ಯಾವುದೇ ಮಹೋನ್ನತ ಕಾರ್ಯಗಳು ನಡೆಯಬೇಕಾದರೆ ಮಹಾ ಮುಹೂರ್ತ ಕೂಡಿ ಬರಬೇಕು. ಅಂತಹ ಮಹಾ ಕಾಲ ಕೂಡಿ ಬಂದಾಗ ಮಾತ್ರ ಸಹಸ್ರಮಾನಗಳ ಕಾಲ ಉಳಿಯುವ ಶಾಶ್ವತ ಸಂಗತಿಗಳು ಸಂಪನ್ನಗೊಳ್ಳಲಿದೆ ಎಂದು ಲೇಖಕ ಹಾಗೂ ಶ್ರೀರಾಮಚಂದ್ರಾಪುರಮಠದ ಶಾಸನ ತಂತ್ರದ ಅಧ್ಯಕ್ಷರಾದ ಮೋಹನ್ ಭಾಸ್ಕರ ಹೆಗಡೆ ಹೇಳಿದರು.
ಸಾಗರ: ಯಾವುದೇ ಮಹೋನ್ನತ ಕಾರ್ಯಗಳು ನಡೆಯಬೇಕಾದರೆ ಮಹಾ ಮುಹೂರ್ತ ಕೂಡಿ ಬರಬೇಕು. ಅಂತಹ ಮಹಾ ಕಾಲ ಕೂಡಿ ಬಂದಾಗ ಮಾತ್ರ ಸಹಸ್ರಮಾನಗಳ ಕಾಲ ಉಳಿಯುವ ಶಾಶ್ವತ ಸಂಗತಿಗಳು ಸಂಪನ್ನಗೊಳ್ಳಲಿದೆ ಎಂದು ಲೇಖಕ ಹಾಗೂ ಶ್ರೀರಾಮಚಂದ್ರಾಪುರಮಠದ ಶಾಸನ ತಂತ್ರದ ಅಧ್ಯಕ್ಷರಾದ ಮೋಹನ್ ಭಾಸ್ಕರ ಹೆಗಡೆ ಹೇಳಿದರು.
ಪಟ್ಟಣದ ಶ್ರೀರಾಘವೇಶ್ವರ ಭವನದಲ್ಲಿ ಹವ್ಯಕ ಮಹಾಮಂಡಲದಿಂದ ಸಾಗರ ಹವ್ಯಕ ಮಂಡಲದ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀರಾಮಸಾನ್ನಿಧ್ಯ ಶಿಲಾನ್ಯಾಸ ವಿಶೇಷತೆ ಏಕೆ, ಹೇಗೆ, ಮಹತ್ವ ಕುರಿತ ಸಭೆಯಲ್ಲಿ ಪುನರ್ನಿರ್ಮಾಣದ ಮಾಹಿತಿ ಪತ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಇದೀಗ ಹೊಸನಗರ ರಾಮಚಂದ್ರಾಪುರಮಠದಲ್ಲಿ ಪ್ರಧಾನಮಠದ ಪುನರ್ನಿರ್ಮಾಣದ ಶ್ರೀರಾಮಸಾನ್ನಿಧ್ಯದ ಶಿಲಾನ್ಯಾಸ ಎನ್ನುವುದು ಅಂತಹ ವಿಶೇಷತೆಗಳಲ್ಲಿ ಒಂದು ಎಂದರು.ಶರಾವತಿ ತೀರದ ಮತ್ತು ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ, ಶ್ರೀರಾಮ ಸಂಚರಿಸಿರುವ ಜಾಗ ಎನ್ನುವ ಪೌರಾಣಿಕ ಹಿನ್ನೆಲೆಯ ಪುಣ್ಯ ಕ್ಷೇತ್ರದಲ್ಲಿ ದೇವಾಲಯಗಳ ಸಮುಚ್ಚಯಗಳನ್ನು ಒಳಗೊಂಡ ಪ್ರಧಾನಮಠದ ಪುನರ್ನಿರ್ಮಾಣ ಎನ್ನುವುದು ನಮ್ಮ ಕಾಲಘಟ್ಟದಲ್ಲಿ ನಡೆಯುತ್ತಿರುವುದು ನಮ್ಮ ಯೋಗ. ಆ ಕಾರಣಕ್ಕಾಗಿಯೇ ಪಾಲ್ಗೊಂಡು ಧನ್ಯತೆ ಪಡೆಯುವುದು ಪ್ರತಿಯೊಬ್ಬ ಆಸ್ತಿಕನಿಗೆ ದೊರೆತ ಪುಣ್ಯಾವಕಾಶ ಎಂದರು.
ಅಧ್ಯಕ್ಷತೆ ವಹಿಸಿದ್ದ ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು ಮಾತನಾಡಿ, ನಮ್ಮೆಲ್ಲರ ಶ್ರದ್ದಾ ಕೇಂದ್ರ ರಾಮಚಂದ್ರಾಪುರಮಠ. ಅಲ್ಲಿ ನಮಗಿರುವುದು ಭಾವನಾತ್ಮಕವಾದ ಸಂಬಂಧ. ಅಂತಹ ಶ್ರದ್ದಾಕೇಂದ್ರದಲ್ಲಿಯ ವಿಶೇಷ ಕಾರ್ಯದಲ್ಲಿ ನಾವು ಸಾಕ್ಷಿಗಳಾಗಿರಲೇಬೇಕು ಎಂದರು.ಪುನರ್ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗಣಪತಿ ಭಟ್ ಜಟ್ಟಿಮನೆ ಫೆ.೨೬ರ ಶಿಲಾನ್ಯಾಸ ಕಾರ್ಯಕ್ರಮದ ವಿವರ ನೀಡಿದರು. ಸಮರ್ಥ ಭಟ್ ಧಾರ್ಮಿಕ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಪ್ರವೀಣ್ ಭೀಮನಕೋಣೆ, ತಿಮ್ಮಪ್ಪ, ಹಿರಿಯರಾದ ಅ.ಪು. ನಾರಾಯಣಪ್ಪ, ಕೆ.ಎನ್. ಶ್ರೀಧರ, ಸಾಗರ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರು, ಸುಬ್ರಮಣ್ಯ ಚಿಪ್ಲಿ, ಪ್ರಸನ್ನಹೆಗಡೆ ಕೆರೆಕೈ, ರಮೇಶ್ ಹೆಗಡೆ ಗುಂಡೂಮನೆ ಇದ್ದರು.