ಶನಿವಾರಸಂತೆ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಹೆಚ್.ಎಸ್.ಯಶ್ವಂತ್ ಆಯ್ಕೆ

| Published : Jul 11 2025, 01:47 AM IST

ಸಾರಾಂಶ

ಶನಿವಾರಸಂತೆ ರೋಟರಿ ಕ್ಲಬ್‌ ಇದರ ನೂತನ ಅಧ್ಯಕ್ಷರಾಗಿ ಎಚ್‌. ಎಸ್‌. ಯಶ್ವಂತ್‌ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಶನಿವಾರಸಂತೆ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷರಾಗಿ ಹೆಚ್.ಎಸ್.ಯಶ್ವಂತ್ ಆಯ್ಕೆಯಾಗಿದ್ದಾರೆ. ಚಿನ್ನಳ್ಳಿ ಏರಿ ರೆಸಾರ್ಟ್‍ನಲ್ಲಿ ನಡೆದ ರೋಟರಿ ಕ್ಲಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಯಶ್ವಂತ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಕಾರ್ಯದರ್ಶಿಯಾಗಿ ಎಚ್.ಪಿ.ಚಂದನ್ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿ ರೋಟರಿಯನ್ ಡಾ.ಕೆ. ಸೂರ್ಯನಾರಾಯಣ್ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಮಾತನಾಡಿ, ರೋಟರಿ ಸಂಸ್ಥೆ ಸಮಾಜ ಸೇವೆ ಮಾಡುತ್ತಿರುವ ವಿಶ್ವದ ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾಗಿದ್ದು ಈ ನಿಟ್ಟಿನಲ್ಲಿ ರೋಟರಿ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಯಲ್ಲಿ ಸಮಾಜದಲ್ಲಿ ಗೌರವವನ್ನು ಸಂಪಾದಿಸುತ್ತಿದ್ದಾರೆ. ಈ ದಿಸೆಯಲ್ಲಿ ಶನಿವಾರಸಂತೆ ರೋಟರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಸಮಾಜ ಸೇವೆಯ ಜೊತೆಯಲ್ಲಿ ಕಷ್ಟದಲ್ಲಿರುವವರಿಗೆ, ರೋಗಿಗಳಿಗೆ ವೈಯುಕ್ತಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ನೂತನ ಅಧ್ಯಕ್ಷ ಯಶ್ವಂತ್ ಮಾತನಾಡಿ, ಮುಂದಿನ ದಿನದಲ್ಲಿ ಪಟ್ಟಣ ಸೇರಿದಂತೆ ಕೆಲವು ಭಾಗಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಕಾರ್ಯದಲ್ಲಿ ರೋಟರಿ ಸಂಸ್ಥೆಯು ಮುಂದಾಗುವುದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಜಿಲ್ಲಾ ಸಹಾಯಕ ರಾಜ್ಯಪಾಲ ಉಲ್ಲಾಸ್ ಕೃಷ್ಣ, ವಲಯ ಸೇನಾನಿ ರಾಮಣ್ಣ, ನಿರ್ಗಮಿತ ಅಧ್ಯಕ್ಷ ವರ್ಷಿತ್, ನಿರ್ಗಮಿತ ಕಾರ್ಯದರ್ಶಿ ಶ್ವೇತಾ ವಸಂತ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸರ್ವ ಸದಸ್ಯರು, ರೋಟರಿ ಕ್ಲಬ್ ಸದಸ್ಯರ ಕುಟುಂಬಸ್ಥರು ಹಾಜರಿದ್ದರು.