ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ನಿಮ್ಮ ಭವಿಷ್ಯ ಉಜ್ವಲ ಮಾಡಿಕೊಳ್ಳಿ ಎಂದು ಮೈಸೂರಿನ ಹೆಸರಾಂತ ಸಾಹಿತಿ ನಗರ್ಲೆ ಶಿವಕುಮಾರ್ ತಿಳಿಸಿದರು.ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್ ಕಾಲೇಜಿನಲ್ಲಿ ಶನಿವಾರ ನಡೆದ ಮೂರನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರಂತರವಾಗಿ ಕಠಿಣ ಶ್ರಮದಿಂದ ವಿದ್ಯಾಭ್ಯಾಸ ಕಲಿತರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸರ್ಕಾರಿ ಕೆಲಸ ಪಡೆದುಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾಭ್ಯಾಸದ ಜೊತೆಗೆ ಕಾಲೇಜಿನ ಆಡಳಿತ ಮಂಡಳಿ, ಪೋಷಕರು ಜಿಲ್ಲೆಗೆ ಕೀರ್ತಿ ತನ್ನಿ, ಹಣ, ಆಸ್ತಿ ಕಳ್ಳತನವಾಗಬಹುದು. ಆದರೆ ವಿದ್ಯೆಯನ್ನು ಯಾರೂ ಕಳ್ಳತನ ಮಾಡಲು ಸಾಧ್ಯವಿಲ್ಲ. ವಿದ್ಯೆಯೊಂದಿದ್ದರೆ ವಿಶ್ವದ ಯಾವುದೇ ಭಾಗದಲ್ಲಿ ನೀವು ಜೀವಿಸಬಹುದು ಎಂದು ತಿಳಿಸಿದರು.ಜೀವನದಲ್ಲಿ ಸಮಯ ಪ್ರಜ್ಞೆ, ಗುರು ಹಿರಿಯರ ಹಾಗೂ ಪೋಷಕರ ಮಾರ್ಗದರ್ಶನದಿಂದ ನೀವು ಉತ್ತಮ ಸಾಧನೆ ಮಾಡುವ ಜೊತೆಗೆ ಬಿಡುವಿನ ಸಂದರ್ಭದಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ, ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ. ಬಸವಣ್ಣ ಮಾತನಾಡಿ, ಸುತ್ತೂರು ಶ್ರೀಗಳ ಆಶೀರ್ವಾದದೊಂದಿಗೆ ಲಕ್ಷಾಂತರ ಮಂದಿ ಬಿಎಡ್ ವಿದ್ಯಾಭ್ಯಾಸ ಮುಗಿಸಿ ಜಿಲ್ಲೆ, ರಾಜ್ಯ, ಅಂತಾರಾಜ್ಯದಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವುದು ಮೆಚ್ಚುಗೆ ವಿಷಯ. ಇದರ ಜೊತೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳಾಗಿ ಸೇವೆ ಮಾಡುತ್ತಿರುವುದೂ ಶ್ಲಾಘನಾರ್ಹ. ಕಾಲೇಜಿನ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪ್ರಕಟವಾಗಿದ್ದು, ಬಿಎಡ್ ನಲ್ಲಿ ವಿದ್ಯಾಭ್ಯಾಸ ಮಾಡಿದ ನೂರಕ್ಕೆ ನೂರು ಮಂದಿ ಖಾಸಗಿ, ಸರ್ಕಾರಿ ಕೆಲಸ ಮಾಡಿ ತಮ್ಮ ಜೀವನವನ್ನು ನಂದಾದೀಪವಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಜೆಎಸ್ಎಸ್ ಬಿಎಡ್ ಕಾಲೇಜಿನ ಉಪನ್ಯಾಸಕ ಕೆ.ಎಂ. ಯೋಗೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ. ಬಿ ನಾಗರಾಜು, ಕಾರ್ಯದರ್ಶಿ ಹಾಗೂ ಮರಿಯಾಲ ಶ್ರೀ ಮುರುಘರಾಜೇಂದ್ರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಮಹದೇವಸ್ವಾಮಿ, ಕುದೇರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ರಾಜೇಂದ್ರ, ಚಾಮರಾಜನಗರ ಆರ್.ಟಿ.ಒ ಕಚೇರಿ ಅಧೀಕ್ಷಕಿ, ಹಿರಿಯ ವಿದ್ಯಾರ್ಥಿನಿ ಕೆ.ಪಿ. ದೀಪಾ, ಜೆಎಸ್ಎಸ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೆ.ಎಸ್. ಅರುಣ, ವೀರೇಶ್, ಸಿದ್ದರಾಜು, ರಾಜು ಜೈನ್, ಹಿರಿಯ ವಿದ್ಯಾರ್ಥಿಗಳಾದ ಉಪನ್ಯಾಸಕಿ ಶೀಲಾ, ಶಶಿಕಲಾ, ಜಯಶಂಕರ್, ತೇಜಸ್ವಿನಿ. ಭಾವನ, ನಂದಿನಿ ,ಶಿಲ್ಪ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಹಿರಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜೇತರಾಗಿ ಬಹುಮಾನ ಗಳಿಸಿದರು.