ಸಾರಾಂಶ
ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿಯನ್ನು ಮತ್ತಷ್ಟು ಜನಸ್ನೇಹಿ ಹಾಗೂ ಸರಳೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ನವಚೈತನ್ಯ ತುಂಬಿದ್ದಲ್ಲದೆ, ಜನರ ಜೀವನ ಸುಧಾರಣೆಗೆ ಮಹತ್ವದ ಕ್ರಮ ಕೈಗೊಂಡಿದೆ. ಆ ಮೂಲಕ ನವ ಭಾರತದ ನಿರ್ಮಾಣಕ್ಕೆ ಮುಂದಡಿಯಿಟ್ಟಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.ಅಮೆರಿಕದಂತಹ ಜಾಗತಿಕ ಮಟ್ಟದ ದೈತ್ಯ ರಾಷ್ಟ್ರಗಳ ಸವಾಲುಗಳನ್ನು ಮೆಟ್ಟಿ ನಿಂತು ದೇಶ ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಈ ಐತಿಹಾಸಿಕ ನಿರ್ಧಾರದಿಂದಾಗಿ ದೈನಂದಿನ, ಶೈಕ್ಷಣಿಕ, ಆರೋಗ್ಯ, ರಕ್ಷಣಾ, ಕೃಷಿ, ಆಟೋಮೊಬೈಲ್, ಎಲೆಕ್ಟ್ರಾನಿಕ್, ಹೀಗೆ ಜನಸಾಮಾನ್ಯರ ಬದುಕಿಗೆ ಅಗತ್ಯವಿರುವ ಎಲ್ಲ ವಸ್ತುಗಳ ತೆರಿಗೆ ಗಣನೀಯವಾಗಿ ಇಳಿಕೆಯಾಗಲಿದೆ. ಆ ಮೂಲಕ ರೈತರು, ಬಡವರು, ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಯುವಕರು, ಉದ್ಯಮಿಗಳು ಹೀಗೆ ಪ್ರತಿಯೊಂದು ವಲಯಕ್ಕೂ ಈ ಸುಧಾರಣೆಗಳು ತಲುಪಲಿದ್ದು ಜನತೆಯ ಜೀವನ ಮಟ್ಟ ಇನ್ನಷ್ಟು ಸುಧಾರಣೆಯಾಗಲಿದೆ ಎಂದರು.ಒಂದೆಡೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲದರ ಬೆಲೆ ಹೆಚ್ಚಿಸಿ ಜನರ ಬದುಕನ್ನು ದುಸ್ತರಗೊಳಿಸುತ್ತಿರುವ ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ತೆರಿಗೆ ಭಾರ ಹೆಚ್ಚಿಸುವುದಲ್ಲ, ಇಳಿಸುವುದಕ್ಕೆ ನಮ್ಮ ಆದ್ಯತೆ ಎಂದು ಶೇ.12 ಮತ್ತು ಶೇ.28 ರ ಸ್ಲ್ಯಾಬ್ಗಳನ್ನು ತೆಗೆದುಹಾಕಿ ಶೇ.5 ಮತ್ತು ಶೇ.18 ಸ್ಲ್ಯಾಬ್ಗೆ ಮಾತ್ರ ಅನುಮೋದನೆ ನೀಡಿದೆ. ದೇಶದ ಪಾಲಿಗೆ ದಸರಾ ಹಾಗೂ ದೀಪಾವಳಿ ಉಡುಗೊರೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.