ಸಾರಾಂಶ
ಶನಿವಾರ, ಉಡುಪಿ ಜಿಲ್ಲಾ ಕೃಷಿಕ ಸಂಘವು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಈಸೀ ಲೈಫ್ ಎಂಟರ್ಪ್ರೈಸಸ್, ಎಸ್.ಆರ್.ಕೆ.ಲ್ಯಾಡರ್ಸ್ ಸಂಯುಕ್ತ ಆಶ್ರಯದಲ್ಲಿ ನಗರದ ಶಾರದಾ ಮಂಟಪದಲ್ಲಿ ರೈತ ಸಮಾವೇಶ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ರೈತರು ಹೊಸ ತಾಂತ್ರಿಕತೆ ಬಳಸಿಕೊಂಡು ಕೃಷಿಯನ್ನು ಹೆಚ್ಚು ಲಾಭದಾಯಕಗೊಳಿಸಬೇಕು ಎಂದು ಮಂಗಳೂರಿನ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಎಸ್. ನಾಗರಾಜ ಕೆದ್ಲಾಯ ಅಭಿಪ್ರಾಯಪಟ್ಟಿದ್ದಾರೆ.ಶನಿವಾರ, ಉಡುಪಿ ಜಿಲ್ಲಾ ಕೃಷಿಕ ಸಂಘವು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಈಸೀ ಲೈಫ್ ಎಂಟರ್ಪ್ರೈಸಸ್, ಎಸ್.ಆರ್.ಕೆ.ಲ್ಯಾಡರ್ಸ್ ಸಂಯುಕ್ತ ಆಶ್ರಯದಲ್ಲಿ ನಗರದ ಶಾರದಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ರೈತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಾ ನಂತರ ಕೃಷಿ ಕ್ಷೇತ್ರವು ಸಾಕಷ್ಟು ಬೆಳವಣಿಗೆಗಳನ್ನು ಕಂಡರೂ ಇನ್ನೂ ಕೂಡ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರಕುತ್ತಿಲ್ಲ. ಇದರಿಂದ ಹಿನ್ನಡೆಯಾಗುತ್ತಿದೆ ಎಂದರು.ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ಮಾತನಾಡಿ, ಜನಪ್ರತಿನಿಧಿಗಳು ರೈತರ ನ್ಯಾಯಯುತ ಬೇಡಿಕೆಗಳ ಬಗ್ಗೆ ವಿಧಾನಸಭೆಯಲ್ಲಾಗಲಿ, ಸಂಸತ್ನಲ್ಲಾಗಲಿ ಧ್ವನಿ ಎತ್ತುವುದಿಲ್ಲ. ಚುನಾವಣೆ ಸಂದರ್ಭಗಳಲ್ಲಿ ರೈತರನ್ನು ಹುಡುಕಿಕೊಂಡು ಬರುವ ರಾಜಕಾರಣಿಗಳು ಗೆದ್ದ ಮೇಲೆ ರೈತರ ಕಡೆಗೆ ಮುಖ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಡಗಬೆಟ್ಟು ಬೈಲೂರಿನ ಶ್ರೀನಿವಾಸ ಆಚಾರ್ಯ, ಮೂಡು ಪೆರಂಪಳ್ಳಿಯ ಕಮಲ ಪೂಜಾರಿ, ಹಿರಿಯಡ್ಕದ ವಾಸುದೇವ ಪ್ರಭು, ಹೊರನಾಡಿಯ ಪ್ರೇಮಾನಂದ ಕುಲಾಲ್, ಮೂಡುಬೆಳ್ಳೆಯ ಲಾರೆನ್ಸ್ ಆಳ್ವ, ಸಚ್ಚೇರಿಪೇಟೆಯ ಕೆ. ಸತ್ಯಶಂಕರ ಶೆಟ್ಟಿ, ಮೂಡು ಪೆರಂಪಳ್ಳಿಯ ರಾಜೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಕರ್ನಾಟಕ ಬ್ಯಾಂಕಿನ ಅಧಿಕಾರಿ ವಾದಿರಾಜ ಭಟ್ ಕೆ., ಪೆರಂಪಳ್ಳಿ ಬೊಬ್ಬರ್ಯ ದೈವಸ್ಥಾನದ ಆಡಳಿತ ಮೊಕ್ತೇಸರ ಪಿ.ಎನ್. ಶಶಿಧರ ರಾವ್, ಪುತ್ತೂರಿನ ಕೇಶವ ಆಮೈ ಇದ್ದರು.
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು. ಭಾರತಿ ಶೆಟ್ಟಿ ವಂದಿಸಿದರು. ನಟರಾಜ ಎಚ್. ಎನ್. ರೈತಗೀತೆ ಹಾಡಿದರು.