ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ತಾಲೂಕಿನ ಚಂದಗಾಲು ಗ್ರಾಮದ ನಾಯಕ ಸಮಾಜದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದಲ್ಲಿ ನಾನು ಮಧ್ಯಪ್ರವೇಶ ಮಾಡದಿದ್ದರೆ ಇಡೀ ಘಟನೆಯನ್ನು ಮುಚ್ಚಿ ಹಾಕುವ ವ್ಯವಸ್ಥಿತ ಹುನ್ನಾರ ನಡೆದಿತ್ತು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆರೋಪಿಸಿದರು.ಆತ್ಮಹತ್ಯೆ ಪ್ರಕರಣದಲ್ಲಿ ಮೃತಪಟ್ಟ ಮಹದೇವನಾಯಕನ ಅಂತಿಮ ದರ್ಶನ ಪಡೆದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರ ಮೂಲಕ ಸರ್ಕಾರದಿಂದ ಕೊಡುವ 8.5 ಲಕ್ಷ ರು. ಗಳ ಪರಿಹಾರದ ಚೆಕ್ ನ್ನು ಮೃತನ ಪುತ್ರನಿಗೆ ಕೊಡಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕಲು ಕೆಲವರು ಯತ್ನಿಸಿದ್ದರು ಎಂದರು.
ಆತ್ಮಹತ್ಯೆ ಪ್ರಯತ್ನದಲ್ಲಿ ಮೃತಪಟ್ಟ ಕುಟುಂಬದವರಿಗೆ 2 ಲಕ್ಷ ರು. ಸಹಾಯ ಧನವನ್ನು ವೈಯಕ್ತಿಕವಾಗಿ ನೀಡಿದ್ದೇನೆ ಎಂದು ಶಾಸಕ ಡಿ. ರವಿಶಂಕರ್ ಹೇಳಿಕೆ ನೀಡಿದ್ದು, ಆ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಆದರೆ ಆ ಹಣ ಈವರೆಗೂ ನೊಂದ ಕುಟುಂಬಕ್ಕೆ ತಲುಪಿಲ್ಲ. ಈ ಬಗ್ಗೆ ತಾಲೂಕು ಆಡಳಿತ ಮತ್ತು ಪೊಲೀಸರು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.ಇಡೀ ಘಟನೆ ನಡೆಯಲು ಪೊಲೀಸರ ವೈಫಲ್ಯ ಕಾರಣವಾಗಿದ್ದು, ನೊಂದವರ ದೂರನ್ನು ಪಡೆದು ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದರೆ ಎರಡು ಅಮೂಲ್ಯ ಜೀವಗಳು ಹೋಗುತ್ತಿರಲಿಲ್ಲ. ಹಾಗಾಗಿ ಕೇಸು ಪಡೆಯದೆ ಲೋಪವೆಸಗಿರುವ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯಿದೆಯಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕಾಮುಕನ ಬೆದರಿಕೆಯಿಂದ ಮರ್ಯಾದೆಗಂಜಿ ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಮೃತಪಟ್ಟ ಮನೆಯ ಯಜಮಾನ ಮಹದೇವನಾಯಕನ ಶವ ನೋಡಲು ಕೂಡಲೇ ಹೋಗದ ತಹಸೀಲ್ದಾರರು ಶನಿವಾರ ರಾತ್ರಿ ಬಂದಿದ್ದಾರೆ ಮತ್ತು ಕಂದಾಯ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಘಟನೆಯ ಮಾಹಿತಿಯನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ವರದಿ ಮಾಡಿಲ್ಲ. ಇಂತಹ ಅಧಿಕಾರಿಗಳು ಇದ್ದರೆ ದಲಿತರು ಮತ್ತು ಅಮಾಯಕರ ಪ್ರಾಣಕ್ಕೆ ರಕ್ಷಣೆ ದೊರೆಯಲು ಸಾಧ್ಯವೇ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ತಹಸೀಲ್ದಾರರಿಗೆ ತರಾಟೆ:
ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಸಾ.ರಾ. ಮಹೇಶ್, ಈ ಪ್ರಕರಣದಲ್ಲಿ ತಾಲೂಕು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದ್ದು, ಕರ್ತವ್ಯ ಲೋಪವೆಸಗಿರುವ ನಿಮ್ಮ ವಿರುದ್ಧ ಸರ್ಕಾರಕ್ಕೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.ವ್ಯಕ್ತಿಯೋರ್ವನ ದೌರ್ಜನ್ಯ ಮತ್ತು ಬೆದರಿಕೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಆತನ ಕುಟುಂಬದ ಮೂವರು ಆಸ್ಪತ್ರೆಗೆ ದಾಖಲಾಗಿದ್ದರೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದ ನೀವು ನಿರ್ಲಕ್ಷ್ಯ ವಹಿಸಿದ್ದು, ಹಾಗಾದರೆ ತಾಲೂಕಿನಲ್ಲಿ ನಿಮ್ಮ ಕೆಲಸವೇನು ಎಂದರಲ್ಲದೆ, ಜನರಿಗೆ ರಕ್ಷಣೆ ನೀಡುವುದಕ್ಕಿಂತ ಬೇರೆ ಮಹತ್ಕಾರ್ಯ ಏನಿತ್ತು ಎಂದು ಹರಿಹಾಯ್ದರು.
ತಹಸೀಲ್ದಾರರು ಮತ್ತು ಕೆ.ಆರ್. ನಗರ ಪೊಲೀಸರ ವಿರುದ್ದ ದೂರುಗಳ ಸರಮಾಲೆಯನ್ನೇ ಹೇಳಿದ ಗ್ರಾಮಸ್ಥರು, ಪೊಲೀಸರು ಮತ್ತು ತಾಲೂಕು ಆಡಳಿತದ ವೈಫಲ್ಯದಿಂದ ಮಹದೇವನಾಯಕನ ಕುಟುಂಬ ಸೂಕ್ತ ರಕ್ಷಣೆಯಿಲ್ಲದೆ ಆತ್ಮಹತ್ಯೆಯ ದಾರಿ ಹಿಡಿದಿದ್ದು, ದಲಿತರ ಜೀವಗಳಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆತ್ಮಹತ್ಯೆಯಿಂದ ಸಾವಿಗೀಡಾದ ಮಹದೇವನಾಯಕನ ಕುಟುಂಬದವರಿಗೆ ಸಾಂತ್ವನ ಹೇಳಿದ ಮಾಜಿ ಸಚಿವರು, ಮುಂದೆ ನಿಮ್ಮೊಂದಿಗೆ ನಾನು ಬೆನ್ನೆಲುಬಾಗಿ ಇರುತ್ತೇನೆ. ಯಾವುದಕ್ಕೂ ಹೆದರಬೇಡಿ ಎಂದು ಧೈರ್ಯ ತುಂಬಿದರು. ಆನಂತರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಅವರಿಂದ ಹೇಳಿಸಿ ಕುಟುಂಬಕ್ಕೆ ಉದ್ಯೋಗದ ಭರವಸೆ ಕೊಡಿಸಿದರು.
