ಸಾರಾಂಶ
ಕನ್ನಡಪ್ರಭ ವಾರ್ತೆ ಕೊಟ್ಟೂರು
ಹ.ಬೊ.ಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಎಲ್ಲ ಹಂತದಲ್ಲಿನ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಯಾರೊಬ್ಬರೂ ಶಿಕ್ಷಣದಿಂದ ವಂಚತರಾಗಬಾರದು ಎಂದು ಶಾಸಕ ಕೆ. ನೇಮರಾಜ ನಾಯ್ಕ ಹೇಳಿದರು.ಪಟ್ಟಣದ ಉಜ್ಜಯಿನಿ ರಸ್ತೆಯ ದಕ್ಷಿಣಾಮೂರ್ತಿ ಲೇಔಟ್ನಲ್ಲಿ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಗುರುವಾರ ಮಾತನಾಡಿದರು.
ಕ್ಷೇತ್ರದಲ್ಲಿನ ಶಾಲೆ ಕಾಲೇಜುಗಳಿಗೆ ಹೊಸ ಕಟ್ಟಡ, ದುರಸ್ತಿ ಸೇರಿ ಇತರೆ ಅಭಿವೃದ್ಧಿಗಾಗಿ ಎರಡು ವರ್ಷಗಳಲ್ಲಿ ₹60 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ದಲಿತರ ಹಾಗೂ ಹಿಂದುಳಿದ ವರ್ಗದವರ ಏಳ್ಗಿಗೆಗಾಗಿ ಶ್ರಮಿಸಿದ್ದ ಡಿ.ದೇವರಾಜ ಅರಸು ಹೆಸರಿನಲ್ಲಿ ನಿರ್ಮಾಣವಾಗುವ ವಿದ್ಯಾರ್ಥಿ ನಿಲಯ ನಿಗದಿತ ಅವಧಿಯೊಳಗೆ ಗುಣಮಟ್ಟದಲ್ಲಿ ನಿರ್ಮಿಸಬೇಕು. ಆದಷ್ಟು ಶೀಘ್ರದಲ್ಲಿ ಬಾಡಿಗೆ ಕಟ್ಟಡದಲ್ಲಿನ ವಿದ್ಯಾರ್ಥಿಗಳು ಸ್ವಂತ ಕಟ್ಟಡಕ್ಕೆ ಬರಬೇಕು ಎಂದರು.ಹಿಂದಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಕರ್ಯ ಇರಲಿಲ್ಲ. ಆದರೆ ಈಗ ಸರ್ಕಾರ ಎಲ್ಲ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಊಟ, ವಸತಿ, ಸೌಕರ್ಯಗಳನ್ನು ಉತ್ತಮವಾಗಿ ಕಲ್ಪಿಸುತ್ತಿದೆ. ಹಾಸ್ಟೆಲ್ನಲ್ಲಿದ್ದು ಶಿಕ್ಷಣ ಪಡೆವ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ, ಎಲ್ಲ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೊಟ್ಟೂರು ಶಿಕ್ಷಣ ಕೇಂದ್ರವಾಗಿರುವುದರಿಂದ ಹೆಚ್ಚಿನ ಬಡ ಮಕ್ಕಳು ಇಲ್ಲಿನ ಶಾಲಾ-ಕಾಲೇಜಿಗೆ ಬರುತ್ತಾರೆ. ಕಾಲೇಜು ಶಿಕ್ಷಣದ ವಿದ್ಯಾರ್ಥಿನಿಯರಿಗೆ ನಿಲಯದ ಅವಶ್ಯತೆಯಿದ್ದು, ಶೀಘ್ರವೇ ಅದನ್ನು ಮಂಜೂರು ಮಾಡಿಸುವುದಾಗಿ ಹೇಳಿದರು.
ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ ಮಾತನಾಡಿ, ತಂದೆ-ತಾಯಿ ಮನೆಯಿಂದ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಂತೆ ಜವಾಬ್ದಾರಿಯಿಂದ ಆಯಾ ಹಾಸ್ಟೆಲ್ ವ್ಯವಸ್ಥಾಪಕರು ನೋಡಿಕೊಳ್ಳಬೇಕು. ಮಕ್ಕಳು ಹೆಚ್ಚು ಹೊರ ಹೋಗದೇ ಓದುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಪಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ್ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶಕ್ಕೆ ಸರ್ಕಾರ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದ್ದು, ಯಾರೂ ಶಿಕ್ಷಣದಿಂದ ದೂರ ಉಳಿಯಬಾರದು ಎಂದರು.
ತಾಲೂಕು ಹಿಂ.ವ.ಕ. ಇಲಾಖೆ ಅಧಿಕಾರಿ ಶ್ಯಾಮಪ್ಪ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ ಜಿ.ಕೆ. ಅಮರೇಶ, ತಾಪಂ ಇಒ ಡಾ. ಆನಂದಕುಮಾರ್, ಇಲಾಖೆಯ ಜಿಲ್ಲಾ ಅಧಿಕಾರಿ ಶಶಿಕಲಾ, ಹ.ಬೊ.ಹಳ್ಳಿಯ ಕೊಟ್ರೇಶ್ನಾಯಕ್, ಇಲಾಖೆಯ ವಿಸ್ತರಣಾಧಿಕಾರಿ ಅಹಮ್ಮದ್ ಸಾಬ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಿದ್ದಿ ಮರಿಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಮುಖಂಡ ಎಂಎಂಜೆ ಶೋಬಿತ್, ಪಪಂ ಸದಸ್ಯ ಬಾವಿಕಟ್ಟಿ ಶಿವಾನಂದ, ಮುಖಂಡರಾದ ಗಂಗಮನಹಳ್ಳಿ ಬಸವರಾಜ, ಗುರು, ಎಇ ಜಗದೀಶ್, ಗುತ್ತಿಗೆದಾರ ಮಂಜುನಾಥ, ಇಲಾಖೆಯವರಾದ ಕುಮಾರಸ್ವಾಮಿ, ಬಸವರಾಜ, ಕುಬೇರ, ಶಿವಲೀಲಾ, ಮಲ್ಲಪ್ಪ, ರಾಚಪ್ಪ, ಎಸ್.ವಿ. ಸುಮಾ, ಸಹನ, ಕೊಟ್ರಮ್ಮ, ಶೃತಿ, ಪ್ರಕಾಶ ಇತರರು ಇದ್ದರು.