ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಗುರುವಾರ ತವರೂರು ಪೆರ್ಡೂರಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಭವ್ಯ ಸ್ವಾಗತ ನೀಡಿ ಸಾರ್ವಜನಿಕವಾಗಿ ಅಭಿನಂದಿಸಲಾಯಿತು.

ಹೆಬ್ರಿ: ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌ ಗುರುವಾರ ತವರೂರು ಪೆರ್ಡೂರಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಭವ್ಯ ಸ್ವಾಗತ ನೀಡಿ ಸಾರ್ವಜನಿಕವಾಗಿ ಅಭಿನಂದಿಸಲಾಯಿತು.ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ಅನಿಲ್‌ ರಾಜ್‌ ಹಾಗೂ ಅವರ ಪತ್ನಿ ಕಾವ್ಯ ಅನಿಲ್‌ ರಾಜ್‌ ದಂಪತಿಗೆ ಪೂರ್ಣಕುಂಭ ಸ್ವಾಗತ ನೀಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ತೆರೆದ ವಾಹನದಲ್ಲಿ ದಂಪತಿಯನ್ನು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಸೀನಿಯರ್‌ ಚೇಂಬರ್‌ ಇಂಟರ್‌ನ್ಯಾಷನಲ್‌ ಅನಂತಸ್ಪರ್ಶ ಲೀಜನ್‌ ಪೆರ್ಡೂರು ವತಿಯಿಂದ ಸಾರ್ವಜನಿಕ ಅಭಿನಂದನೆ ನಡೆಯಿತು. ಅನಿಲ್‌ ರಾಜ್‌ ಅವರ ತಂದೆ ಉಪಸ್ಥಿತರಿದ್ದರು. ಲೀಜನ್‌ ಅಧ್ಯಕ್ಷ ಆನಂದ ಗೌಡ ಅಧ್ಯಕ್ಷತೆ ವಹಿದ್ದರು.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶಾಂತಾರಾಮ ಸೂಡ ಮಾತನಾಡಿ, ನಮ್ಮ ನಡುವೆ ಬೆಳೆದ ಅನಿಲ್‌ ರಾಜ್‌ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಪೆರ್ಡೂರಿಗೆ ಹೆಮ್ಮೆ ತಂದಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಾಧನೆ ಯುವಜನತೆಗೆ ಪ್ರೇರಣೆಯಾಗಬೇಕು ಎಂದರು.

ಸೀನಿಯರ್‌ ಚೇಂಬರ್‌ ಇಂಟರ್‌ನ್ಯಾಷನಲ್‌ ರಾಷ್ಟ್ರೀಯ ಪೂರ್ವಾಧ್ಯಕ್ಷ ಚಿತ್ರ ಕುಮಾರ್‌, ದೇವಸ್ಥಾನದ ಅರ್ಚಕ ರಘುಪ್ರಸಾದ್‌ ಅಡಿಗ ಮಾತನಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಂಗ್‌ ಕಮಾಂಡರ್‌ ಅನಿಲ್‌ ರಾಜ್‌, ತವರೂರಿನಲ್ಲಿ ದೊರೆತ ಸ್ವಾಗತ ಹಾಗೂ ಭಾವಪೂರ್ಣ ಗೌರವದಿಂದ ಮನಸ್ಸು ತುಂಬಿ ಬಂದಿದೆ ಎಂದರು.

ಅನಿಲ್‌ ರಾಜ್‌ ಗುರುಗಳಾದ ಎಪಿಟಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವಿಠ್ಠಲ ಪೈ ಹಾಗೂ ರೇವತಿ ಟೀಚರ್‌ ಅವರನ್ನು ಅವರು ಗೌರವಿಸಿದರು. ಉಡುಪಿ ಜಿಲ್ಲಾ ಒಕ್ಕಲಿಗರ ಸಂಘ, ಮಾಜಿ ಸೈನಿಕರ ಸಂಘ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಊರಿನ ಪ್ರಮುಖರು ಅನಿಲ್‌ ರಾಜ್‌ ಮತ್ತು ಕಾವ್ಯ ಅನಿಲ್‌ ರಾಜ್‌ ದಂಪತಿಯನ್ನು ಅಭಿನಂದಿಸಿದರು.

ಪ್ರಮೋದ್‌ ರೈ ಪಳಜೆ, ಚಂದ್ರಶೇಖರ ಶೆಟ್ಟಿ, ಪುರುಷೋತ್ತಮ ಐತಾಳ್‌, ಸತೀಶ್‌ ಎನ್‌. ಶೆಟ್ಟಿ ಬುಕ್ಕಿಗುಡ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸುರೇಶ್‌ ಕರ್ಕೇರ ಪರಿಚಯಿಸಿದರು. ಸತೀಶ್‌ ಶೆಟ್ಟಿ ‘ಸೀನಿಯರ್‌ ವಾಣಿ’ ವಾಚಿಸಿದರು. ಪುರುಷೋತ್ತಮ ಐತಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪೇಂದ್ರ ಆಚಾರ್ಯ ನಿರೂಪಿಸಿ ವಂದಿಸಿದರು.