ಸಾರಾಂಶ
ನರಸಿಂಹರಾಜಪುರ, ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನದ ಸಮಗ್ರ ಅನುಷ್ಠಾನವೇ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಖ್ಯ ಉದ್ದೇಶ ಎಂದು ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಹಾಗೂ ಕಡಹಿನಬೈಲು ಗ್ರಾಪಂ ನೋಡಲ್ ಅಧಿಕಾರಿ ರಮೇಶ್ ಹೇಳಿದರು.
ಕಡಹಿನಬೈಲು ಗ್ರಾಮ ಪಂಚಾಯಿತಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನದ ಸಮಗ್ರ ಅನುಷ್ಠಾನವೇ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಮುಖ್ಯ ಉದ್ದೇಶ ಎಂದು ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಹಾಗೂ ಕಡಹಿನಬೈಲು ಗ್ರಾಪಂ ನೋಡಲ್ ಅಧಿಕಾರಿ ರಮೇಶ್ ಹೇಳಿದರು.
ಸೋಮವಾರ ತಾಲೂಕಿನ ಕಡಹಿನಬೈಲು ಗ್ರಾಪಂನಲ್ಲಿ ನಡೆದ ೨೦೨೩-೨೪ ನೇ ಸಾಲಿನ ಸಾಮಾಜಿಕ ಪರಿಶೋಧನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಸ್ಥರಿಗೆ ಗ್ರಾಮಸಭೆ ಎಂದಾಕ್ಷಣ ಸಾಮಾನ್ಯ ಗ್ರಾಮಸಭೆಯೆಂದು ಭಾವಿಸಿ ಅವರ ಸಮಸ್ಯೆ ಚರ್ಚಿಸಲು ಬರುತ್ತಾರೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರದ ವ್ಯಾಪ್ತಿಯಲ್ಲಿ ಅನೇಕ ವಿಷಯಗಳಿಗೆ ಸಂಬಂಧ ಪಟ್ಟಂತೆ ಗ್ರಾಮ ಸಭೆಗಳು ನಡೆಯುತ್ತವೆ. ಆಯಾಯ ವಿಷಯ, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾತ್ರ ಚರ್ಚೆ, ತೀರ್ಮಾನಗಳ ನಡವಳಿಯಾಗುತ್ತವೆ. ಎಲ್ಲಾ ಜನರು ಸರ್ಕಾರದ ವಿವಿಧ ಯೋಜನೆಗಳ ಗ್ರಾಮಸಭೆಗಳಲ್ಲಿ ಭಾಗವಹಿಸಿ ಅದರ ಸದುಪಯೋಗ ಪಡೆಯ ಬಹುದು ಎಂದರು.ಸಾಮಾಜಿಕ ಪರಿಶೋಧನಾ ಅನುಷ್ಠಾನಾಧಿಕಾರಿ ಸುಶ್ಮಿತಾ ಮಾತನಾಡಿ, ಈ ಬಾರಿ ಗ್ರಾಪಂ ೧೫ ನೇ ಹಣಕಾಸು ಯೋಜನೆ, ಜಿಪಂ ಹಾಗೂ ತಾಪಂ ಅನುದಾನದ ಸದ್ಬಳಕೆ ಹಾಗೂ ಕೈಗೊಂಡ ಕಾಮಗಾರಿಗಳ ಪರಿಶೋಧನೆ ಮಾಡ ಲಾಗುವುದು. ಗ್ರಾಮಸ್ಥರ ಮುಂದೆ ಸಮಗ್ರವಾಗಿ ಮಾಹಿತಿ ನೀಡಿ ಆಕ್ಷೇಪಣೆ, ತಕರಾರು ಇದ್ದಲ್ಲಿ ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪಾರದರ್ಶಕ ಹಾಗೂ ಶುದ್ಧ ಆಡಳಿತದ ಸಲುವಾಗಿ ಈ ಪರಿಶೋಧನಾ ಸಭೆ ನಡೆಸಲಾಗುತ್ತದೆ. ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಕೆಲವು ಕಾಮಗಾರಿಗಳ ಸ್ಥಳಗಳಲ್ಲಿ ನಾಮಫಲಕ ಅಳವಡಿಸಿಲ್ಲ, ನಾಮಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದರು.ಗ್ರಾಪಂ ಉಪಾಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಕೆಲ ಗ್ರಾಮಸ್ಥರು ಬೀದಿ ದೀಪದ ನಿರ್ವಹಣೆ ಹಾಗೂ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಉತ್ತಮ ರೀತಿಯಲ್ಲಿ ಚರ್ಚೆ ನಡೆಸಿದ್ದಾರೆ. ಗ್ರಾಪಂನಲ್ಲಿ ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಡದಂತೆ, ಎಲ್ಲಾ ಯೋಜನೆ ಕಾಮಗಾರಿ ನಿರ್ವಹಿಸಲಾಗಿದೆ ಎಂದರು.ಸಭೆಯಲ್ಲಿ ಜೆಜೆಎಂ ಹಾಗೂ ಸ್ವಚ್ಛ ಭಾರತ್ ಮಿಷನ್ ಸಮುದಾಯ ಸಂಘಟಕ ನಾಗೇಶ್ ಹಾಗೂ ರಿಜ್ಮಾ ಮಳೆ ನೀರು ಕೊಯ್ಲು ಹಾಗೂ ಬದು ನೀರು ನಿರ್ವಹಣೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್, ಸದಸ್ಯರಾದ ಚಂದ್ರಶೇಖರ್, ರವೀಂದ್ರ,ಅಶ್ವಿನಿ, ವಾಣಿ ನರೇಂದ್ರ, ಪೂರ್ಣಿಮಾ, ಲಿಲ್ಲಿ ಮಾತುಕುಟ್ಟಿ, ಪಿಡಿಒ ವಿಂದ್ಯಾ, ಆರ್.ರಂಜಿತಾ, ತೇಜಸ್ವಿನಿ,ನಿಷಾ, ಆನೀಸ್, ರಂಜಿತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಫೋಟೋ:- ೨೯ ಎನ್.ಆರ್.ಪಿ. ೩ಎನ್.ಆರ್.ಪುರ ತಾಲೂಕು ಕಡಹಿನಬೈಲು ಗ್ರಾಪಂನಲ್ಲಿ ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ವಿವಿಧ ಕಾಮಗಾರಿಗಳ ಕಡತ ಪರಿಶೀಲಿಸಲಾಯಿತು. ಶೈಲಾ ಮಹೇಶ್, ಸುನಿಲ್ಕುಮಾರ್,ರವೀಂದ್ರ,ಚಂದ್ರಶೇಖರ್,ವಾಣಿ ನರೇಂದ್ರ,ಅಶ್ವಿನಿ, ಪೂರ್ಣಿಮಾ, ಲಿಲ್ಲಿಮಾತುಕುಟ್ಟಿ, ವಿಂದ್ಯಾ ಇದ್ದರು.