ಬಿಸಿಲ ತಾಪ ತಗ್ಗಿಸಲು ಹಸಿರೀಕರಣ ಅನಿವಾರ್ಯ: ಸೂಡಾ ಅಧ್ಯಕ್ಷ ಸುಂದರೇಶ್

| Published : Jul 17 2024, 12:54 AM IST

ಸಾರಾಂಶ

ಶಿವಮೊಗ್ಗದ ಸೋಮಿನಕೊಪ್ಪದಲ್ಲಿರುವ ನ್ಯಾಯಾಂಗ ಬಡಾವಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ನಗರದ ವಿವಿಧ ಬಡಾವಣೆಗಳಲ್ಲಿ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇತ್ತೀಚಿನ ವರ್ಷದಲ್ಲಿ ಮಲೆನಾಡಿನ ಬಿಸಿಲು ಬಯಲು ಸೀಮೆ ಬಿಸಿಲನ್ನೂ ಮೀರಿಸುತ್ತಿದೆ. 40 ರಿಂದ 42 ಡಿಗ್ರಿ ತಾಪಮಾನ ದಾಖಲಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಬಿಸಿಲಿನ ತಾಪ ತಗ್ಗಬೇಕಾದರೆ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್‌ಟ್ರಸ್ಟ್‌, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಮಂಗಳವಾರ ಸೋಮಿನಕೊಪ್ಪದಲ್ಲಿರುವ ನ್ಯಾಯಾಂಗ ಬಡಾವಣೆಯಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕಾಡು ಮತ್ತು ಪ್ರಕೃತಿ ಮೇಲೆ ಇಂದು ದಬ್ಬಾಳಿಕೆ ನಡೆಯುತ್ತಿದೆ ಎಂದರು.

ಪ್ರಕೃತಿ ಮುನಿಸನ್ನು ತಣ್ಣಗೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಲಿವೆ. ಎಲ್ಲಾ ಇಲಾಖೆಗಳು ಬೇರೆ ಬೇರೆ ಮಾಡುವ ಅಭಿವೃದ್ಧಿ ಕಾರ್ಯದಿಂದ ಕೆಲವು ಸಂದರ್ಭದಲ್ಲಿ ಮರಗಳನ್ನು ಕಡಿಯಲೇಬೇಕಾಗುತ್ತದೆ. ಇದರಿಂದ ಬಿಸಿಲಿನ ತಾಪ ಹೆಚ್ಚಾಗುತ್ತದೆ. ದೇಶ ಮತ್ತು ರಾಜ್ಯ ಉಳಿವಿಗಾಗಿ ಇಂದು ನಾವು ಕಾಡನ್ನು ಬೆಳೆಸಲು ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

ಶಿವಮೊಗ್ಗ ನಗರ ವೇಗವಾಗಿ ಬೆಳೆಯುತ್ತಿದೆ. ಬಡವರಿಗೆ ನಿವೇಶನವನ್ನು ಕಡಿಮೆ ದರದಲ್ಲಿ ನೀಡುವಂತಾಗಬೇಕು. ಕೆಲವೊಮ್ಮೆ ಕಾನೂನಿನ ಪ್ರಕಾರ ಇದನ್ನು ನೀಡಲಾಗುತ್ತಿಲ್ಲ. ಸೂಡಾದಿಂದ 14 ವರ್ಷಗಳ ಹಿಂದೆಯೇ 104 ಎಕರೆ ಜಮೀನನ್ನು ಗೋಪಿಶೆಟ್ಟಿ ಕೊಪ್ಪದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅಲ್ಲಿನ ಕೆಲವು ರೈತರು ಜಮೀನು ಕೊಡಲು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ರೈತರಿಗೆ ಮಾರುಕಟ್ಟೆಯ ದರದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ಹಾಗಾಗಿ ನಿವೇಶನ ಮಾಡುವುದೇ ಕಷ್ಟವಾಗಿದೆ ಎಂದರು.

ಸೂಡಾ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಕಾರ್ಯದರ್ಶಿ ಪಾರ್ವತಮ್ಮ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೆರಿಗೆ, ಹಿರಿಯ ಪತ್ರಕರ್ತರಾದ ಗೋಪಾಲ ಯಡಗೆರೆ, ಶ್ರೀಕಾಂತ್ ಕಾಮತ್, ಮಾರ್ತಾಧಿಕಾರಿ ಮಾರುತಿ, ಸಂಘದ ಉಪಾಧ್ಯಕ್ಷರಾದ ವೈದ್ಯನಾಥ್, ಹಾಲಸ್ವಾಮಿ, ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಉಪಸ್ಥಿತರಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ಟಿ.ಅರುಣ್ ಸ್ವಾಗತಿಸಿದರು. ಉಪಾಧ್ಯಕ್ಷ ದೀಪಕ್ ಸಾಗರ್ ನಿರೂಪಿಸಿದರು.

ಡಿನೋಟಿಫೈ ಹುನ್ನಾರ ತಡೆಗೆ ಪತ್ರ

ಗೋಪಿಶೆಟ್ಟಿಕೊಪ್ಪದಲ್ಲಿ ಡಿನೋಟಿಫೈ ಮಾಡುವ ಹುನ್ನಾರ ನಡೆದಿದೆ. ಅದನ್ನು ತಡೆಹಿಡಿಯುವಂತೆ ಸರ್ಕಾರಕ್ಕೆ ಡಿನೋಟಿ ಫೈ ಮಾಡದಂತೆ ಪತ್ರ ಬರೆಯಲಾಗಿದೆ. ಊರುಗಡೂರಿನಲ್ಲಿ ನಾಲ್ಕು ಎಕರೆ ಜಾಗದಲ್ಲಿ ಶೀಘ್ರವೇ ನಿವೇಶನ ಹಂಚಲು ಯೋಚಿಸ ಲಾಗಿದೆ. ಅದೇ ರೀತಿ ಸೋಮಿನಕೊಪ್ಪದಲ್ಲಿ ಎರಡು ಎಕರೆಯಲ್ಲಿ ಮತ್ತೆರಡು ಅಪಾರ್ಟ್‌ಮೆಂಟ್ ನಿರ್ಮಿಸಲು ಯೋಚಿಸಲಾಗಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.