ಕನ್ನಡಪ್ರಭ ವಾರ್ತೆ ಗುಳೆದಗುಡ್ಡ
ಈಶ್ವರ ಬೇರೆ ಅಲ್ಲ, ಗುರು ಬೇರೆ ಅಲ್ಲ. ಪರಮಾತ್ಮಎಲ್ಲ ಕಡೆಗಳಲ್ಲಿ ಇರಲು ಸಾಧ್ಯವಾಗದ ಕಾರಣ ಗುರುವನ್ನು ತನ್ನ ಸ್ವರೂಪದಲ್ಲಿ ಈ ಭೂಮಿಯ ಮೇಲೆ ಇರಿಸಿದ್ದಾನೆ. ಎಲ್ಲ ಸಮಯದಲ್ಲೂ ಜನರನ್ನು ತಿದ್ದಲು ಆಗದಿರುವುದಕ್ಕೆ ಪರಮಾತ್ಮ ಗುರುವಿನ ರೂಪದಲ್ಲಿದ್ದಾನೆ. ಅಂತಹ ಗುರುಗಳಾಗಿದ್ದವರು ನಮ್ಮ ಅಮರೇಶ್ವರ ಶ್ರೀಗಳು ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು.ಸಮೀಪದ ಅಮರೇಶ್ವರ ಬ್ರಹನ್ಮಠದ ಅಮರೇಶ್ವರ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಗುರುವಾರ ಅಮರೇಶ್ವರ ಶ್ರೀಗಳ 57ನೇ ಪುಣ್ಯಸ್ಮರಣೆ, ಬಸಯ್ಯ ಸ್ವಾಮಿಗಳು, ಲಕ್ಷ್ಮೀಬಾಯಿ ಅಮ್ಮನವರ ಸಂಸ್ಮರಣೋತ್ಸವ, ಅಮರ ಆದರ್ಶ ದಂಪತಿ ಸತ್ಕಾರ ಹಾಗೂ ಅಮರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಅಮರೇಶ್ವರ ಶ್ರೀಗಳು ಜ್ಞಾನಿಗಳಾಗಿದ್ದರು. ಪ್ರತಿದಿನ ಸಂಜೆ ನಿಜಗುಣಾನಂದ ಪುರಾಣ ಪ್ರವಚನ ಹೇಳುತ್ತಿದ್ದರು. ಅಮರೇಶ್ವರ ಶ್ರೀಗಳ ನಂತರ ನಾವು ಪೀಠಾಧ್ಯಕ್ಷರಾಗಿ, ನಂತರ ಕಾಶಿ ಪೀಠಕ್ಕೆ ತೆರಳಿದಾಗ, ಶ್ರೀಮಠವನ್ನು 19 ವರ್ಷಗಳ ಕಾಲ ನೋಡಿಕೊಂಡವರು ಲಕ್ಷ್ಮೀಬಾಯಿ, ಬಸಯ್ಯಸ್ವಾಮಿಗಳು, ಅವರ ಸೇವೆಯಿಂದಲೇ ನಾವು ಕಾಶಿ ಪೀಠಕ್ಕೆ ನೇಮಕವಾಗಲು ಸಾಧ್ಯವಾಯಿತು. ಸದ್ಯದ ಶ್ರೀಗಳಾದ ಡಾ.ನೀಲಕಂಠ ಶ್ರೀಗಳು ಮಠವನ್ನು ಹೆಚ್ಚು ಬೆಳೆಸುತ್ತ ಭಕ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಖುಷಿ ತರಿಸಿದೆ ಎಂದು ಹೇಳಿದರು.
ಲಿಂಗಾಯತರಾದವರು ಲಿಂಗಧಾರಣೆ ಮಾಡಬೇಕು. ಅಮರೇಶ್ವರ ಶ್ರೀಗಳು ಉಭಯ ವೈದ್ಯರಾಗಿದ್ದರು. 19 ವರ್ಷಗಳ ಕಾಲ ಮಠದ ಸೇವೆ ಮಾಡಿ, ಲಿಂಗೈಕ್ಯರಾದ ಬಸಯ್ಯ ಸ್ವಾಮಿಗಳು, ಲಕ್ಷ್ಮೀಬಾಯಿ ಅಮ್ಮನವರ ಹೆಸರಿನಲ್ಲಿ ಕಾಶಿ ಪೀಠದಿಂದ ತಲಾ ₹11 ಲಕ್ಷದಂತೆ ಒಟ್ಟು ₹22 ಲಕ್ಷ ದೇಣಿಗೆ ನೀಡಲಾಗುವುದು. ಆ ದೇಣಿಗೆ ಹಣದಿಂದ ಬರುವ ಬಡ್ಡಿಯಿಂದ ಪ್ರತಿ ವರ್ಷ ಕಾರ್ಯಕ್ರಮ ನಡೆಸಿಕೊಂಡು ಹೋಗಬೇಕು ಎಂದು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.ಈ ಸಂದರ್ಭದಲ್ಲಿ 7 ಹಿರಿಯ ದಂಪತಿಗೆ ಅಮರ ಆದರ್ಶ ಸತ್ಕಾರ ನೀಡಲಾಯಿತು. 7 ಜನರಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಮರೇಶ್ವರ ಬ್ರಹನ್ಮಠದ ಪೀಠಾಧ್ಯಕ್ಷ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು, ಹೊಳೆಹುಚ್ಚೇಶ್ವರ ಶ್ರೀಗಳು, ಗಂಗಾವತಿ ಕೊಟ್ಟೂರು ಶ್ರೀಗಳು, ಒಪ್ಪತ್ತೇಶ್ವರ ಶ್ರೀಗಳು, ಟೀಕಿನಮಠದ ಮಲ್ಲಿಕಾಜರ್ಜುನ ಶ್ರೀಗಳು, ಕಾಡಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.ಅಮರೇಶ್ವರ ಶ್ರೀಗಳು ಜ್ಯೋತಿಷ್ಯ ಪಂಡಿತರಾಗಿ, ಉಭಯ ವೈದ್ಯರಾಗಿದ್ದರು. ಅವರು ಇಲ್ಲದಿದ್ದರೂ ಇಂದಿಗೂ ಶ್ರೀಮಠಕ್ಕೆ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುತ್ತಿರುವುದು ಖುಷಿಯ ವಿಚಾರ. ಸದ್ಯದ ಪೀಠಾಧಿಪತಿಗಳು ಎಲ್ಲರೊಂದಿಗೆ ಒಡನಾಟ ಬೆಳೆಸಿಕೊಂಡು ಭಕ್ತರ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.
-ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕೆರೂರು ಚರಂತಿಮಠ