ಜನ ಸಾಮಾನ್ಯರ ಬದುಕು ಹಸನು ಮಾಡಲು ಗ್ಯಾರಂಟಿ ಸಹಕಾರಿ: ಸ್ಟಾರ್ ಚಂದ್ರು

| Published : Apr 03 2024, 01:33 AM IST

ಜನ ಸಾಮಾನ್ಯರ ಬದುಕು ಹಸನು ಮಾಡಲು ಗ್ಯಾರಂಟಿ ಸಹಕಾರಿ: ಸ್ಟಾರ್ ಚಂದ್ರು
Share this Article
  • FB
  • TW
  • Linkdin
  • Email

ಸಾರಾಂಶ

ನಾನೊಬ್ಬ ರೈತನ ಮಗ. ನನಗೆ ಹಣ ಮಾಡುವ ಅವಶ್ಯಕತೆ ಇಲ್ಲ. ಜನಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷಿ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಹಣವಿದ್ದರೂ ಸಾರ್ವಜನಿಕರ ಸೇವೆ ಮಾಡಲು ಅಧಿಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನನಗೆ ಒಂದು ಅವಕಾಶ ಕಲ್ಪಿಸಿದೆ. ನನ್ನನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಲಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆ

ಜನಸಾಮಾನ್ಯರ ಬದುಕು ಹಸನು ಮಾಡಲು ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಲಿವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ತಿಳಿಸಿದರು.

ತಾಲೂಕಿನ ವಿಠಲಾಪುರ, ಕಟ್ಟೆಕ್ಯಾತನಹಳ್ಳಿ, ಆಲಂಬಾಡಿ ಕಾವಲು, ಐಪನಹಳ್ಳಿ, ಅಕ್ಕಿಹೆಬ್ಬಾಳು, ಬೀರವಳ್ಳಿ, ಮಂದಗೆರೆ ಹಿರೀಕಳಲೆ, ಕೆ.ಆರ್.ಪೇಟೆ ಪಟ್ಟಣ, ಹೊಸಹೊಳಲು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಭೆಗಳನ್ನು ನಡೆಸಿ ಮತಯಾಚನೆ ಮಾಡಿದರು.

ನಾನೊಬ್ಬ ರೈತನ ಮಗ. ನನಗೆ ಹಣ ಮಾಡುವ ಅವಶ್ಯಕತೆ ಇಲ್ಲ. ಜನಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷಿ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ. ಹಣವಿದ್ದರೂ ಸಾರ್ವಜನಿಕರ ಸೇವೆ ಮಾಡಲು ಅಧಿಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನನಗೆ ಒಂದು ಅವಕಾಶ ಕಲ್ಪಿಸಿದೆ. ನನ್ನನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಲಿದ್ದೇನೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ, ಜಿಲ್ಲೆಯ ಜನ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವ ಮೂಲಕ ರಾಜ್ಯದ ಗ್ಯಾರಂಟಿ ಯೋಜನೆಗಳು ಮುಂದುವರಿಯಲು ಅಗತ್ಯ ಶಕ್ತಿ ನೀಡುವಂತೆ ಮನವಿ ಮಾಡಿದರು.

ಗ್ಯಾರಂಟಿ ಯೋಜನೆಯ ಲಾಭ ಕೇವಲ ಕಾಂಗ್ರೆಸ್ ಪಕ್ಷದ ಬೆಂಬಲಿತ ಕುಟುಂಬಗಳು ಮಾತ್ರ ಪಡೆಯುತ್ತಿಲ್ಲ. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ಬೆಂಬಲಿಗರ ಕುಟುಂಬಗಳಿಗೂ ಇದರ ಲಾಭ ದೊರಕುತ್ತಿದೆ ಎಂದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿಗೆ ತಳಪಾಯ ಹಾಕಿದವರು ಕಾಂಗ್ರೆಸ್ಸಿಗರು. ಕಾಂಗ್ರೆಸ್ಸಿಗರ ದೂರದೃಷ್ಟಿಯ ಫಲವಾಗಿ ದೇಶದಲ್ಲಿ ಬೃಹತ್ ಅಣೆಕಟ್ಟೆಗಳು, ಬೃಹತ್ ಕೈಗಾರಿಕೆಗಳು ಬೆಳೆದವು. ದೇಶ ಬ್ಯಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ವೈಜ್ಞಾನಿಕವಾಗಿ ಪ್ರಗತಿ ಸಾಧಿಸಲು ಕಾರಣಕರ್ತರಾಗಿದ್ದಾರೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲನ್ನು ನೀಡುತ್ತಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಬರ ಪರಿಹಾರದ ಹಣ ನೀಡುತ್ತಿಲ್ಲ ಎಂದು ದೂರಿದರು.

ರೈತರ ಎಲ್ಲಾ ಕೃಷಿ ಉತ್ಪನ್ನಗಳ ಮೇಲೆ ಜಿಎಸ್ ಟಿ ಹಾಕಿ ರೈತರ ಸುಲಿಗೆ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೃಷಿ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ ತೆಗೆದು ಹಾಕುತ್ತದೆ. ದೇಶದ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತದೆ ಎಂದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ತಾನು ನೀಡಿದ ಭರವಸೆಗಳನ್ನು ಈಡೇರಿಸುತ್ತದೆ. ದೇಶದ ಅಭಿವೃದ್ಧಿ, ಸಂವಿಧಾನದ ಉಳಿವಿಗಾಗಿ ಮತ್ತು ಶಾಂತಿ ಸಹಬಾಳ್ವೆಯ ಸುಸ್ಥಿರ ಸಮಾಜ ನಿರ್ಮಾಣಕ್ಕಾಗಿ ಜಿಲ್ಲೆಯ ಜನ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.

ಪ್ರಚಾರ ಸಭೆ ಹಾಗೂ ರೋಡ್ ಶೋ ಕಾರ್ಯಕ್ರಮಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ರಾಜ್ಯ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಮಾಜಿ ಶಾಸಕರಾದ ಬಿ. ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ, ಸಾತನೂರು ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಂದ್ರ ಕುಮಾರ್, ಹರಳಹಳ್ಳಿ ವಿಶ್ವನಾಥ್ ಸೇರಿದಂತೆ ಆಯಾ ಗ್ರಾಮ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.