ಕುಂದಗೋಳ: ಗುರುವಿಗೆ ಶಿಷ್ಯಂದಿರರಿಂದ ವಿಶಿಷ್ಟ್ಯ ಗುರುವಂದನೆಗೆ ಪಟ್ಟಣದ ಗಾಂಧಿ ಹಿಂದಿ ವಿದ್ಯಾಪೀಠದ ಆವರಣ ಭಾನುವಾರ ಸಾಕ್ಷಿಯಾಗಿತ್ತು.
ಮೂವತ್ತು ನಾಲ್ವತ್ತು ವರ್ಷದ ಹಿಂದೆ ತಮಗೆ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಹಳೆ ವಿದ್ಯಾರ್ಥಿಗಳೆಲ್ಲ ಶಾಲೆಗೆ ಆಗಮಿಸಿ ಆಗಿನ ಗುರುಗಳನ್ನು ಕರೆಯಿಸಿ ಸನ್ಮಾನಿಸಿ ಪಾದಮುಟ್ಟಿ ನಮಸ್ಕರಿಸಿ ಗೌರವ ಸಲ್ಲಿಸಿದರು.ಪಟ್ಟಣದ ಗಾಂಧಿ ಹಿಂದಿ ವಿದ್ಯಾಪೀಠವು ಹಿರಿಯ ಪ್ರಾಥಮಿಕ ಶಾಲೆಯನ್ನು ಹೊಂದಿದೆ. 1ರಿಂದ 8ನೆಯ ತರಗತಿವರೆಗೆ ಇಲ್ಲುಂಟು. 1986ರಿಂದ 2004ರವರೆಗೆ ಈ ಶಾಲೆಯಲ್ಲಿ ಕಲಿತಿರುವ ವಿವಿಧ ಬ್ಯಾಚ್ಗಳ ವಿದ್ಯಾರ್ಥಿಗಳು ಸೇರಿಕೊಂಡು ಹಳೇ ವಿದ್ಯಾರ್ಥಿಗಳ ಸಂಘ ಮಾಡಿಕೊಂಡಿದ್ದಾರೆ. ಈ ಸಂಘದಿಂದ ಭಾನುವಾರ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಗಿನ ಕ್ಷಣಗಳನ್ನು ಗುರುಗಳು ನೆನಪಿಸಿಕೊಂಡರೆ, ಶಿಷ್ಯಂದಿರರು ಆಗ ತಾವು ಮಾಡಿದ್ದ ತುಂಟಾಟಗಳನ್ನು ಸ್ನೇಹಿತರೊಂದಿಗೆ ಸೇರಿ ಮೆಲುಕು ಹಾಕಿದರು. ಅಲ್ಲದೇ, ತಾವು ಕಲಿತ್ತಿದ್ದ ಕೊಠಡಿಗಳಿಗೆ ತೆರಳಿ ಖುಷಿ ಪಟ್ಟರು. ಶಿಷ್ಯಂದಿರು ಆಗಮಿಸಿ ತಮಗೆ ಗೌರವ ಸಲ್ಲಿಸಿದ್ದು ಗುರುಗಳ ಕಣ್ಣಾಲೆಯಲ್ಲಿ ನೀರು ಜಿನುಗು ಮಾಡಿತು. ಒಂದು ರೀತಿಯಲ್ಲಿ ಶಾಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಭಿನವ ಬಸವಣ್ಣಜ್ಜ ಮಹಾಸ್ವಾಮಿಗಳು, ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಗುರು- ಶಿಷ್ಯರೆಂದರೆ ಎಂದರೆ ಗೋವಿಂದಭಟ್- ಶಿಶುನಾಳ ಶರೀಫ್, ಸಿದ್ಧಾರೂಢರು- ಗುರುನಾಥರೂಢರಂತೆ ಇರಬೇಕು. ಅದರಂತೆ ಇಂದಿನ ಮಕ್ಕಳು ತಮ್ಮ ಗುರು ಬಾಂಧವ್ಯವನ್ನು ಹೊಂದಿರಬೇಕು. ಆಗ ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಬಂದು ಸನ್ಮಾನಿಸಿ ಗೌರವಿಸುತ್ತಿರುವುದು ಸಂತಸಕರ ಎಂದು ಕಾರ್ಯಕ್ರಮವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ಒಂದಕ್ಷರ ಕಲಿಸಿರುವವರು ಗುರುಗಳಾಗುತ್ತಾರೆ. ಹಾಗಾಗಿ ಗುರುವಿನ ಸ್ಥಾನ ಎಲ್ಲದಕ್ಕಿಂತಲೂ ಮಿಗಿಲಾದುದ್ದು ಎಂದರು.
