ಸಾರಾಂಶ
ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಗುರು-ವಿರಕ್ತವರ್ಗ ಬೇರೆ ಬೇರೆ ಎಂಬ ಭಾವನೆ ಸರಿಯಾದ್ದಲ್ಲ. ಗುರು-ವಿರಕ್ತ ಪರಂಪರೆ ಒಂದೇ ಆಗಿದ್ದು, ಸಮಾಜದ ಧಾರ್ಮಿಕ ಭಾವನೆಗೆ ಎರಡೂ ಕಣ್ಣುಗಳಿದ್ದಂತೆ ಎಂಬ ಹಿನ್ನೆಲೆಯಲ್ಲಿ ಧರ್ಮದ ಪ್ರಬೋದನೆ ಮತ್ತು ಧರ್ಮ ಜಾಗೃತಿ ಸಾರಲು ಗುರು-ವಿರಕ್ತರ ಸಮಾಗಮವಾಗಿದೆ ಎಂದು ಶ್ರೀಶೈಲ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಸಮೀಪದ ಬೆಳಕೋಡು ಹಾಲಸ್ವಾಮಿಗೌಡರು ಮಂಗಳವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ವಿರಕ್ತ ಪರಂಪರೆಗೂ ಪಂಚಾಚಾರ್ಯ ಪರಂಪರೆಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಸಮುದಾಯದವರು ಮತ್ತು ಮಲ್ಲವ ಸಮುದಾಯದವರು ಮಲ್ಲಿಕಾರ್ಜುನ ಸ್ವಾಮಿಯ ಭಕ್ತರೇ. ಶ್ರೀಶೈಲಕ್ಕೂ ಮಲೆನಾಡಿನ ಮಲ್ಲವರಿಗೂ ಅವಿನಾಭಾವ ಸಂಬಂಧವಿದೆ. ಅಲ್ಲಮಾಪ್ರಭುರವರ ಶ್ರೀಶೈಲದಲ್ಲಿ ಐಕ್ಯರಾಗಿದ್ದು ಈ ಎಲ್ಲಾ ಭಕ್ತರ ಅಪೇಕ್ಷೆಯು ಧರ್ಮದ ತಿಳಿವಳಿಕೆ ಮತ್ತು ಧರ್ಮ ಜಾಗೃತಿಯೊಂದಿಗೆ ಭಕ್ತರ ಮನೆಯಲ್ಲಿ ಧರ್ಮ ಪ್ರಚಾರ ಮಾಡುವ ಮೂಲಕ ಶ್ರೀಶೈಲ ಶ್ರೀಗಳ ನಡಿಗೆ ಮಲೆನಾಡ ಭಕ್ತರ ಕಡೆಗೆ ಎಂಬ ಧ್ಯೇಯದೊಂದಿಗೆ ಒಂದು ವಾರ ಕಾಲ ಮಲೆನಾಡಿನ ವ್ಯಾಪ್ತಿಯ ಭಕ್ತರ ಮನೆ ಮನೆಗಳಿಗೆ ಭೇಟಿ ನೀಡಿ ಧರ್ಮಬೋಧನೆಯಲ್ಲಿ ತೊಡಗಿರುವುದಾಗಿ ತಿಳಿಸಿದರು.
ಆನಂದಪುರ ಮುರುಘರಾಜೇಂದ್ರ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ವ್ಯಕ್ತಿ ಕ್ರಿಯಾಶೀಲವಾಗಿ ಸಾಮಾಜಿಕ ಮತ್ತು ಸಮಾಜದ ಸೇವೆಯಲ್ಲಿ ಸಕ್ರಿಯರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗುವುದರಿಂದ ಶ್ರೇಯಸ್ಸು ದೊರೆಯುವುದು ಎಂದರು. ಗುರು-ವಿರಕ್ತ ಪರಂಪರೆಯಲ್ಲಿ ಬೇಧ ಭಾವವಿಲ್ಲ ಕೆಲವು ಭಕ್ತರೇ ನಮ್ಮಗಳ ಮಧ್ಯೆ ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ, ಬಿಜಾಪುರ ಜಿಲ್ಲೆ ಬಾಗೇವಾಡಿ ಮಠದ ಷ.ಬ್ರ.ರೇಣುಕಾ ಸ್ವಾಮೀಜಿ, ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಟಿ.ಡಿ.ಮೇಘರಾಜ್, ಉದ್ಯಮಿ ಕೆ.ಆರ್. ಪ್ರಕಾಶ್ ಕೋಣಂದೂರು, ಬೆಳಕೋಡು ಹಾಲಸ್ವಾಮಿಗೌಡರು, ವೀರೇಶ, ಉಮೇಶ, ಗಿರೀಶ ಇತರರಿದ್ದರು.