ಸಾರಾಂಶ
ಜಮಖಂಡಿ ತಾಲೂಕಿನ ಜಕನೂರಿನಿಂದ ಗಲಗಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜಕನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ ಕಾಂಬ್ಳೆ ಸ್ವಂತ ಕರ್ಚಿನಲ್ಲಿ ದುರಸ್ತಿ ಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಕನ್ನಡಪ್ರಭವಾರ್ತೆ ಜಮಖಂಡಿ
ತಾಲೂಕಿನ ಜಕನೂರಿನಿಂದ ಗಲಗಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜಕನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಂಕರ ಕಾಂಬ್ಳೆ ಸ್ವಂತ ಕರ್ಚಿನಲ್ಲಿ ದುರಸ್ತಿ ಪಡಿಸಿ ಇತರರಿಗೆ ಮಾದರಿಯಾಗಿದ್ದಾರೆ. ಹಲವಾರು ದಿನಗಳಿಂದ ರಸ್ತೆ ಹದಗೆಟ್ಟು ಹೋಗಿತ್ತು. ಸಂಚಾರಕ್ಕೆ ವಾಹನ ಸವಾರರು ಪರದಾಡುತ್ತಿದ್ದರು. ರಸ್ತೆ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿರಲಿಲ್ಲ. ಸಾರ್ವಜನಿಕರ ಒತ್ತಾಯದ ಮೇರೆಗೆ ಅಧ್ಯಕ್ಷ ಶಂಕರ ಅವರೇ ರಸ್ತೆ ದುರಸ್ತಿಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಗ್ರಾಮದ ಹಿರಿಯರಾದ ಹನುಮಂತ ಅಮರೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ಬಾರಿ ಈ ರಸ್ತೆ ದುರಸ್ತಿಗೆ ಶಾಸಕರು ಮತ್ತು ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿತ್ತು. ರಸ್ತೆ ದುರಸ್ತಿ ಪರಿಸುವಂತೆ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರಿಗೆ ಒತ್ತಾಯ ಪಡಿಸಿದ್ದರಿಂದ ಅಧ್ಯಕ್ಷರು ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸಿದ್ದಾರೆ ಎಂದರು. ಗ್ರಾಮಸ್ಥರು ಮತ್ತು ವಾಹನ ಸವಾರರು ಅಧ್ಯಕ್ಷರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.