ಕನ್ನಡಪ್ರಭ ವಾರ್ತೆ ಪಾಂಡವಪುರ

ಪ್ರತಿಯೊಬ್ಬರೂ ಜೀವನದಲ್ಲಿ ಮಾನವೀಯ ಮೌಲ್ಯ ಬೆಳೆಸಿಕೊಂಡು ಸಮಾಜದಲ್ಲಿ ವೃದ್ಧಾಶ್ರಮಗಳು ಕಡಿಮೆಯಾಗುವಂತೆ ಮಾಡಬೇಕು ಎಂದು ಬೇಬಿಬೆಟ್ಟದ ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಹೇಳಿದರು.ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗೇಶ್ವರಿ ಮಠದಲ್ಲಿ ಪ್ರಗತಿ ಸೇವಾಟ್ರಸ್ಟ್ ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನಿಂದ ನಡೆದ ಸಾಧನ ಸೇವಾ ಪ್ರಶಸ್ತಿ ಪ್ರದಾನ ಮತ್ತು ಚುಟುಕು ಕವಿಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದರು.

ಸಮಾಜ ತಿಳಿಯಾಗಬೇಕು, ನಾವು ಸದಾ ಸತ್ಸಂಗ ಸಹವಾಸ ಬೇಕು. ವೃದ್ಧಾಶ್ರಮಗಳು ಕಡಿಮೆ ಮಾಡಬೇಕು. ಮಕ್ಕಳಿಗೆ ಜ್ಞಾನಾರ್ಜನೆ, ಸಂಸ್ಕಾರ ಕಲಿಸಬೇಕು. ಇಂತಹ ಮೌಲ್ಯಯುತ ಕಾರ್ಯಕ್ರಮಗಳು ಪ್ರತಿ ತಿಂಗಳು ಮಠದಲ್ಲಿ ನಡೆದರೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಡಾ.ನಾಗೇಶ್ ರಾಗಿಮುದ್ದನಹಳ್ಳಿ ಮಾತನಾಡಿ, ಸಮಾಜ ಸೇವೆ ನಿಸ್ವಾರ್ಥವಾಗಿ ಮಾಡಬೇಕು. ಪರಿಸರ ಪ್ರಜ್ಞೆ, ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಚಿಂತನೆಯನ್ನು ಪ್ರತಿಯೊಬ್ಬರು ನಿರಂತರವಾಗಿ ಸಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಉಪ ತಹಸೀಲ್ದಾರ್ ಸಂತೋಷ್, ಮಂಡ್ಯ ಜಿಲ್ಲಾ ಆಡಳಿತ ಉಪ ನಿರ್ದೇಶಕ ಜಿ.ಎ.ಲೋಕೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೆ.ಸಿ.ಮಂಜುಳಾ ಭದ್ರೇಗೌಡ, ಮುಖ್ಯ ಶಿಕ್ಷಕ ಆರ್.ಟಿ.ಬಸವರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ 20 ಕ್ಕೂ ಹೆಚ್ಚು ಕವಿಗಳು ಚುಟುಕು ಕವನ ವಾಚಿಸಿದರು.


ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ.ಲೋಕೇಶ್, ಡಾ.ಬಿ.ಸಿ.ವಿಜಯಕುಮಾರ್ ಬಲ್ಲೇನಹಳ್ಳಿ, ಎಂ.ಎಚ್.ವಿಜಯಕುಮಾರ್ ಮಲ್ಲಿಗೆರೆ ಉಪಸ್ಥಿತರಿದ್ದರು.