ಕನ್ನಡಪ್ರಭ ವಾರ್ತೆ ಹಾಸನ

ಪಂಚ ಗ್ಯಾರಂಟಿ ಆಮಿಷವೊಡ್ಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಕಳೆದ ಮೂರು ವರ್ಷಗಳಿಂದಲೂ ಅದೇ ಜಪ ಮಾಡುವ ಮೂಲಕ ಜಿಲ್ಲೆ ಸೇರಿದಂತೆ ಸಮಸ್ತ ನಾಡಿನ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಆರೋಪಿಸಿದ್ದಾರೆ.

ಆದರೀಗ ಮರು ಪರಿಷ್ಕರಣೆ ಹೆಸರಿನಲ್ಲಿ ಕೆಲವು ಗ್ಯಾರಂಟಿಗಳಿಗೆ ಕತ್ತರಿ ಹಾಕಲು ಹೊರಟಿರುವುದು ಕಾಂಗ್ರೆಸ್ ಸರ್ಕಾರದ ಹೊಣೆಗೇಡಿತನಕ್ಕೆ ಹಿಡಿದ ಕನ್ನಡಿ. ಇದರಿಂದ ಜನಸಾಮಾನ್ಯರ ನೆಮ್ಮದಿಗೆ ಭಂಗ ಉಂಟಾಗಿದೆ. ಆರಂಭದಲ್ಲಿ ಮಂಜುಬೂದಿ ಎರಚಿ ಅಮಾಯಕ ಜನರನ್ನು ಮರುಳು ಮಾಡಿದ ಸರ್ಕಾರ, ಇದೀಗ ಅದೇ ಜನರನ್ನು ಬರಿಗೈ ಮಾಡಲು ಹೊರಟಿದೆ ಎಂದು ವಿಷಾದಿಸಿದ್ದಾರೆ.

ಗ್ಯಾರಂಟಿ ಯೋಜನೆಯಡಿ ಲೋಪವಾಗಿದ್ದರೆ ಅದಕ್ಕೆ ಜನರು ಅಥವಾ ಫಲಾನುಭವಿಗಳು ಕಾರಣ ಅಲ್ಲ, ಬದಲಾಗಿ ಸರ್ಕಾರ ವಾರ್ಷಿಕವಾಗಿ ಬರೋಬ್ಬರಿ ಆರೂವರೆ ಕೋಟಿ ರು. ಸಂಬಳ ಕೊಟ್ಟು ಇಟ್ಟುಕೊಂಡಿರುವ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು ಕಾರಣ ಎಂದು ದೂರಿದ್ದಾರೆ. ಈಗ ಗ್ಯಾರಂಟಿಯಲ್ಲಿ ಲೋಪವಾಗಿದೆ ಎಂದು ಹೇಳುತ್ತಿರುವವರು ಕಳೆದ ಮೂರು ವರ್ಷಗಳಿಂದ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಯೋಜನೆಯಡಿ ಹಣ ದುರುಪಯೋಗವಾಗುತ್ತಿದೆ ಎಂಬ ಕಾರಣ ನೀಡಿ, ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡಲು ಕಾಂಗ್ರೆಸ್ ಸರ್ಕಾರ ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ. ಹಣ ದುರುಪಯೋಗ ಆಗಿದ್ದರೆ ಅದಕ್ಕೆ ನೇರ ಕಾರಣ ಅದರ ಮೇಲುಸ್ತುವಾರಿ ನೋಡಿಕೊಳ್ಳಲು, ಮೇಲಿಂದ ಮೇಲೆ ಪರಿಶೀಲನೆ ನಡೆಸಲು ನೇಮಿಸಿರುವ ರಾಜ್ಯ, ಜಿಲ್ಲಾ, ತಾಲೂಕು ಅಧ್ಯಕ್ಷರು, ಸದಸ್ಯರೇ ಆಗಿದ್ದಾರೆ. ಹಾಗಿದ್ದರೆ ಇಷ್ಟು ದಿನ ಅವರು ಏನು ಕೆಲಸ ಮಾಡುತಿದ್ದರು, ಕೇವಲ ಸಂಭಾವನೆ ರೂಪದಲ್ಲಿ ಜನರ ತೆರಿಗೆ ನುಂಗಿ ನೀಡು ಕುಡಿಯುತ್ತಿದ್ದರಾ ಎಂದು ಕೇಳಿದ್ದಾರೆ. ಗ್ಯಾರಂಟಿ ಯೋಜನೆ ಹಣ ದುರುಪಯೋಗಕ್ಕೆ ನೇರವಾಗಿ ಅಧ್ಯಕ್ಷರು-ಸದಸ್ಯರು, ಅವರನ್ನು ನೇಮಿಸಿರುವ ಸರ್ಕಾರವೇ ಕಾರಣ, ಹೀಗಾಗಿ ಪೋಲಾಗಿರುವ ಹಣವನ್ನು ಕರ್ತವ್ಯಲೋಪ ಎಸಗಿರುವವರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ಈಗ ಪರಿಷ್ಕರಣೆ ಮಾಡಿದರೆ ವೈಜ್ಞಾನಿಕವಾಗಿ ಮಾಡಬೇಕು. ಯಾರು ಬದುಕಿಲ್ಲವೋ ಅವರ ಹೆಸರನ್ನು ಹೊರಗಿಟ್ಟು, ಹಾಲಿ ಯಾರೆಲ್ಲ ಗ್ಯಾರಂಟಿ ಲಾಭ ಪಡೆಯುತ್ತಿದ್ದಾರೆಯೋ ಅದನ್ನು ಮುಂದುವರಿಸಬೇಕು. ಎಲ್ಲ ಫಲಾನುಭವುಗಳಿಗೆ ಹೊಸದಾಗಿ ನೋಂದಣಿ ಮಾಡಿಕೊಂಡು, ಪಟ್ಟಿಯಲ್ಲಿ ಮತ್ತೆ ಅವರ ಹೆಸರು ಕಾಣಿಸುವವರೆಗೂ ಹಳೆಯ ಮಾದರಿಯಲ್ಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕೇವಲ ನಾಲ್ಕು ಸರ್ಕಾರದ ಅಧೀನದಲ್ಲಿರುವ ಸೈಬರ್ ಸೆಂಟರ್ ಮೂಲಕ ಅರ್ಜಿ ಹಾಕಲು ಸ್ಥಳ ನಿಗದಿ ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಿನಗಟ್ಟಲೆ ಕಾಯಬೇಕಿದೆ. ಹಾಗಾಗಿ ಎಲ್ಲ ಸೈಬರ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು, ಅದರ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕರು, ಉಪಾದ್ತಕ್ಷರು ಹಾಗೂ ಸದಸ್ಯರಿಗೆ ನೀಡುವ ಸಂಭಾವನೆಯನ್ನು ಕೊಡಲೇ ನಿಲ್ಲಿಸಿ, ಅನವನ್ಯಶಕವಾಗಿ ಕೋಟ್ಯಂತರ ರು. ಖರ್ಚಾಗುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಹಿಸಿದ್ದಾರೆ.