕಜ್ಜಿಹುಂಡಿ ನಾಲೆ ಪಕ್ಕ, ಕೆಸ್ತೂರು ಗ್ರಾಮದ ಕಟ್ನವಾಡಿ ಕೆರೆಯ ದಂಡಿನ ದೇವಸ್ಥಾನ ಪಕ್ಕದಲ್ಲಿ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿಗೆ ಇಂದು ಚಾಲನೆ ನೀಡಲಾಗಿದೆ’ ಎಂದರು.

ನೀರಾವರಿಗೆ ಭರಪೂರ ಅನುದಾನ:

ಸಣ್ಣ ನೀರಾವರಿ ಇಲಾಖೆ ಹೊಂಗನೂರು ಕೆರೆ ಅಭಿವೖದ್ದಿಗೆ 14.5 ಕೋಟಿ ರು. ಕ್ಷೇತ್ರ ವ್ಯಾಪ್ತಿಯ ವಿವಿಧ ಕೆರೆಗಳ ಅಭಿವೃದ್ಧಿಗೆ 29 ಕೋಟಿ ರು.ಗೂ ಅಧಿಕ ಅನುದಾನವನ್ನು ಸಚಿವ ಬೋಸರಾಜು ಅವರು ನೀಡಿದ್ದಾರೆ. ಚೆಕ್‌ ಡ್ಯಾಂಗಳ ಅಭಿವೃದ್ಧಿಗೂ ಸಹ 19.5 ಕೋಟಿ ರು. ನೀಡಿದ್ದು, ಈ ಅನುದಾನಗಳ ಸಮರ್ಪಕ ಬಳಕೆಯಿಂದ ರೈತರಿಗೆ ಸಹಕಾರಿಯಾಗಲಿದೆ. ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆಯಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಸಿಕ್ಕಿದೆ. ಕೊಳ್ಳೇಗಾಲದಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಇರುವ ಗೊಂದಲ ಬಗೆಹರಿದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದರು.

ಶಿಕ್ಷಣಾಭಿವೃದ್ಧಿಗೂ ಒತ್ತು:

‘ಕುರುಬನ ಕಟ್ಟೆ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಿ ಕ್ರೈಸ್ತರು, ಮುಸ್ಲಿಂ ಸೇರಿದಂತೆ ಹಲವು ಸಮುದಾಯದ ಮಕ್ಕಳ ಅಭಿವೃದ್ಧಿಗಾಗಿ ಈಗಾಗಲೆ 5 ಎಕರೆ ಜಾಗ ಮಂಜುರಾಗಿದೆ. ಮಕ್ಕಳ ಪ್ರಗತಿಗಾಗಿ ಇಲ್ಲಿ ತಾರಾಲಯ ಸ್ಥಾಪನೆಯಾಗಬೇಕು ಎಂಬ ಕನಸು ನನಗಿದೆ’ ಎಂದು ಹೇಳಿದರು.

ಜವಳಿ ಪಾರ್ಕ್‌ ಸ್ಥಾಪನೆ ಗುರಿ:

ಕೊಳ್ಳೇಗಾಲ ತಾಲೂಕಿನ ಟಗರಪುರ ಪಂಚಾಯ್ತಿಯ ಸಿಲ್ಕಲ್‌ಪುರ ಗ್ರಾಮದಲ್ಲಿ ಈಗಾಗಲೇ 15 ಎಕರೆ ಸರ್ಕಾರಿ ಜಾಗ ಗುರುತು ಮಾಡಲಾಗಿದ್ದು, ಅಲ್ಲೊಂದು ಜವಳಿ ಪಾಕ್‌ರ್ ನಿರ್ಮಾಣ ಮಾಡಬೇಕು ಎಂಬ ಕನಸು ನನಗಿದೆ. ಅಲ್ಲಿ ಪಾರ್ಕ್‌ ನಿರ್ಮಾಣವಾದರೆ ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ. ಅದೇ ರೀತಿ ಸಂತೇಮರಳ್ಳಿ ಭಾಗದಲ್ಲೂ ಸಹ ಜವಳಿ ಪಾರ್ಕ್‌ ನಿರ್ಮಾಣ ಚಿಂತನೆ ನನಗಿದೆ. ಇದರ ಸಾಕಾರಗೊಳಿಸುವಲ್ಲಿ ನನ್ನ ನಡೆ ಸಾಗಲಿದೆ’ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಚೇತನ್, ಪುಟ್ಟಮಾದಯ್ಯ, ಕಾಡಾ ಇಲಾಖೆ ಎಇಇ ಗಣೇಶ್, ಗುತ್ತಿಗೆದಾರರು ರೇವಣ್ಣ, ಸಣ್ಣ ನೀರಾವರಿ ಇಲಾಖೆ ಎಇಇ ಅಭಿಲಾಷ್, ಎಇ ಪ್ರತಾಪ್, ಗುತ್ತಿಗೆದಾರರು ಮಂಜುನಾಥ್, ವಕೀಲರು ಚಂದ್ರು ಇನ್ನಿತರಿದ್ದರು.

ಕಾಡಾ ಅಧ್ಯಕ್ಷ ಮರಿಸ್ವಾಮಿ ಅವರು ಹಲವು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಶ್ರಮಿಸಿದ್ದಾರೆ. ಅದೇ ರೀತಿ ಹೊಂಗನೂರು ಚಂದ್ರು, ಆಲಹಳ್ಳಿ ತೋಟೇಶ್ ಅವರು ಸಹ ಪಕ್ಷ ಸಂಘಟನೆ ನಿಟ್ಟಿನಲ್ಲಿ ತಮ್ಮದೇ ದಾಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿರುದ್ಯೋಗಿಗಳ ಅನುಕೂಲಕ್ಕಾಗಿ ಜವಳಿ ಪಾರ್ಕ್‌ ನಿರ್ಮಾಣ ಚಿಂತನೆ ನನಗಿದೆ. ಇದು ನನ್ನ ಗುರಿಯೂ ಆಗಿದೆ.

-ಎ.ಆರ್‌.ಕೃಷ್ಣಮೂರ್ತಿ ಶಾಸಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ.