ಸಾರಾಂಶ
ಗ್ರಾಮೀಣ ಪ್ರದೇಶ ಜನರ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಗ್ರಾಮಗಳ ಅಭಿವೃದ್ಧಿ, ಆರ್ಥಿಕ ಸ್ವಾವಲಂಭನೆ, ನಾವೀನ್ಯತೆ, ಯುವ ಜನರ ಆರ್ಥಿಕ ಸಾಕ್ಷರತೆ ಹಾಗೂ ಉದ್ಯಮಶೀಲತೆಗಾಗಿ ಫಿನ್-ಎ-ಥಾನ್ ಎಂಬ ಹೆಸರಿನಡಿಯಲ್ಲಿ ಹ್ಯಾಕಥಾನ್ ನಡೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮೀಣ ಪ್ರದೇಶ ಜನರ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಗ್ರಾಮಗಳ ಅಭಿವೃದ್ಧಿ, ಆರ್ಥಿಕ ಸ್ವಾವಲಂಭನೆ, ನಾವೀನ್ಯತೆ, ಯುವ ಜನರ ಆರ್ಥಿಕ ಸಾಕ್ಷರತೆ ಹಾಗೂ ಉದ್ಯಮಶೀಲತೆಗಾಗಿ ಫಿನ್-ಎ-ಥಾನ್ ಎಂಬ ಹೆಸರಿನಡಿಯಲ್ಲಿ ಹ್ಯಾಕಥಾನ್ ನಡೆಸಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆ ಕೃಷ್ಣಕುಮಾರ್ ಸಭಾಂಗಣದಲ್ಲಿ ಪಿಇಎಸ್ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಹ್ಯಾಕಥಾನ್ಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸಮತೋಲನಕ್ಕಾಗಿ ಹ್ಯಾಕಥಾನ್ ನಡೆಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ವಿವಿಧ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಗ್ರಾಮೀಣ ಪ್ರದೇಶ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಂಬಂದಿಸಿದಂತೆ ಒಂದು ಆಪ್ ಅಭಿವೃದ್ಧಿ ಪಡಿಸಲಿದ್ದಾರೆ. ಇದರಲ್ಲಿ ಯಾವ ಆಪ್ ಉತ್ತಮ ಎಂಬುದನ್ನು ಪರಿಶೀಲಿಸಿ ಒಂದನ್ನು ಆಯ್ಕೆ ಮಾಡಿಕೊಂಡು ಅದನ್ನು ಜನರಿಗೆ ಪರಿಚಯಿಸಲಾಗುವುದು ಎಂದರು.ಈ ಆಪ್ ಆದಾಯ ಮತ್ತು ಖರ್ಚಿನ ಇತಿ ಮಿತಿ ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಸಲಿದೆ. ನಾವು ಇದನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದರು.
ರಾಜ್ಯದ ವಿವಿಧ ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡ ಹ್ಯಾಕಥಾನ್ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 50 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತಂಡಗಳು ಆರ್ಥಿಕ ಸಾಕ್ಷರತೆ ಬಗ್ಗೆ ಆಪ್ವೊಂದನ್ನು ಸಿದ್ಧಪಡಿಸಲಿದ್ದು, ಇದರಲ್ಲಿ ಯಾವುದು ಸೂಕ್ತ ಎಂದು ಆಯ್ಕೆ ಮಾಡಿಕೊಂಡು ಅದನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.ದೇಶದಲ್ಲಿ ಕೇವಲ ಶೇ.27ರಷ್ಟು ಮಾತ್ರ ಆರ್ಥಿಕ ಸಾಕ್ಷರತೆ ಕಾಣಬಹುದು. ಜನ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿರುವ ಜತೆಗೆ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಜನರ ಆರ್ಥಿಕ ವ್ಯವಹಾರಗಳನ್ನು ಸರಿದೂಗಿಸಲು ಈ ಆಪ್ ಅನುಕೂಲವಾಗಲಿದೆ. ಇಲ್ಲಿ ಸಿದ್ಧವಾಗುವ ಆಪ್ ಅನ್ನು ಪ್ರತಿ ಗ್ರಾಪಂನಲ್ಲಿ ಪ್ರಚಾರ ನಡೆಸುವ ಮೂಲಕ ಜನರಿಗೆ ತಿಳಿವಳಿಕೆ ನೀಡಲಾಗುವುದು. ಇದರಿಂದ ರೈತರ ಆತ್ಮಹತ್ಯೆ ತಡೆಗಟ್ಟಬಹುದು ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ರಾಘವ ಪ್ರಕಾಶ್, ಎಲೆಕೆರೆ ಚಂದ್ರಣ್ಣ, ರಂಜಿತ್, ಸತೀಶ್ ಇತರರು ಇದ್ದರು.