ಸಾರಾಂಶ
ಹರಪನಹಳ್ಳಿ: ಪೌರ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಅವರು ಪಟ್ಟಣದ ಪುರಸಭಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರತಿ ವಾರ್ಡಗಳಲ್ಲೂ ಪ್ರತಿನಿತ್ಯ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡು ಕೌನ್ಸಿಲರ್ ಗಳು ಗೆದ್ದು ಬರಲು ಪೌರ ಕಾರ್ಮಿಕರು ಕಾರಣವಾಗುತ್ತಾರೆ ಎಂದ ಅವರು, ಇಂತಹ ಉತ್ತಮ ಕಾರ್ಯಕ್ರಮಕ್ಕೆ ಅನೇಕ ಪುರಸಭಾ ಸದಸ್ಯರು ಗೈರಾಗಿರುವುದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ವೈಯಕ್ತಿಕವಾಗಿ ಪೌರ ಕಾರ್ಮಿಕರಿಗೆ ಸೀರೆ, ಪ್ಯಾಂಟ್ ಶರ್ಟ ವಿತರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಪೌರ ಕಾರ್ಮಿಕರು ಯೋಧನೆ ರೀತಿಯಲ್ಲಿ ಕೆಲಸ ಮಾಡಿ ಪಟ್ಟಣದ ನೈರ್ಮಲ್ಯ ಕಾಪಾಡಿ ಜನತೆ ನೆಮ್ಮದಿ ಜೀವನ ಮಾಡಲು ಕಾರಣರಾಗುತ್ತಾರೆ. ನಿಮ್ಮ ಮಕ್ಕಳು ನಿಮ್ಮಂತೆ ಪೌರ ಕಾರ್ಮಿಕರಾಗದೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವಂತೆ ಶಿಕ್ಷಣ ಕೊಡಿಸಿ ಎಂದು ಅವರು ಪೌರ ಕಾರ್ಮಿಕರಿಗೆ ಹೇಳಿದರು.
ನಮ್ಮ ಪುರಸಭೆಯಲ್ಲಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಇನ್ನೂ 60 ಜನರ ಅಗತ್ಯವಿದೆ. ಹೆಚ್ಚುವರಿ ಪೌರ ಕಾರ್ಮಿಕರನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಶಾಸಕರು ಕ್ರಮ ಕೈಗೊಳ್ಳುವ ಚಿಂತನೆಯಲ್ಲಿದ್ದಾರೆ ಎಂದು ಹೇಳಿದರು.ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಈಗ ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಾಹೇಬ್ ಮಾತನಾಡಿ, ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ ಮಾತನಾಡಿ, ಪೌರ ಕಾರ್ಮಿಕರು ನಗರದ ಆಧಾರ ಸ್ಥಂಭಗಳು ಎಂದ ಅವರು, ಅವರ ಬೇಡಿಕೆಗಳನ್ನು ಶಾಸಕರು ಈಡೇರಿಸಬೇಕು ಎಂದು ಮನವಿ ಮಾಡಿದರು.ಪುರಸಭಾ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ ಮಾತನಾಡಿ, ಪೌರ ಕಾರ್ಮಿಕರ ಶ್ರಮ ಬಹಳಷ್ಟಿದೆ. ಸರ್ಕಾರದಿಂದ ಅವರಿಗೆ ಬರುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುತ್ತೇವೆ ಎಂದು ಹೇಳಿದರು.
ಪುರಸಭಾ ಅಧ್ಯಕ್ಷ ಎಂ.ಫಾತಿಮಾಬಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ನಾಗರಾಜ ಮಾತನಾಡಿದರು. ಪುರಸಭಾ ಸದಸ್ಯರಾದ ಲಾಟಿ ದಾದಾಪೀರ, ಮಂಜುನಾಥ ಇಜಂತಕರ್, ಹನುಮಕ್ಕ, ಗುಡಿ ನಾಗರಾಜ, ಹೇಮಣ್ಣ ಮೋರಗೇರಿ, ಅಬ್ದುಲ್ ಅಲೀಂ, ಸುಮಾ ಜಗದೀಶ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಚಿಕ್ಕೇರಿ ಬಸಪ್ಪ ಉಪಸ್ಥಿತರಿದ್ದರು.