ನಾಳೆ ವಿಪ್ರ ನೌಕರರ ಸಂಘದ ನೂತನ ಕಟ್ಟಡ ಭೂಮಿಪೂಜೆ

| Published : Jun 04 2025, 02:55 AM IST

ಸಾರಾಂಶ

ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಳೇ ರೈಲ್ವೆ ನಿಲ್ದಾಣ ಹಿಂಭಾಗದ ಇಸ್ಲಾಪುರದಲ್ಲಿ ನೂತನ ಕಟ್ಟಡವೊಂದನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದರ ಭೂಮಿ ಪೂಜೆ ಕಾರ್ಯವನ್ನು ಜೂ.5ರಂದು ಬೆಳಗ್ಗೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಟ್ಟಡ ಸಮಿತಿಯ ಅಧ್ಯಕ್ಷ ಆರ್. ಅಚ್ಚುತರಾವ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಳೇ ರೈಲ್ವೆ ನಿಲ್ದಾಣ ಹಿಂಭಾಗದ ಇಸ್ಲಾಪುರದಲ್ಲಿ ನೂತನ ಕಟ್ಟಡವೊಂದನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದರ ಭೂಮಿ ಪೂಜೆ ಕಾರ್ಯವನ್ನು ಜೂ.5ರಂದು ಬೆಳಗ್ಗೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಟ್ಟಡ ಸಮಿತಿಯ ಅಧ್ಯಕ್ಷ ಆರ್. ಅಚ್ಚುತರಾವ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 400 ಚ.ಅಡಿ ಜಾಗದಲ್ಲಿ ಸುಮಾರು 2.25 ಕೋಟಿ ರುಪಾಯಿ ಯೋಜನೆ ಇದಾಗಿದ್ದು, ಎರಡು ಹಂತಗಳಲ್ಲಿ ಕಟ್ಟಡ ನಿರ್ಮಾಣ ಮಾಡುವುದಾಗಿ ತಿಳಿಸಿದ ಅವರು, ಪ್ರಥಮ ಹಂತದಲ್ಲಿ 40 ಚದರದ ಕಟ್ಟಡವನ್ನು 1 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರ ಅನುದಾನಗಳಿಂದ ಬರುವ ಹಣದಿಂದ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಸದರಿ ಜಾಗವು ಅಂದಿನ ಕೆ.ಬಿ. ಪ್ರಸನ್ನಕುಮಾರ್ ಶಾಸಕರಾಗಿದ್ದಾಗ ಪ್ರಯತ್ನದ ಫಲವಾಗಿ ದೊರಕಿದ್ದು, ಸಂಘದ ಪದಾಧಿಕಾರಿಗಳು, ಸದಸ್ಯರು ಇದಕ್ಕೆ ಉತ್ತಮ ಬೆಂಬಲವನ್ನು ನೀಡುತ್ತಿದ್ದಾರೆ. ತಮ್ಮ ಸಂಘವು ಅನೇಕ ಸಮಾಜೋಪಯೋಗಿ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯವನ್ನು ಮಾಡುತ್ತಿದೆ. ಸುವರ್ಣ ದಾಂಪತ್ಯ ಸನ್ಮಾನ, ವಾರ್ಷಿಕ ಉಪನ್ಯಾಸ ಸಪ್ತಾಹ, ಹೆಸರಾಂತ ಗಾಯಕರಿಂದ ಸಂಗೀತ ಸಂಜೆ ಕಾರ್ಯಕ್ರಮ ಮೊದಲಾದ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಉತ್ತರ-ದಕ್ಷಿಣ ವಧು-ವರರ ವೈವಾಹಿಕ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘವು ಶ್ರಮಿಸುತ್ತಿದೆ. ವಧು-ವರರ ಸಮಾವೇಶ, ವಿಪ್ರ ಜಾಗೃತಿ ಸಮಾವೇಶ, ಯುವ ಪೀಳಿಗೆಯನ್ನು ಸಮಾಜದತ್ತ ಸೆಳೆಯುವ ಉದ್ದೇಶದಿಂದ ಶ್ರೀ ಗಾಯತ್ರಿ ಮಾತಾ ಕ್ರಿಕೆಟ್‌ ಪಂದ್ಯಾವಳಿ ಮೊದಲಾದವುಗಳನ್ನು ಸಂಘಟಿಸುವ ಮೂಲಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಕ್ರಿಯವಾಗಿದೆ ಎಂದು ಮಾಹಿತಿ ನೀಡಿದರು.

ಭೂಮಿಪೂಜಾ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಎಸ್. ರುದ್ರೇಗೌಡ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್, ಎಕೆಬಿಎಂಎಸ್‌ನ ರಘುನಾಥ್ ಮೊದಲಾದವರು ಉಪಸ್ಥಿತರಿರುವರು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಎಚ್.ಕೆ. ಕೇಶವಮೂರ್ತಿ, ಕೆ.ಎನ್. ವಿಶ್ವನಾಥ್, ರವಿಕುಮಾರ್, ಛಾಯಾಪತಿ, ನಾಗೇಶ, ಮಹೇಶ್ ಇದ್ದರು.