ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಧಾರ್ಮಿಕ ಘೋಷಣೆಗಳು ಮೊಳಗಿದವು. ಯುವಕರು ಕೈಯಲ್ಲಿ ಬೃಹತ್ ಬಾವುಟಗಳನ್ನು ಹಿಡಿದು ಉತ್ಸಾಹದಿಂದ ಸಾಗಿದರು. ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಹಸಿರು ಬಾವುಟಗಳು ರಾರಾಜಿಸುತ್ತಿದ್ದು, ಶುಭಾಶಯ ಕೋರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬಂಟಿಂಗ್ಸ್ ಕಟ್ಟಲಾಗಿತ್ತು.ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ವಿವಿಧೆಡೆ ತಂಪು ಪಾನೀಯ, ಕುಡಿಯುವ ನೀರು ಹಾಗೂ ಐಸ್‌ಕ್ರೀಂ ವಿತರಿಸಲಾಯಿತು. ಪಟಾಕಿಗಳ ಸದ್ದಿನೊಂದಿಗೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಪ್ರವಾದಿ ಮುಹಮ್ಮದ್ ಪೈಗಂಬರ್‌ ಅವರ ಜನ್ಮದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಪ್ರಯುಕ್ತ ನಗರದಲ್ಲಿ ಮುಸ್ಲಿಂ ಬಾಂಧವರಿಂದ ಬೃಹತ್ ಮೆರವಣಿಗೆ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಮಂದಿ ಭಾಗವಹಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ನಗರದ ಹಳೆ ಮಟನ್ ಮಾರ್ಕೆಟ್‌ನ ಅಮೀರ್‌ ಮೊಹಲ್ಲಾ ಬಳಿ ಜಮಾಯಿಸಿದ ಮುಸ್ಲಿಂ ಬಾಂಧವರು ಡಬಲ್ ಟ್ಯಾಂಕ್ ವೃತ್ತದಿಂದ ಮೆರವಣಿಗೆ ಆರಂಭಿಸಿದರು. ಹೊಸಲೈನ್ ರಸ್ತೆ, ವಲ್ಲಭಭಾಯಿ ರಸ್ತೆ, ಸಂತೆಪೇಟೆ ವೃತ್ತ ಸೇರಿದಂತೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಿ.ಎಂ. ರಸ್ತೆಯತ್ತ ಸಾಗಿದರು. ಮೆರವಣಿಗೆಯಲ್ಲಿ ಕ್ಷೇತ್ರದ ಶಾಸಕ ಎಚ್. ಪಿ. ಸ್ವರೂಪ್ ಹಾಗೂ ಹಲವು ಮುಖಂಡರು ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಶುಭಾಶಯ ಕೋರಿದರು. ಕೆಲ ಸಮಯ ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿದರು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ಪಾಲ್ಗೊಂಡಿದ್ದ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಧಾರ್ಮಿಕ ಘೋಷಣೆಗಳು ಮೊಳಗಿದವು. ಯುವಕರು ಕೈಯಲ್ಲಿ ಬೃಹತ್ ಬಾವುಟಗಳನ್ನು ಹಿಡಿದು ಉತ್ಸಾಹದಿಂದ ಸಾಗಿದರು. ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಹಸಿರು ಬಾವುಟಗಳು ರಾರಾಜಿಸುತ್ತಿದ್ದು, ಶುಭಾಶಯ ಕೋರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬಂಟಿಂಗ್ಸ್ ಕಟ್ಟಲಾಗಿತ್ತು.ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ವಿವಿಧೆಡೆ ತಂಪು ಪಾನೀಯ, ಕುಡಿಯುವ ನೀರು ಹಾಗೂ ಐಸ್‌ಕ್ರೀಂ ವಿತರಿಸಲಾಯಿತು. ಪಟಾಕಿಗಳ ಸದ್ದಿನೊಂದಿಗೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು.ಮೆರವಣಿಗೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಪ್ರಮುಖ ಸ್ಥಳಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ಕ್ಯಾಮೆರಾಗಳ ಮೂಲಕ ಮೆರವಣಿಗೆಯ ಮೇಲೆ ನಿಗಾ ವಹಿಸಿದ್ದರು. ಆದರೆ ಮೆರವಣಿಗೆ ಸಾಗಿದ ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಲೋಟ ಹಾಗೂ ಬಾಟಲಿಗಳು ರಸ್ತೆ ಬದಿಯಲ್ಲಿ ಬಿದ್ದಿರುವುದು ಕಂಡುಬಂತು.