ಮುಖಂಡ ಡಾ. ಅರವಿಂದ ಕಟಗಿ ಮಾತನಾಡಿ, ಗುರುಶಿಷ್ಯ ಪರಂಪರೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಳೆ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದರೂ ಎಳ್ಳಷ್ಟೂ ಅಹಂಕಾರವಿಲ್ಲದೆ, ವಿನಮ್ರ ರೀತಿಯಲ್ಲಿ ಕುಳಿತು ಗುರುಗಳಿಗೆ ಮತ್ತು ಗುರು ಮಾತೆಯರಿಗೆ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಫ್.ಕೆ. ಬಾಳಿಹಳ್ಳಿಮಠ ವಹಿಸಿದ್ದರು.ಸನ್ಮಾನ: ಹಳೆಯ ವಿದ್ಯಾರ್ಥಿ ಮೃತ್ಯುಂಜಯ ಜಡಿಮಠ ಸಂಸ್ಥೆಗೆ 25 ಸಾವಿರ ರೂಪಾಯಿ ದೇಣಿಗೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಗುರುಸ್ವಾಮಿ ಬಾಳಿಹಳ್ಳಿಮಠ, ಅಕ್ಕಮ್ಮ ಸುಣಗಾರ, ಬಿ.ಪಿ. ಅಂಗಡಿ, ಗೀತಾ ಬ್ಯಾಲಾಳ, ಜ್ಯೋತಿ ಪರಕಾಳೆ, ಶಹಶಾಜಾನ್ ಗೂಡವಾಲೆ, ಇಕ್ಬಾಲ್ ಉಡುಪಿ, ವಿ.ಎಂ. ಪಾಟೀಲ, ಎಚ್.ಐ. ತೇರದಾಳ, ಎನ್.ಕೆ. ಗುಣಕಿ, ಎ.ಬಿ. ಕುಂಬಾರ, ಸುವರ್ಣ ಅಳಗೋಡಿ, ಚನ್ನಯ್ಯಾ ಪಾಟೀಲ, ಶಾರದಾ ನಂದಿಮಠ, ಅಂಬಿಕಾ ಕುಲಕರ್ಣೀ, ಎಂ.ಜೆ. ಜಡಿಮಠ, ಶಿವಕಾಂತಾ ಬಂಡಗಾರ, ಬಿ.ಪಿ. ಅಂಗಡಿ, ಮಹಾದೇವ ಬೆಳಗಲಿ, ಎಸ್.ಎಸ್. ನಾಗಶೆಟ್ಟಿ, ಎಚ್.ಐ. ತೇರದಾಳ, ಜಿ.ಎಂ. ನಂದಿಮಠ ಮತ್ತಿತರರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಸತೀಶ ಕೊಬ್ಬಯ್ಯನವರ, ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಚಂದ್ರಶೇಖರ್ ಜುಟ್ಟಲ್, ಕಲ್ಲಪ್ಪ ಹರಕುಣಿ, ಉಮೇಶ ಹೆಬಸೂರ, ಮಾಲತೇಶ ಶ್ಯಾಗೋಟಿ, ಸಹದೇವಪ್ಪ, ಶಿವಾನಂದ ಯಲಿಗಾರ, ಬಸವರಾಜ ನೆಲಗುಡ್ಡ, ಕಸ್ತೂರಿ ಕುಂಬಾರ, ಕೋರಿ ಪಿ.ಎಂ., ಅಂದಾನೆಪ್ಪ ಉಪ್ಪಿನ, ಬಸವರಾಜ ಶಿರಸಂಗಿ, ಶ್ರೀಧರ ಕುಲಕರ್ಣಿ ಮುಂತಾದವರು ಆಗಮಿಸಿದ್ದರು.