ಕನ್ನಡಪ್ರಭ ವಾರ್ತೆ ಕೋಲಾರ

ಬೆಂಗಳೂರು ಸಿಟಿಯಲ್ಲಿ ಬದುಕು ಕಟ್ಟಿಕೊಂಡಿರುವ ಜೆಡಿಎಸ್ ಮುಖಂಡ ಕಡಗಟ್ಟೂರು ವಿಜಯಕುಮಾರ್ ಅವರಿಗೆ ಏನು ಗೊತ್ತು ಗ್ರಾಮೀಣ ಜನರ ಬದುಕಿನ ಕಷ್ಟ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದು ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡುವ ನೈತಿಕತೆಯಿಲ್ಲ ಕಡಗಟ್ಟೂರು ವಿಜಯಕುಮಾರ್ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರಾದ ವಾಗ್ದಾಳಿ ನಡೆಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ಕೊತ್ತೂರು ಮಂಜುನಾಥ್ ಶಾಸಕರಾಗಿ ವಿಜಯಕುಮಾರ್ ಅವರ ಸ್ವಗ್ರಾಮವಾದ ಕಡಗಟ್ಟೂರುಗೆ ಮಾತ್ರವೇ 25 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯಲ್ಲಿ ಸಹ ಮತ್ತೆ 25 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಹಿಂದೆ ಜೆಡಿಎಸ್ ಶಾಸಕರಿದ್ದ ಸಂದರ್ಭದಲ್ಲಿ ಎಷ್ಟು ಅನುದಾನ ಬಿಡುಗೆಯಾಗಿದೆ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಬಹಿರಂಗ ಪಡಿಸಲಿ. ಕಾಂಗ್ರೆಸ್ ಸರ್ಕಾರದಿಂದ ಕೋಲಾರ ಕ್ಷೇತ್ರಕ್ಕೆ 150 ಕೋಟಿ ಅನುದಾನ ಬಂದಿದೆ. ಮುಂದಿನ ಬಜೆಟ್‌ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ರಿಂಗ್ ರಸ್ತೆಗೆ ಅನುದಾನ ಬರಲಿದೆ. ಇಂತಹ ಗುರುತರವಾದ ಒಂದು ಯೋಜನೆಯನ್ನು ತಿಳಿಸಲಿ ಎಂದು ಸವಾಲು ಹಾಕಿದರು.ಕಾಂಗ್ರೆಸ್ ಸರ್ಕಾರದದ ಜನಪರ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಹಾಗೂ ಯುವನಿಧಿ ಜನಸಾಮಾನ್ಯರಿಗೆ ನೆಮ್ಮದಿ, ಆರ್ಥಿಕ ಭದ್ರತೆ ಮತ್ತು ಆತ್ಮವಿಶ್ವಾಸ, ಮಹಿಳೆಯರಿಗೆ ಕುಟುಂಬದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಿದೆ. ಇದರಲ್ಲಿ ಒಂದು ರುಪಾಯಿ ಕೂಡ ಭ್ರಷ್ಟಾಚಾರ ನಡೆದಿಲ್ಲ. ನೇರವಾಗಿ ಫಲಾನುಭವಿಗಳಿಗೆ ಸೇರಿದೆ. ಟೀಕಿಸುತ್ತಿದ್ದವರೇ ದೇಶದ ಇತರೆ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ನಮ್ಮ ಯೋಜನೆಯನ್ನು ನಕಲು ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ಯೋಜನೆ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಹಿಂದೆ ಇದ್ದ ಸರ್ಕಾರದ ಹಾಗೆ ಶೇ. 40 ಬಿಜೆಪಿ ಸರ್ಕಾರವಾಗಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕೊನೆಯ ಸರ್ಕಾರವೆಂದು ಅವಹೇಳನ ಮಾಡಿದ್ದಾರೆ. ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಎಷ್ಟು ಸ್ಥಾನ ಪಡೆದಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ‌. 2013 ರಲ್ಲಿ 40 ಸ್ಥಾನ, 2018 ರಲ್ಲಿ 37 ಸ್ಥಾನ, 2023 ರಲ್ಲಿ 19 ಸ್ಥಾನಕ್ಕೆ ಸೀಮಿತವಾಗಿತ್ತು. ತಮ್ಮ ಪಕ್ಷ ಮುಳುಗುತ್ತಿರುವ ಪಕ್ಷವಾಗಿದೆ. ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ ಎಂದು ಕಡಗಟ್ಟೂರು ವಿಜಯಕುಮಾರ್ ವಿರುದ್ಧ ಟೀಕೆ ಮಾಡಿದರು.

ಈ ವೇಳೆ ತಾಲೂಕು ಶಿಕ್ಷಣ ಸಮಿತಿ ಸದಸ್ಯ ಅಮ್ಮನಲ್ಲೂರು ನಾಗೇಶ್, ವೇಮಗಲ್- ಕುರುಗಲ್ ಪಟ್ಟಣ ಪಂಚಾಯಿತಿ ಸದಸ್ಯ ತಿರುಮಳಪ್ಪ, ನಾಚಹಳ್ಳಿ ದೇವರಾಜ್‌ ಇದ್ದರು.