ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ಬೆಂಗಳೂರಿನಿಂದ ಮಾಗಡಿ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ಗೆ ಎದುರುಗಡೆಯಿಂದ ಬರುತ್ತಿದ್ದ ಜಲ್ಲಿ ತುಂಬಿದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಬಸ್ ನಲ್ಲಿದ್ದ 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿ ಬಸ್ ಚಾಲಕ ಹಾಗೂ ಟಿಪ್ಪರ್ ಚಾಲಕನಿಗೆ ಗಂಭೀರ ಗಾಯವಾದ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಾಗಡಿ- ಬೆಂಗಳೂರು ಮುಖ್ಯರಸ್ತೆಯ ಚೋಳನಾಯಕನಹಳ್ಳಿ ಸಮೀಪ ಸೋಮವಾರ ಸಂಜೆ 5:30 ಸಮಯದಲ್ಲಿ ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಕೊಪ್ಪಗೆ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ಜಲ್ಲಿ ತುಂಬಿದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ ಚಾಲಕ ದೇವರಾಜೇಗೌಡ ರವರಿಗೆ ಹೊಟ್ಟೆ ಮತ್ತು ಕಾಲಿಗೆ ತೀವ್ರ ಗಾಯವಾಗಿದ್ದು, ಟಿಪ್ಪರ್ನ ಚಾಲಕ ಲಕ್ಷ್ಮಣ್ ಎಂಬುವರಿಗೂ ಗಂಭೀರ ಗಾಯವಾಗಿದೆ. ಖಾಸಗಿ ಆಸ್ಪತ್ರೆಗೆ ಇಬ್ಬರನ್ನು ರವಾನಿಸಲಾಗಿದೆ. ಬಸ್ನಲ್ಲಿದ್ದ 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿ ತಾವರೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಟ್ರಾಫಿಕ್ ಜಾಮ್:ಮಾಗಡಿ- ಬೆಂಗಳೂರು ಮುಖ್ಯರಸ್ತೆಯ ಚೋಳನಾಯಕನಹಳ್ಳಿ ಸಮೀಪ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಸೋಮವಾರ ಸಂಜೆ ಬೆಂಗಳೂರಿಗೆ ತೆರಳುವ ಮತ್ತು ಮಾಗಡಿಗೆ ತೆರಳುವ ಹಲವು ವಾಹನಗಳಿಂದ ಅಪಘಾತದ ಸ್ಥಳದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಜೆಸಿಬಿ ಯಂತ್ರದ ಮೂಲಕ ಎರಡು ವಾಹನಗಳನ್ನು ರಸ್ತೆ ಬದಿಗೆ ಸರಿಸಿ ಟ್ರಾಫಿಕ್ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುವಂತಾಯಿತು.
ಚೋಳನಾಯಕನಹಳ್ಳಿ ಸಮೀಪ ಕ್ರಷರ್ಗಳು ಹೆಚ್ಚಾಗಿ ಇರುವುದರಿಂದ ಜಲ್ಲಿ, ಜೆಲ್ಲಿ ಪುಡಿ ತುಂಬಿಕೊಂಡ ಲಾರಿಗಳು ಅತಿ ವೇಗವಾಗಿ ಈ ಭಾಗದಲ್ಲಿ ಸಂಚರಿಸುತ್ತಿದ್ದು, ಹಾಗಾಗಿ ಅಪಘಾತಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.