ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಭರವಸೆಯ ಬೆಳಕು-ಪಾಟೀಲ

| Published : Aug 08 2024, 01:34 AM IST

ಸಾರಾಂಶ

ದೇಶದಲ್ಲಿಯೇ ಪ್ರಥಮವಾಗಿ ಜಾರಿಗೆ ತರಲಾದ ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಪಾಲಿನ ಭರವಸೆಯ ಬೆಳಕಾಗಿವೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ರಾಣಿಬೆನ್ನೂರು: ದೇಶದಲ್ಲಿಯೇ ಪ್ರಥಮವಾಗಿ ಜಾರಿಗೆ ತರಲಾದ ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಪಾಲಿನ ಭರವಸೆಯ ಬೆಳಕಾಗಿವೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತವಾಗಿ ರಾಜ್ಯದಲ್ಲಿ ಸಂಚರಿಸಲು ಸಹಕಾರಿಯಾಗಿದೆ. ಅನ್ನಭಾಗ್ಯ ಯೋಜನೆ ಬಡಜನರ ಹಸಿವು ನೀಗಿಸಲು ಪ್ರಯೋಜನಕಾರಿಯಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿದ ಬಡ ಜನರಿಗೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಿದೆ. ಇದರಿಂದ ರಾಜ್ಯದ ಹಲವು ಕಡೆಗಳಲ್ಲಿ ವೃದ್ಧಾಶ್ರಮಕ್ಕೆ ಸೇರಿಸಿದ್ದ ವಯಸ್ಸಾದ ಪೋಷಕರನ್ನು ಮರಳಿ ಮನೆಗೆ ಕರೆ ತಂದಿದ್ದಾರೆ. ನಿಜಕ್ಕೂ ಇದೊಂದು ಸಂಸ್ಕಾರ ಎತ್ತಿ ಹಿಡಿಯುವ ಯೋಜನೆಯಾಗಿದೆ. ಯಾವುದೇ ಕಾರಣದಿಂದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಅಧಿಕಾರಿಗಳು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಜರುಗಿಸಿ ಎಂದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪಂಚ ಗ್ಯಾರಂಟಿಯಿಂದ ಗ್ರಾಮೀಣ ಹಾಗೂ ನಗರ ಭಾಗದ ಬಡವರಿಗೆ ಅನುಕೂಲವಾಗಿದೆ. ಸಮಾಜದಲ್ಲಿ ಸಮಾನತೆ ತರುವ ಚಿಂತನೆಯಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ಅನುಷ್ಠಾನಗೊಳಿಸಿದೆ. ಆದರೆ, ವಿಪಕ್ಷಗಳು ಇದರಿಂದ ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ ಎಂದು ಮಿಥ್ಯಾರೋಪ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ವ್ಯವಸ್ಥೆಗೆ ಇಂಧನ ದೊರೆತಂತಾಗಿದೆ. ಯೋಜನೆಯ ಹಣ ಹಾಗೂ ಲಾಭ ಜನರಿಗೆ ನೇರವಾಗಿ ಮುಟ್ಟಿದೆ. ಇದರಿಂದಾಗಿ ಬಡವರು, ಮಹಿಳೆಯರ ಕೈಯಲ್ಲಿ ಹಣವಿದೆ. ಕೈಗೆ ಹಣ ಕೊಟ್ಟಿದ್ದರಿಂದ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಈ ಗ್ಯಾರಂಟಿ ಯೋಜನೆಯಿಂದ ನಾವೆಲ್ಲ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಗ್ಯಾರಂಟಿ ಯೋಜನೆಗೆ ಖರ್ಚಾಗುವ ಹಣವನ್ನು ದುಶ್ಚಟಗಳ ಮೇಲೆ ಹಾಗೂ ಆಸ್ತಿ ನೋಂದಣಿಗಳ ದರ ಹೆಚ್ಚಳ ಮಾಡಿ ಸಂಗ್ರಹಿಸಲಾಗುತ್ತಿದೆ. ಹಿಂದಿನ ಸರ್ಕಾರ ಆರ್ಥಿಕ ಬದ್ಧತೆಯಿಲ್ಲದೆ ಟೆಂಡರ್ ಕರೆದಿದ್ದ ಕಾಮಗಾರಿಗಳಿಗೆ ನಮ್ಮ ಸರ್ಕಾರ ಬಿಲ್ ಪಾವತಿ ಮಾಡಬೇಕಾಗಿದೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಂಜನಗೌಡ ಪಾಟೀಲ, ತಹಸೀಲ್ದಾರ್ ಆರ್.ಎಚ್. ಭಾಗವಾನ, ತಾಪಂ ಇಒ ಸುಮಲತಾ ಎಸ್.ಪಿ., ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ವೇದಿಕೆಯಲ್ಲಿದ್ದರು.

ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಸವರಾಜ ಸವಣೂರ, ಬಸಣ್ಣ ಮರದ, ಪುಟ್ಟಪ್ಪ ಮರಿಯಮ್ಮನವರ, ಏಕನಾಥ ಭಾನುವಳ್ಳಿ, ಮಧು ಕೋಳಿವಾಡ, ಡಾಕೇಶ ಲಮಾಣಿ, ವೆಂಕಟೇಶ ಬಣಕಾರ, ಎಂ.ಕೆ. ಮೊಹಿಯುದ್ದಿನ್, ಕರೇಗೌಡ ಬಾಗೂರ, ರಾಜು ಅಡಿವೆಪ್ಪನವರ, ರಾಜೇಂದ್ರ ಅಂಬಿಗೇರ ಹಾಗೂ ಸಾರಿಗೆ, ವಿದ್ಯುತ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.