ಸಾರಾಂಶ
ತೋರಣಗಟ್ಟಿ ಸಮೀಪ ₹6.40 ಕೋಟಿ ವೆಚ್ಚದಲ್ಲಿ ಯರಗಟ್ಟಿ ಮುದೋಳ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕನ್ನಡಪ್ರಭ ವಾರ್ತೆ ರಾಮದುರ್ಗ
ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಘೋಷಣೆ ಮಾಡಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಿದೆ ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.ತಾಲೂಕಿನ ತೋರಣಗಟ್ಟಿ ಸಮೀಪ ₹6.40 ಕೋಟಿ ವೆಚ್ಚದಲ್ಲಿ ಯರಗಟ್ಟಿ ಮುದೋಳ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ರಸ್ತೆ ಸುಧಾರಣೆಗೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗತ್ತು. ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು ತಾಲೂಕಿನ ಹಲವು ಪ್ರಮುಖ ರಸ್ತೆಗಳ ಸುಧಾರಣೆಗೆ ಅನುದಾನ ನೀಡಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಕಳಪೆಯಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಜೊತೆ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕಾಮಗಾರಿ ಉಸ್ತುವಾರಿ ಮಾಡಬೇಕು. ಸದ್ಯ ಈ ರಸ್ತೆ 7ಮೀ. ಅಗಲ ಕಾಮಗಾರಿ ಮಾಡಲಾಗುತ್ತದೆ. ರಸ್ತೆ ಬದಿಯ ಜಮೀನುಗಳ ಮಾಲೀಕರು ಅತಿಕ್ರಮವಾಗಿದ್ದರೆ, ತೆರವು ಮಾಡುವ ಮುಖಾಂತರ ಸುಗಮ ಮತ್ತು ಶೀಘ್ರ ಕೆಲಸ ಮುಕ್ತಾಯವಾಗಿ ಜನರ ಮತ್ತು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮುದಗೊಂಡ, ಉಪಾಧ್ಯಕ್ಷ ವಿಠ್ಠಲ ಜೋಗಿ, ಸದಸ್ಯರಾದ ಮಲ್ಲಿರ್ಜುನ ಐನಾಪೂರ, ಜಗದೀಶ ಬಿಜಲಿ, ಹೂವಪ್ಪ ಕರಲನ್ನವರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ಎನ್. ಸಿಂಗಾರಗೊಪ್ಪ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಲ್ಲನಗೌಡ ಸುರಗ, ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ಕುಮಾರ ಸೇರಿ ಹಲವರಿದ್ದರು.