ಸಾರಾಂಶ
ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಬಿಡುಗಡೆಯಾದ ₹10 ಕೋಟಿ 2022ನೇ ಸಾಲಿನಲ್ಲಿ ಸರ್ಕಾರ ಹಿಂದೆ ಪಡೆದಿದ್ದು, ಬಂದರು ಇಲಾಖೆಯಿಂದ ವರದಿ ಪಡೆದುಕೊಂಡು ₹10 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗುವುದು.
ಕಾರವಾರ: ಶಾಸಕ ಸತೀಶ ಸೈಲ್ ಅವರು ಸೋಮವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ದೇವಬಾಗದಿಂದ ಮಾಜಾಳಿಯವರೆಗೆ ಅಂದಾಜು ₹8ರಿಂದ ₹15 ಕೋಟಿ ವೆಚ್ವದಲ್ಲಿ ರಸ್ತೆ ನಿರ್ಮಾಣವಾಗಿದ್ದು, ತಡೆಗೊಡೆ ಕಾಮಗಾರಿ ಮಾಡದ ಕಾರಣ ಸಮುದ್ರದ ನೀರು ರಸ್ತೆ ದಾಟಿ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಬಿಡುಗಡೆಯಾದ ₹10 ಕೋಟಿ 2022ನೇ ಸಾಲಿನಲ್ಲಿ ಸರ್ಕಾರ ಹಿಂದೆ ಪಡೆದಿದ್ದು, ಬಂದರು ಇಲಾಖೆಯಿಂದ ವರದಿ ಪಡೆದುಕೊಂಡು ₹10 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗುವುದು ಎಂದರು.
ಮಾಜಾಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂದರು ಕಾಮಗಾರಿಯನ್ನು ಮೀನುಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಬೇಕು. ಸ್ಥಳೀಯ ಮೀನುಗಾರರ ದೋಣಿ ನಿಲ್ಲಿಸಲು ಸೂಕ್ತ ರ್ಯಾಪ್ ವ್ಯವಸ್ಥೆ ಮಾಡುವಂತೆ ಹಾಗೂ ಪ್ರವಾಸೋದ್ಯಮ ಉದ್ದೇಶದಿಂದ ಗೋವಾ- ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಿಳ್ ಮಾತಿ ಕಡಲ ತೀರವನ್ನು ಅಭಿವೃದ್ಧಿಪಡಿಸಲು ಈ ಹಿಂದೆ ನಬಾರ್ಡ್ನಲ್ಲಿ ಓಂ ಆಕಾರದಲ್ಲಿ ನೀಲನಕ್ಷೆ ಸಿದ್ಧಪಡಿಸಿ ಅನುಮೋದನೆ ಪಡೆದಿದ್ದರೂ, ಕಾಮಗಾರಿ ಆರಂಭವಾಗದೇ ಹಾಗೇ ಉಳಿದುಕೊಂಡಿದ್ದು, ಈಗ ಪುನಃ ತಿಳ್ಮಾತಿ ಸಂಪರ್ಕಿಸಲು ತೂಗು ಸೇತುವೆ ಸೇರಿದಂತೆ ಈ ಹಿಂದೆ ರೂಪಿಸಿರುವ ನೀಲನಕ್ಷೆಯಂತೆ ಕಾಮಗಾರಿ ಕೈಗೊಳ್ಳಲು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೇರವಡಿಯ ಸೇತುವೆ ಹಾಗೂ ಗೋಕರ್ಣ ಮತ್ತು ಅಂಕೋಲಾ ಸಂಪರ್ಕಿಸುವ ಗಂಗವಾಳಿ ನದಿಗೆ ಅಡ್ಡಲಾಗಿ ಮಂಜುಗುಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನಿಶ್ಚಲ್ ನರೋನ್ಹಾ, ಬಂದರು ಇಲಾಖೆ ಇಇ ರಾಜಕುಮಾರ್ ಮೊದಲಾದವರು ಇದ್ದರು.ತಾಲೂಕಿನ ಕದ್ರಾ ಜಲಾಶಯ ತುಂಬಿದ ಹಿನ್ನಲೆಯಲ್ಲಿ ಶಾಸಕ ಸತೀಶ ಸೈಲ್ ಬಾಗಿನ ಅರ್ಪಿಸಿದರು.
ಈ ಹಿಂದೆಯಾದ ಘಟನೆಗಳು ಮರುಕಳಿಸದಂತೆ ಮಹಾಮಾಯಿ ಮತ್ತು ಕ್ಷೇತ್ರದ ದೇವತೆಗಳಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. ನಂತರ ಡ್ಯಾಂನಿಂದ 4 ಗೇಟ್ ಮೂಲಕ ನೀರು ಬಿಡುಗಡೆ ವೀಕ್ಷಣೆ ಮಾಡಿದರು.