ರಟ್ಟೀಹಳ್ಳಿ: ಕಳೆದ 2009ರಿಂದ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗಾಗಿ ಜಿಲ್ಲೆಯ ಅನೇಕ ಮುಖಂಡರ ಹೋರಾಟದ ಫಲವಾಗಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಂಜೂರಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ ಸಂತಸ ವ್ಯಕ್ತಪಡಿಸಿದರು. ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಬುಧವಾರ ನಡೆದ ಟ್ರ್ಯಾಕ್ಟರ್ ಹಾಗೂ ವಿವಿಧ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಗಾಗಿ ಸಂಸದ ಬಸವರಾಜ ಬೊಮ್ಮಾಯಿ, ದಿ. ಸಿ.ಎಂ. ಉದಾಸಿ, ಬಿ.ಜಿ. ಬಣಕಾರ ಹೋರಾಟ ಮಾಡಿದ್ದರೂ ಅನೇಕ ಅಡಚಣೆ ಉಂಟಾಗಿತ್ತು. ನಬಾರ್ಡ್‌ ಪರವಾನಗಿ ಕೊಟ್ಟರೆ ರಿಸರ್ವ ಬ್ಯಾಂಕ್ ಪರವಾನಗಿ ನೀಡುತ್ತಿರಲಿಲ್ಲ, ಎಲ್ಲರೂ ಪರವಾನಗಿ ಕೊಟ್ಟಂತ ಸಂದರ್ಭದಲ್ಲಿ ರಾಜ್ಯ ಸರಕಾರ 25 ಕೋಟಿ ಹಣ ತುಂಬದ ಕಾರಣ ಅಲ್ಲೂ ಕೈ ತಪ್ಪಿ ಹೋಗಿತ್ತು, ಆದರೆ ನಮ್ಮೆಲ್ಲರ ಹೋರಾಟದ ಸೌಭಾಗ್ಯದ ಫಲವಾಗಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಜೀ ಅವರು ರಾಜ್ಯದಲ್ಲಿ 10 ಡಿಸಿಸಿ ಬ್ಯಾಂಕ್ ಮಂಜೂರು ಮಾಡಿದ್ದು, ಅದರಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಗೆ ಅವಕಾಶ ಸಿಕ್ಕಿದ್ದು, ಈ ಭಾಗದ ಸಹಕಾರಿ ಕ್ಷೇತ್ರಕ್ಕೆ ಆನೆ ಬಲ ಬಂದಂತಾಗಿದೆ. ಆದ್ದರಿಂದ ಜಿಲ್ಲೆಯ ಡಿಸಿಸಿ ಬ್ಯಾಂಕ್‍ನ್ನು ರಾಜ್ಯದಲ್ಲೇ ಮಾದರಿ ಬ್ಯಾಂಕ್‍ನ್ನಾಗಿ ಅಭಿವೃದ್ಧಿ ಪಡಿಸೋಣ ಎಂದರು.

ಈ ಹಿಂದೆ ಕೆಸಿಸಿ ಬ್ಯಾಂಕ್‍ನಿಂದ ಶೇ 11 ಬಡ್ಡಿದರಲ್ಲಿ ಕಿಸಾನ್ ಬೆಳೆ ಸಾಲ ನೀಡಲಾಗುತ್ತಿತ್ತು. ಹೆಚ್ಚು ಬಡ್ಡಿದರವಾಗುವ ಕಾರಣ ರೈತರಿಗೂ ಸಹಕಾರಿ ಸಂಘಗಳಿಗೆ ಸಾಕಷ್ಟು ಹೊರೆಯಾಗಿತ್ತು. ಆದ್ದರಿಂದ ಪ್ರಸ್ತುತ ಡಿಸಿಸಿ ಬ್ಯಾಂಕ್‍ನಿಂದ ಕೇವಲ 3% ಬಡ್ಡಿದರದಲ್ಲಿ ಎನ್.ಎಸ್.ಎಸ್ ಲೋನ್, ಅಡಕೆ ಸಾಲ, ಟ್ರ್ಯಾಕ್ಟರ್ ಸಾಲ, ಭೂ ಅಭಿವೃದ್ದಿ ಯೋಜನೆಯಡಿ ಎಕರೆಗೆ 80 ಸಾವಿರ ಸಾಲ, ನೀರಾವರಿ ಜಮೀನುಗಳಿಗೆ 0% ಬಡ್ಡಿದರದಲ್ಲಿ 1.5 ಲಕ್ಷ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಹೀಗೆ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸಹಕಾರಿ ಸಂಘದಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಸಾಲ ಪಡೆದ ರೈತರು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಿ ಆ ಮೂಲಕ ಸರ್ವರು ಅಭಿವೃದ್ದಿ ಪಥದತ್ತ ಸಾಗೋಣ ಎಂದು ಸಾಲ ಪಡೆದ ಫಲಾನುಭವಿಗಳಿಗೆ ಶುಭ ಹಾರೈಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂದೀಪ್ ಪಾಟೀಲ್, ಸದಸ್ಯ ವಾಸಣ್ಣ ದ್ಯಾವಕ್ಕಳವರ, ಗುಡ್ಡನಗೌಡ ಪಾಟೀಲ್, ಗಣೇಶ ಅಡ್ಮನಿ, ದೊಡ್ಡಗೌಡ ಪಾಟೀಲ್, ಪಟ್ಟಣ ಪಂಚಾಯತ್ ಸದಸ್ಯ ವೀರನಗೌಡ ಪ್ಯಾಟಿಗೌಡ್ರ, ಪಿ.ಡಿ. ಬಸನಗೌಡ್ರ, ಕಾರ್ಯದರ್ಶಿ ಚಂದ್ರಪ್ಪ ಮಳಗೊಂಡರ್, ಮಾಲತೇಶ ಪಾಟೀಲ್, ರಾಜು ಬೆನ್ನೂರ, ಪಂಚಾಕ್ಷರಯ್ಯ ಕಬ್ಬಿಣಕಂತಿಮಠ, ದಾನೇಶ ಬಸರಿಹಳ್ಳಿ, ಬಸನಗೌಡ ಪಾಟೀಲ್, ಕಪಿಲ್ ಪುಜಾರ್, ಕೆಸಿಸಿ ಬ್ಯಾಂಕ್ ಮ್ಯಾನೇಜರ್ ಜಗದೀಶ ಬಾತಿ, ಇಂದಿರಾ ಹಲಗೇರಿ, ವೀರಭಸಪ್ಪ ಅರ್ಕಾಚಾರಿ ಇದ್ದರು.