ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಜಯಪುರ ರಸ್ತೆ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಗುಜರಿ ವ್ಯಾಪಾರಿಯ ಭೀಕರ ಕೊಲೆ ನಡೆದಿದೆ. ತಿಪಟೂರು ಗಾಂಧಿನಗರದ ನಿವಾಸಿ ಮನ್ಸೂರ್ (೩೨) ಕೊಲೆಯಾದ ದುರ್ದೈವಿ. ಮಾರ್ಚ್ ೪ರಂದು ಗುಜರಿ ವ್ಯಾಪಾರಕ್ಕಾಗಿ ಹಳ್ಳಿಗೆ ತೆರಳಿದ್ದ ಮನ್ಸೂರ್ ಮಧ್ಯಾಹ್ನವಾದರೂ ಮನೆಗೆ ಹಿಂದಿರುಗದ ಕಾರಣ, ಪತ್ನಿ ಮತ್ತು ತಾಯಿ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ, ಕುಟುಂಬದವರು ಮತ್ತು ಸ್ನೇಹಿತರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ಜಯಪುರ ರಸ್ತೆ ಚಿಕ್ಕಕೊಟ್ಟಗಿಹಳ್ಳಿ ಬಳಿಯ ರಸ್ತೆ ಸಮೀಪ ಮನ್ಸೂರ್ ಅವರಿಗೆ ಸೇರಿದ ಗುಜರಿ ವ್ಯಾಪಾರದ ಆಟೋ ರಿಕ್ಷಾ ಪತ್ತೆಯಾಗಿದೆ. ಆಟೋ ನಿಂತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ರಾಜಮ್ಮ ಎಂಬುವವರ ಆಡಿಕೆ ತೋಟದದಲ್ಲಿ ಮನ್ಸೂರ್ ಅವರ ಶವ ಪತ್ತೆಯಾಗಿದೆ. ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊಲೆಯಾಗಿರುವ ಮನ್ಸೂರ್ ಈ ಹಿಂದೆ ಬೇರೊಬ್ಬರ ಜೊತೆ ಮದುವೆಯಾಗಿದ್ದು ಪತ್ನಿ ಜೊತೆಯಲ್ಲಿಲ್ಲ ಎಂದು ತಿಳಿದು ಬಂದಿದೆ. ಒಂದು ತಿಂಗಳ ಹಿಂದೆ ಮನ್ಸೂರ್ ಮತ್ತೊಂದು ಮದುವೆಯಾಗಿದ್ದು ಈ ಹಿನ್ನೆಲೆಯಲ್ಲಿ ಕೊಲೆ ಆಗಿರಬಹುದು ಎಂದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.