ಕನ್ನಡಪ್ರಭ ವಾರ್ತೆ ಮೈಸೂರು

ಎಚ್.ಡಿ. ಕೋಟೆ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಮೈಸೂರಿನ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿ, ಡಬಲ್ ಮತ್ತು ಸಿಂಗಲ್ ಬ್ಯಾರೆಲ್ ಗನ್, ಜೀವಂತ ಕಾಡ ತೂಸುಗಳು, ಗನ್ ಪೌಡರ್, ಕಾರು ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕು ಕೂತಿ ಗ್ರಾಮದ ಕೆ.ಎಚ್. ಸುರೇಶ್ ಕುಮಾರ್ ಅ. ಗಿರೀಶ್ (43) ಮತ್ತು ಎಂ.ಬಿ. ಮಧುಸೂದನ್ ಅ. ಪ್ರಜ್ವಲ್ ಗೌಡ (29) ಬಂಧಿತ ಆರೋಪಿಗಳು. ಈ ಇಬ್ಬರು ಎಚ್.ಡಿ. ಕೋಟೆ ತಾಲೂಕು ವ್ಯಾಪ್ತಿಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿರುವ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದ ಬಳಿಯ ಕಬಿನಿ ಹಿನ್ನೀರು ಪ್ರದೇಶದಲ್ಲಿ ಬೇಟೆಯಾಡಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.ಅರಣ್ಯ ಸಂಚಾರಿ ದಳದ ತಂಡವು ಗಸ್ತಿನಲ್ಲಿದ್ದಾಗ ಅನುಮಾನಸ್ಪದವಾಗಿ ನಿಂತಿದ್ದ ಕಾರು ಮತ್ತು ವ್ಯಕ್ತಿಗಳನ್ನು ಗಮನಿಸಿ ಅವರನ್ನು ಹಿಡಿದು ವಿಚಾರಣೆ ನಡೆಸಿದರು. ಪರಿಶೀಲಿಸಿದಾಗ ಕಾರಿನೊಳಗೆ ಡಬಲ್ ಬ್ಯಾರೆಲ್ ಗನ್, ಸಿಂಗಲ್ ಬ್ಯಾರೆಲ್ ಗನ್, 14 ಜೀವಂತ ಕಾಡ ತೂಸುಗಳು, ಗನ್ ಪೌಡರ್, ಸೀಸದ ಚಿಲ್ಸ್, ಕತ್ತಿಗಳು, ಕ್ಲಚ್‌ ವೈರ್‌ ನಿಂದ ತಯಾರಿಸಿದ 6 ಉರುಳುಗಳು, 2 ತಲೆ ಬ್ಯಾಟರಿಗಳು, ಗ್ಯಾಸ್ ಸಿಲಿಂಡರ್ ಮತ್ತು ಬರ್ನರ್, ಟಾರ್ಪಲ್, ಪಾತ್ರೆ ಪತ್ತೆಯಾಗಿದೆ. ಮಾರಾಕಾಸ್ತ್ರಗಳೊಂದಿಗೆ ಕಾಡುಹಂದಿ ಮತ್ತು ಜಿಂಕೆಗಳನ್ನು ಬೇಟೆಯಾಡಲು ಪ್ರಯತ್ನಿಸುತ್ತಿರುವುದು ವಿಚಾರಣೆಯಲ್ಲಿ ಗೊತ್ತಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರುದ್ರೇಶ್, ವಲಯ ಅರಣ್ಯಾಧಿಕಾರಿ ಕೆ. ಸುರೇಂದ್ರ, ಉಪ ವಲಯ ಅರಣ್ಯಾಧಿಕಾರಿ ವಿ. ಮುತ್ತುರಾಜು, ಗಸ್ತು ಅರಣ್ಯ ಪಾಲಕರಾದ ತಿರುಪತಿ ಪೂಜಾರ, ಕುಮಾರ್, ದೇವರಾಜ ಬಂಡೀವಡ್ಡರ್ ತಂಡವು ಈ ಪತ್ತೆ ಮಾಡಿದ್ದಾರೆ.