ಸಂವಿಧಾನದ ಬಗ್ಗೆ ಸರ್ಕಾರಕ್ಕೆ ಗೌರವ ಇಲ್ಲ: ಕಾರಜೋಳ

| Published : Nov 10 2024, 01:32 AM IST

ಸಾರಾಂಶ

ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ನಗರಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದರು. ಹಿಂದೆ ಅವರು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿಯಾಗಿದ್ದವರು. ಅವರ ಬಗ್ಗೆ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ಸಿಗರು ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ.

ಹುಬ್ಬಳ್ಳಿ:

ರಾಜ್ಯದಲ್ಲಿ ಸಂವಿಧಾನಾತ್ಮಕ ರಚನೆಯಾದ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಸಂಶಯ ಮೂಡುತ್ತಿದೆ. ಸಂವಿಧಾನದ ಬಗ್ಗೆ ಈ ಸರ್ಕಾರಕ್ಕೆ ಗೌರವವೇ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ನಗರಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದರು. ಹಿಂದೆ ಅವರು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿಯಾಗಿದ್ದವರು. ಅವರ ಬಗ್ಗೆ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸಿಗರು ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಜೆಪಿಸಿ ಅಧ್ಯಕ್ಷರು ರಾಜ್ಯಕ್ಕೆ ಬಂದಾಗ ಒಂದು ಪ್ರೋಟೋಕಾಲ್‌ ಇರುತ್ತದೆ. ಅದು ಕೂಡ ಇಲ್ಲಿ ಪಾಲನೆ ಮಾಡಿಲ್ಲ. ಈ ಮೂಲಕ ಜೆಪಿಸಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು. ಸಂವಿಧಾನದ ಮೇಲೆ ಗೌರವ ಇಲ್ಲ ಈ ಸರ್ಕಾರಕ್ಕೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.

ಸಿದ್ದರಾಮಯ್ಯ ಸರ್ಕಾರ ಹಗರಣದಲ್ಲಿ ಮುಳುಗಿದ್ದು, ರಾಜ್ಯ ಆರ್ಥಿಕ ದಿವಾಳಿಯಾಗಿದೆ. ಎಸ್ಸಿ-ಎಸ್ಟಿಗೆ ಸೇರಬೇಕಾಗಿದ್ದ ₹25 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ವಾಲ್ಮೀಕಿ ಹಗರಣದ ದುಡ್ಡು ಲೋಕಸಭೆ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ. ಇಂದು ಉಪಚುನಾವಣೆಗೆ ಅದೇ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಡೂರ ಜನ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಎಸ್‌ಡಿಎ ನೌಕರನೋರ್ವ ಸಚಿವರ ಆಪ್ತರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಖ್ಯಮಂತ್ರಿಗಳು ಈ ಕೂಡಲೇ ಸಚಿವರ ರಾಜೀನಾಮೆ ಪಡೆಯಬೇಕು. ಅವರ ಮೇಲೆ ಎಫ್‌ಐ‌ಆರ್ ದಾಖಲಿಸಬೇಕು. ಹಿಂದೆ ಕೆ.ಎಸ್‌. ಈಶ್ವರಪ್ಪ ಹೆಸರು ಬಂದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ ಈಗೇಕೆ ರಾಜೀನಾಮೆ ಪಡೆಯುತ್ತಿಲ್ಲ? ಸಿದ್ದರಾಮಯ್ಯ ಸರ್ಕಾರ ಅಲ್ಪಾವಧಿ ಸರ್ಕಾರ. ಈ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಭವಿಷ್ಯ ನುಡಿದರು.