ಸಾರಾಂಶ
ಬೈಲಹೊಂಗಲ ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದ 43ನೇ ಜಾತ್ರಾ ಮಹೋತ್ಸವ, ನೂತನ ಮಠದ ಲೋಕಾರ್ಪಣೆ, ಲಿಂ.ಶಿವಶರಣೆ ತಂಗೆಮ್ಮಾ ತಾಯಿ ಅವರ 79ನೇ ಜಯಂತ್ಯೋತ್ಸವ ನಿಮಿತ್ತ ವಾದ್ಯಮೇಳಗಳೊಂದಿಗೆ ಬೆಂಗಳೂರಿನ ಕೈಲಾಸ ಅಶ್ರಮದ ಮಹಾಸಂಸ್ಥಾನದ ಜಗದ್ಗುರು ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜರು ಹಾಗೂ ವಿವಿಧ ಶ್ರೀಗಳ ಬೆಳ್ಳಿ ಕುದುರೆ ಸಾರೋಟ ಮೆರವಣಿಗೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದ 43ನೇ ಜಾತ್ರಾ ಮಹೋತ್ಸವ, ನೂತನ ಮಠದ ಲೋಕಾರ್ಪಣೆ, ಲಿಂ.ಶಿವಶರಣೆ ತಂಗೆಮ್ಮಾ ತಾಯಿ ಅವರ 79ನೇ ಜಯಂತ್ಯೋತ್ಸವ ನಿಮಿತ್ತ ವಾದ್ಯಮೇಳಗಳೊಂದಿಗೆ ಬೆಂಗಳೂರಿನ ಕೈಲಾಸ ಅಶ್ರಮದ ಮಹಾಸಂಸ್ಥಾನದ ಜಗದ್ಗುರು ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜರು ಹಾಗೂ ವಿವಿಧ ಶ್ರೀಗಳ ಬೆಳ್ಳಿ ಕುದುರೆ ಸಾರೋಟ ಮೆರವಣಿಗೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.ಇತಿಹಾಸ ಪ್ರಸಿದ್ದ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದಿಂದ ಗುರು ಮಡಿವಾಳೇಶ್ವರಮಠದ ಮಡಿವಾಳೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ, ಇಂಚಲ ಕ್ರಾಸ್ ಮಾರ್ಗವಾಗಿ ಶ್ರೀಮಠದವರಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಮೆರವಣಿಗೆ ಮಾರ್ಗದಲ್ಲಿ ಭಕ್ತರು ನೀರು ಹಾಕಿ, ಕಾಯಿ, ಕರ್ಪೂರ ಬೆಳಗಿ, ನೈವೇದ್ಯ ಅರ್ಪಿಸಿ ಭಕ್ತಿ ಸಲ್ಲಿಸಿದರು. ಲಿಂ.ಶರಣೆ ತಂಗೆಮ್ಮ ತಾಯಿ ಅವರ ಭಾವಚಿತ್ರ, ಗುರು ಮಡಿವಾಳೇಶ್ವರ ಪ್ರತಿಮೆ, ಸಿಂಹಾಸನ, ಫಾಲಕಿ ಉತ್ಸವ ನೋಡುಗರ ಕಣ್ಮನ ಸೆಳೆಯಿತು. ಭಕ್ತರು ಹರ ಹರ ಮಹಾದೇವ, ಗುರು ಮಡಿವಾಳೇಶ್ವರ ಮಹರಾಜಕೀ ಜೈ ಎಂದು ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು ಜಯಘೋಷಣೆ ಕೂಗಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಹಿರಿಯರಾದ ಸಣ್ಣಬಸಪ್ಪ ಕುಡಸೋಮಣ್ಣವರ, ಶಿವಪ್ಪ ದೊಡಮನಿ, ಶಿವಾನಂದ ಬೆಳಗಾವಿ, ಮಡ್ಡೆಪ್ಪ ಕುರಿ, ಅಶೋಕ ಸವದತ್ತಿ, ಮಹಾಂತೇಶ ಹಣಸಿ, ಬಸವರಾಜ ಕಲಾದಗಿ ಇತರರು ಇದ್ದರು.