ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಜನಸೇವೆ ತಮ್ಮ ಉಸಿರು ಎಂದುಕೊಂಡಿದ್ದವರು. ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜಿಲ್ಲೆಯ ಪ್ರಗತಿಗೆ ಕನಸು ಕಟ್ಟಿಕೊಂಡು ಯೋಜನೆಗಳನ್ನು ರೂಪಿಸಿದ್ದ ಅಭಿವೃದ್ಧಿಯ ಹರಿಕಾರರು ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ತಿಳಿಸಿದರು.ತಾಲೂಕಿನ ಹರವೆ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ಎಚ್.ಎಸ್. ಮಹದೇವ ಪ್ರಸಾದ್ ಅವರ ಅಭಿಮಾನಿಗಳ ಬಳಗ, ಆರವಿಂದ್ ಕಣ್ಣಾಸ್ಪತ್ರೆಯ ಸಹಯೋಗದಲ್ಲಿ ಅವರ ೬೭ನೇ ವರ್ಷದ ಜನ್ಮ ದಿನದ ಅಂಗವಾಗಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗುಂಡ್ಲುಪೇಟೆ ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸಿಕೊಂಡು ಬರುತ್ತಿದ್ದ ಮಹದೇವಪ್ರಸಾದ್ ಅವರು ರಾಜಕಾರಣದ ಜೊತೆಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡುವ ಜೊತೆಗೆ ಬಡವರು, ರೈತಾಪಿ ವರ್ಗದವರು ಹಾಗೂ ಎಲ್ಲಾ ವರ್ಗದ ಜನರಿಗೆ ನ್ಯಾಯ ಕಲ್ಪಿಸಿಕೊಡಲು ಬದ್ಧರಾಗಿದ್ದರು. ಅವರ ಹುಟ್ಟುಹಬ್ಬದ ದಿನದಂದು ಹರವೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ ಕಾರ್ಯಗಳನ್ನು ಮಾಡುವ ಮೂಲಕ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ ಎಂದರು.ನಾನೂ ಸಹ ಅವರ ಪುತ್ರನಾಗಿ ಜನ ಸೇವೆ ಮಾಡಲು ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದಾರೆ. ನಮ್ಮ ಕುಟುಂಬದ ಮೇಲೆ ಕ್ಷೇತ್ರದ ಜನರು ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ಚಿರಋಣಿ. ಅವರ ಹಾದಿಯಲ್ಲಿ ಸಾಗಿ, ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಹರವೆ ಭಾಗದ ಅಬಿವೃದ್ಧಿಗೂ ಸಹ ವಿಶೇಷ ಆಸಕ್ತಿಯನ್ನು ವಹಿಸಿ, ಎಲ್ಲರ ಸಹಕಾರದಿಂದ ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸೋಣ ಎಂದರು.
ಜಿಪಂ ಮಾಜಿ ಸದಸ್ಯ ಹಾಗೂ ಅಭಿಮಾನಿ ಬಳಗದ ಅಧ್ಯಕ್ಷ ಕೆರೆಹಳ್ಳಿ ನವೀನ್ ಮಾತನಾಡಿ, ಮಹದೇವ ಪ್ರಸಾದ್ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಮಾತನಾಡುತ್ತಿವೆ. ೨೦೦೮ರಲ್ಲಿ ಹರವೆ ಭಾಗ ಗುಂಡ್ಲುಪೇಟೆ ಕ್ಷೇತ್ರಕ್ಕೆ ಸೇರ್ಪಡೆಯಾದ ಬಳಿಕ ೬ ಪಂಚಾಯಿತಿಗಳ ಅಬಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದರು. ೨೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ರೂವಾರಿ. ಹರವೆ ಭಾಗದ ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಿಸಿಕೊಟ್ಟವರು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಯೋಜನೆಗಳನ್ನು ರೂಪಿಸಿದ್ದರು. ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಾಯಕರು ಎಂದು ಬಣ್ಣಿಸಿದರು.೮೬ ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ:ಬಳಿಕ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಕೊಯಿಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ವೈದ್ಯರ ತಂಡ ವಿವಿಧ ಕಣ್ಣಿನ ತೊಂದರೆಯುಳ್ಳ ೨೧೮ ಮಂದಿಯನ್ನು ಪರೀಕ್ಷೆ ಮಾಡಿ, ಕಣ್ಣಿನ ಪೊರೆಯುಳ್ಳ ೮೬ ಮಂದಿಗೆ ಶಸ್ತ್ರಚಿಕಿತ್ಸೆಗಾಗಿ ಕೊಯಿಮತ್ತೂರಿನ ಅರವಿಂದ್ ಕಣ್ಣಾಸ್ಪತ್ರೆಗೆ ಕರೆದೊಯ್ದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಮುಖಂಡರಾದ ಮುಕ್ಕಡಹಳ್ಳಿ ರವಿಕುಮಾರ್,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನ, ರೇಖಾ, ಕೆ.ಎಲ್. ರವಿಕುಮಾರ್, ಉದಯಕುಮಾರ್, ಗುರುಬಸಪ್ಪ, ಕೆಬ್ಬೇಪುರ ಹರೀಶ್, ಕೆಂಪರಾಜು, ರಾಜಕುಮಾರ್, ಮಧುಸೂಧನ್, ಕೆ.ಎಸ್. ರೇವಣ್ಣ, ರೇವಪ್ಪ, ಮಾಸ್ಟರ್ ಮಾದಪ್ಪ, ಡಿ.ಎನ್. ಶಿವಕುಮಾರ್, ಮಂಜುನಾಥ್, ಮಲ್ಲೇಶ್, ಕುಮಚಹಳ್ಳಿ ಸ್ವಾಮಿ, ಹರವೆ ರವಿ, ಕೆಬ್ಬೇಪುರ ಹರೀಶ್, ಕೇತಹಳ್ಳಿ ಶಿವಪಾದಪ್ಪ, ಮಲೆಯೂರು ನಾಗರಾಜು, ಗ್ರಾಪಂ ಸದಸ್ಯ ಬಸವಣ್ಣ, ಬಸವಣ್ಣ ಹಳೇಪುರ, ರಂಗಸ್ವಾಮಿ, ಮಹದೇವಯ್ಯ, ಕೆರೆಹಳ್ಳಿ ರಾಜೇಂದ್ರ ಮೊದಲಾದವರು ಇದ್ದರು.