ಕಾರ್ಗಿಲ್‌ ಯುದ್ಧದಲ್ಲಿ ಯೋಧರ ಬಲಿದಾನ ಶ್ರೇಷ್ಠ

| Published : Jul 27 2024, 12:53 AM IST

ಸಾರಾಂಶ

25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ನೆನಪಿನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹುತಾತ್ಮ ಯೋಧರಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಬಲಿದಾನ ಶ್ರೇಷ್ಠ ದಾನ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಶುಕ್ರವಾರ ನಗರದ ಸೈನಿಕ ಪಾರ್ಕ್‌ನಲ್ಲಿ ಆಯೋಜಿಸಿದ್ದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ,

ಶಿವಮೊಗ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೈನ್ಯದಲ್ಲಿ ಹೋರಾಡಿದವರು ಇದ್ದಾರೆ, ನಿವೃತ್ತ ಸೈನಿಕರಿದ್ದಾರೆ. ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿಯೊಬ್ಬ ಸೈನಿಕನ ಅನುಭವ ಕೇಳಿದಾಗ ರೋಮಾಂಚನವಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಕುಟುಂಬಗಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಬಲಿದಾನ ಮತ್ತು ತ್ಯಾಗ ನಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ದೇಶದ ಜನರಿಗೆ ಇಂದು ಮರೆಯಲಾಗದ ದಿನ ತಮ್ಮ ಶೌರ್ಯ ಪ್ರದರ್ಶನವನ್ನು ಮಾಡಿ ಕಾರ್ಗಿಲ್ ಪ್ರದೇಶವನ್ನು ಶತ್ರುಗಳ ಕೈಯಿಂದ ವಶಕ್ಕೆ ಪಡೆದ ದಿನವಾಗಿದ್ದು, ದೇಶದ ಹೆಮ್ಮೆಯ ಪ್ರತೀಕದ ದಿನವಾಗಿದೆ ಎಂದು ಹೇಳಿದರು.

ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಹಿರೇಮಠ್ ಮಾತನಾಡಿ, ಸೈನ್ಯಕ್ಕೆ ಸೇರಲು ಹಿಂದೇಟು ಹಾಕಬೇಡಿ. ಸೈನಿಕರು ತಮ್ಮ ಸ್ವಂತ ಆಸೆ ಆಕಾಂಕ್ಷೆ ಗಳನ್ನು ತ್ಯಾಗ ಮಾಡಿ, ಗಡಿಯನ್ನು ರಕ್ಷಿಸಿ ನಮಗೆಲ್ಲ ಶಾಂತಿ ಯಿಂದ ಜೀವಿಸುವಂತೆ ನೋಡಿಕೊಳ್ಳುತ್ತಾರೆ. ಅವರ ತ್ಯಾಗಕ್ಕೆ ನಾವು ಏನು ಕೊಟ್ಟರೂ ಸಮವಾಗು ವುದಿಲ್ಲ. ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಕಾಣಿಕೆ ಹಾಕಿ ಗಂಟೆಗಟ್ಟಲೆ ಕಾಯುತ್ತೇವೆ. ಆದರೆ, ಸೈನ್ಯದ ಬಗ್ಗೆ ಕೇಳಲು ನಮಗೆ ಪುರುಸೊತ್ತಿಲ್ಲ. ದಯವಿಟ್ಟು ಸಾರ್ವ ಜನಿಕರು ಜೀವನದಲ್ಲಿ ಒಮ್ಮೆಯಾದರೂ ಕಾರ್ಗಿಲ್‌ಗೆ ಹೋಗಿ ಬಂದರೆ ಸೈನಿಕನ ಜೀವನ ಅರ್ಥವಾಗುತ್ತದೆ ಎಂದು ತಿಳಿಸಿದರು.

ಅಗ್ನಿವೀರ್ ಯೋಜನೆ ಯಾರೂ ಏನೇ ಟೀಕೆ ಮಾಡಲಿ, ಆದರೆ ಯುವಕರಲ್ಲಿ ದೇಶಾಭಿಮಾನ ಮತ್ತು ಶಿಸ್ತನ್ನು ಬೆಳೆಸಲು ಅದು ಪರಿಣಾಮಕಾರಿಯಾಗುತ್ತದೆ. ಸಾಮಾಜಿಕ ಪ್ರೇಮ ಮೂಡಿಸುತ್ತದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣರೆಡ್ಡಿ, ಕರ್ನಲ್ ಜಗದೀಶ್, ಕರ್ನಲ್ ಆನಂದ್‌ರಾವ್, ಉಮೇಶ್‌ಜಾಧವ್ ಮತ್ತಿತರರಿದ್ದರು.ಯುದ್ಧ ಗೆದ್ದ ಟ್ಯಾಂಕ್‌ ತಂದ್ರೆ ಸಾಕೇ? ಸೂಕ್ತ ಜಾಗ ಕಲ್ಪಿಸಿ

ಶಿವಮೊಗ್ಗ ಜಿಲ್ಲೆಗೆ ಹಿರಿಯ ಮಾಜಿ ಸೈನಿಕರು ಭಾರಿ ಹೋರಾಟ ಮಾಡಿ, ಯುದ್ಧ ಗೆದ್ದ ಟ್ಯಾಂಕ್‌ನ್ನು ತಂದಿರಿಸಿದ್ದಾರೆ. ಆದರೆ, ಅದಕ್ಕೆ ಸೂಕ್ತ ಜಾಗ ಇನ್ನೂ ನೀಡಿಲ್ಲ. ಈಗ ಇನ್ನೊಂದು ಏರ್‌ಕ್ರಾಪ್ಟ್ ಬರುತ್ತಿದೆ. ಆದರೆ ಅದನ್ನು ತಂದು ಮೂಲೆ ಗುಂಪು ಮಾಡಬೇಡಿ, ದಯವಿಟ್ಟು ಅದಕ್ಕೆ ಸೂಕ್ತ ಸ್ಥಾನಮಾನ ನೀಡಿ, ಯುವಕರಲ್ಲಿ ದೇಶ ಪ್ರೇಮವನ್ನು ಬೆಳೆಸಿ ಎಂದು ಸೈನಿಕ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಹಿರೇಮಠ್ ಕಿವಿಮಾತು ಹೇಳಿದರು.