ಸಾರಾಂಶ
- ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ
ಕನ್ನಡಪ್ರಭ ವಾರ್ತೆ ಮೈಸೂರುಬಡವರು, ನಿರ್ಗತಿಕರ ಪ್ರಕರಣಗಳು ತಮ್ಮ ಮುಂದೆ ಬಂದಾಗ ಅವರಿಗೆ ನೀವು ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಸಾಕ್ಷರತೆಯ ಬಗ್ಗೆ ಸಂವಾದತ್ಮಕ ಅಧಿವೇಶನ ಸಭೆಯಲ್ಲಿ ಮಾತನಾಡಿದ ಅವರು, ಜನರು ಅಧಿಕಾರಿಗಳನ್ನು ನಂಬಿ ಬಂದಿರುತ್ತಾರೆ, ಅಂತಹವರಿಗೆ ಸ್ವಂದಿಸುವುದು ನಮ್ಮ ಕರ್ತವ್ಯ ಎಂದರು.ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಏಕೆಂದರೆ ಆ ರೀತಿಯ ಪ್ರಕರಣಕ್ಕೆ ಒಳಗಾಗಿರುವವರಿಗೆ ಬೇಗನೆ ನ್ಯಾಯ ಕೊಡಿಸುವ ಅಗತ್ಯವಿರುತ್ತದೆ. ಇಲ್ಲಿಯವರೆಗೂ ಸಭೆಯಲ್ಲಿ ಚರ್ಚಿಸಲಾಗಿರುವ ಕೆಲವು ಪ್ರಕರಣಗನ್ನು ಇನ್ನೂ ಬಗೆಹರಿಸಿ ವರದಿ ನೀಡಿರುವುದಿಲ್ಲ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಸ್ತುತ ಬಾಕಿ ಉಳಿದಿರುವ ಪ್ರಕರಣಗಳಿಗೆ ಪ್ರತ್ಯೇಕ ಅಂತಿಮ ದಿನಾಂಕವನ್ನು ನೀಡಲಾಗಿದ್ದು, ಆ ದಿನಾಂಕದೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ. ವಂಟಿಗೋಡಿ ಮಾತನಾಡಿ, ಪ್ರಕರಣಗಳು ಪರಿಹಾರವಾದ ಕೂಡಲೇ ಅದರ ವರದಿಯನ್ನು ಸಲ್ಲಿಸಬೇಕು. ಆಗ ನಾವು ಮುಂದಿನ ಕ್ರಮ ಕೈಗೊಳ್ಳಬಹುದು. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ ವರದಿ ಸಲ್ಲಿಸಬೇಕು ಎಂದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಟಿ. ಶ್ಯಾಮಭಟ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಲೀಡರ್ ಶಿಪ್ ಗಳು, ಯಜಮಾನಿಕೆಗಳು ಹೆಚ್ಚಾಗಿರುವುದರಿಂದ ಅಲ್ಲಿಂದ ಬಂದಂತಹ ಪ್ರಕರಣಗಳಿಗೆ ಖುದ್ದು ಅಧಿಕಾರಿಗಳೇ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇದರಿಂದ ಜನರಿಗೆ ಸರಿಯಾದ ನ್ಯಾಯ ದೊರಕಿಸಲು ನೆರವಾಗುತ್ತದೆ ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.