ವಿಜೃಂಭಣೆಯಿಂದ ರನ್ನ ರಥಯಾತ್ರೆ ಸ್ವಾಗತಿಸಿ, ಬೀಳ್ಕೊಡಿ

| Published : Feb 14 2025, 12:30 AM IST

ಸಾರಾಂಶ

ರನ್ನರಥಯಾತ್ರೆ ಗ್ರಾಮಗಳಿಗೆ ಆಗಮಿಸಿದಾಗ ವಿಜೃಂಭಣೆಯಿಂದ ಸ್ವಾಗತಿಸಿ, ಬೀಳ್ಕೊಡಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರನ್ನರಥಯಾತ್ರೆ ಗ್ರಾಮಗಳಿಗೆ ಆಗಮಿಸಿದಾಗ ವಿಜೃಂಭಣೆಯಿಂದ ಸ್ವಾಗತಿಸಿ, ಬೀಳ್ಕೊಡಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಳಿಸಿದರು.

ಮುಧೋಳದಲ್ಲಿ ಫೆ.22ರಿಂದ 24ರವರೆಗೆ ನಡೆಯಲಿರುವ ರನ್ನವೈಭವದ ನಿಮಿತ್ತ ರನ್ನ ರಥಯಾತ್ರೆಗೆ ಮುಧೋಳ ತಾಲೂಕಿನ ರನ್ನ ಬೆಳಗಲಿಯ ರನ್ನ ಸರ್ಕಲ್‌ನಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ರನ್ನರಥಯಾತ್ರೆ ರನ್ನ ಬೆಳಗಲಿಯಿಂದ ಪ್ರಾರಂಭವಾಗಿ ಮುಧೋಳ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ 72 ಗ್ರಾಮಗಳಿಗೆ ಸಂಚರಿಸಿ ಮರಳಿ ರನ್ನ ಬೆಳಗಲಿಗೆ ಮುಕ್ತಾಯಗೊಳ್ಳಲಿದೆ. ರನ್ನರಥಯಾತ್ರೆ ಗ್ರಾಮಗಳಿಗೆ ಆಗಮಿಸಿದಾಗ ವಿಜೃಂಭಣೆಯಿಂದ ಸ್ವಾಗತಿಸಿ, ಬೀಳ್ಕೊಡಬೇಕು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ರಥಯಾತ್ರೆ ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು.

ಈ ರನ್ನರಥ ರನ್ನನ ಗತ ವೈಭವ ಸಾರಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮವನ್ನು ದಾಖಲೆ ಮೀರಿ ಯಶಸ್ವಿಗೊಳಿಸಿ ರನ್ನವೈಭವ ಎಲ್ಲೆಡೆ ಪ್ರಸರಿಸುವಂತೆ ಮಾಡಲು ಎಲ್ಲರೂ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ತಿಳಿಸಿದರು. ರನ್ನರಥ ರನ್ನಬೆಳಗಳಿ ಪಟ್ಟಣದ ನಾನಾ ಕಡೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿರುವುದು ಮೆರವಣಿಗೆಗೆ ಮೆರಗು ತಂದಿತು.

ಇನ್ನೊಂದು ರನ್ನರಥಯಾತ್ರೆ ಜಿಲ್ಲಾ ಮಟ್ಟದಲ್ಲಿ ಫೆ.17ರಿಂದ 21ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಲಿದೆ. ಮತ್ತೊಂದು ರಥ ರಾಜ್ಯ ಮಟ್ಟದ ರನ್ನರಥಯಾತ್ರೆ ಫೆ.19ರಿಂದ 22ರವರೆಗೆ ನಡೆಯಲಿದೆ. ಪ್ರತಿಯೊಂದು ಹಂತದ ರನ್ನರಥಯಾತ್ರೆ ಯಶಸ್ವಿಗೊಳಿಸಲು ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದು ತಿಳಿಸಿದರು.

ರನ್ನರಥಯಾತ್ರೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನಿತ್ ಬಿ.ಆರ್, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ತಹಸೀಲ್ದಾರ್‌ ಮಹಾದೇವ ಸನಮುಡಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.