ಸಾರಾಂಶ
ಮಸಣ ಕಾರ್ಮಿಕರೆಂದು ಸರ್ಕಾರಿದಿಂದ ಅಧಿಕೃತವಾಗಿ ಗುರುತಿಸಬೇಕು, ಕೂಡಲೇ ಗಣತಿ ಮಾಡಬೇಕು, 45ವರ್ಷ ವಯಸ್ಸಾದವರಿಗೆ ಮಾಸಾಶನ ನೀಡಬೇಕು.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಸ್ಮಶಾನಕ್ಕೆ ಒಬ್ಬ ಕಾವಲಗಾರನ ನೇಮಕ, ಸ್ಮಶಾನ ಕಾರ್ಮಿಕರಿಗೆ 5 ಸಾವಿರ ಮಾಶಾಸನ, ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪತ್ರ ಚಳುವಳಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಸ್ಮಶಾನ ಕಾರ್ಮಿಕರು ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸ್ಮಶಾನ ಕಾರ್ಮಿಕರ ಜಿಲ್ಲಾ ಸಂಚಾಲಕ ಕೆ. ಮುನಿಯಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಸ್ಮಶಾನಗಳಲ್ಲಿ ಶವ ಹೂಳುವ, ಸುಡುವ, ಹಲಗೆ ಬಾರಿಸುವ ಮತ್ತು ಸ್ಮಶಾನಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಸಣ ಕಾರ್ಮಿಕರು ಇದುವರೆಗೂ ಉಚಿತವಾಗಿ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿ ನೂರಾರು ಕುಟುಂಬಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿವೆ. ಇದನ್ನು ಸಾರ್ವಜನಿಕರ ಸೇವೆಯೆಂದು ಇದುವರೆಗೂ ಯಾರೂ ಗುರುತಿಸಿಲ್ಲ. ಆದ್ದರಿಂದ ಉಚಿತ ಕೆಲಸದಿಂದ ಮುಕ್ತಿಗೊಳಿಸಿ ವೇತನ ನೀಡುವಂತೆ ಆಗ್ರಹಿಸಿದರು.
ಮಸಣ ಕಾರ್ಮಿಕರೆಂದು ಸರ್ಕಾರಿದಿಂದ ಅಧಿಕೃತವಾಗಿ ಗುರುತಿಸಬೇಕು, ಕೂಡಲೇ ಗಣತಿ ಮಾಡಬೇಕು, 45ವರ್ಷ ವಯಸ್ಸಾದವರಿಗೆ ಮಾಸಾಶನ ನೀಡಬೇಕು. ಸ್ಮಶಾನ ಕಾರ್ಮಿಕರಿಗೆ ನಿವೇಶನ, ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ, ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ ಸೌಲಭ್ಯ ಕಲ್ಪಿಸುವಂತೆ ಹಾಗೂ ತಮಟೆ ಕಲಾವಿದರನ್ನು ಗ್ರಾಪಂ ನೌಕರರೆಂದು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.ಮಸಣ ಸಂಘಟನೆಯ ಸುಬ್ಬರಾಯಪ್ಪ, ನರಸಿಂಹಪ್ಪ, ಪರಗೋಡು ನರಸಿಂಹಪ್ಪ, ಬಾಬು, ಮುನಿಯಪ್ಪ, ನರಸಮ್ಮ, ಆದಿನಾರಾಯಣಪ್ಪ, ಶ್ರೀರಾಮಪ್ಪ, ಕೃಷ್ಣಪ್ಪ, ವೆಂಕಟೇಶ್ ಮೂರ್ತಿ, ನಾರಾಯಣ ಮತ್ತಿತರರು ಇದ್ದರು.