ಜಂಗಲ್ ಲಾಡ್ಜ್ ಮಾಜಿ ಅಧ್ಯಕ್ಷ ಎಂ. ಅಪ್ಪಣ್ಣ, ಜಿಪಂ ಮಾಜಿ ಸದಸ್ಯ ಸಿ.ಜೆ. ದ್ವಾರಕೀಶ್, ಮಾಜಿ ಸದಸ್ಯ ಅಮಿತ್ ವಿ. ದೇವರಹಟ್ಟಿ, ಎಂ.ಟಿ. ಕುಮಾರ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ, ತಾಲೂಕು ಅಧ್ಯಕ್ಷೆ ರಾಜಲಕ್ಷ್ಮೀ, ಪುರಸಭೆ ಸದಸ್ಯರಾದ ಉಮೇಶ್, ಸಂತೋಷ್ ಗೌಡ, ಕೆ.ಎಲ್. ಜಗದೀಶ್, ಕೆ.ಆರ್. ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಮ್ಮ ಸಂತೋಷ್, ಜೆಡಿಎಸ್ ಮುಖಂಡರಾದ ಸಿ.ಬಿ. ಲೋಕೇಶ್, ಉದ್ಯಮಿ ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ನಿಶಾಂತ್, ಸದಸ್ಯ ಮಹದೇವು, ಸೌಮ್ಯ ರಾಘವೇಂದ್ರ, ಯಜಮಾನರಾದ ಶಿವಪ್ಪನಾಯಕ, ರಾಜನಾಯಕ, ಅನಿಲ್ ಕುಮಾರ್, ಉಪವಿಭಾಗಾಧಿಕಾರಿ ಡಾ. ಮಹಮದ್ ಹ್ಯಾರೀಸ್ ಸುಮೈರ್, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ನಂದಿನಿ, ಇನ್ಸ್ಪೆಕ್ಟರ್ ಆರ್. ಕೃಷ್ಣರಾಜು ಇದ್ದರು.ಸರ್ಕಾರದಿಂದ ನೀಡಲಾದ ಚೆಕ್ನ್ನು ಮುಂದೆ ನಿಂತು ಕೊಡಿಸಿದ ಸಾ.ರಾ. ಮಹೇಶ್ಕನ್ನಡಪ್ರಭ ವಾರ್ತೆ ಕೆ.ಆರ್.ನಗರಚೀರನಹಳ್ಳಿ ಗ್ರಾಮದ ಲೋಕೇಶ ಎಂಬಾತನ ಬ್ಲಾಕ್ ಮೇಲೆ ಮತ್ತು ಬೆದರಿಕೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟ ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದವರಿಗೆ ಸರ್ಕಾರದಿಂದ ನೀಡಲಾದ ಚೆಕ್ಅನ್ನುಮಾಜಿ ಸಚಿವ ಸಾ.ರಾ. ಮಹೇಶ್ ಮುಂದೆ ನಿಂತು ಕೊಡಿಸಿದರು.ಪರಿಹಾರದ ಚೆಕ್ ಮೃತರ ಕುಟುಂಬದವರಿಗೆ ಕೊಡುವಂತೆ ಮಾಜಿ ಸಚಿವರು ಹೇಳಿದಾಗ ಈ ಸಂದರ್ಭದಲ್ಲಿ ಅದನ್ನು ನೀಡಲು ಅಧಿಕಾರಿಗಳು ಹಿಂಜರಿದಾಗ ಕೆಂಡಾಮಂಡಲರಾದ ಅವರು, ಎಲ್ಲಾದರೂ ಹಾಳಾಗಿ ಹೋಗಿ ನಮ್ಮ ಕರ್ಮ ಎಂದು ಏರಿದ ಧ್ವನಿಯಲ್ಲಿ ಬೆದರಿಸಿದಾಗ ಇದಕ್ಕಂಜಿದ ಅಧಿಕಾರಿಗಳು ಕೂಡಲೇ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡರ ಮೂಲಕ ಮೃತರ ಕುಟುಂಬದವರಿಗೆ ಚೆಕ್ ಹಸ್ತಾಂತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರದ ಚೆಕ್ನ್ನು ಕೊಡಿಸದೆ ಶಾಸಕರು ಎರಡು ದಿನಗಳಿಂದ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರಲ್ಲದೆ, ಈ ಕೆಲಸ ಮಾಡಲು ದೆಹಲಿಯಿಂದ ನಾನೇ ಬರಬೇಕಾಯಿತು ಎಂದರಲ್ಲದೆ, ಸಂಬಂಧಿತ ಅಧಿಕಾರಿಗಳ ಜತೆ ಮಾತನಾಡಿ, ಮಾನವೀಯತೆಯ ದೃಷ್ಟಿಯಿಂದ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.ಜೂ.1ರಂದು ಕೆ.ಆರ್.ನಗರದ ಪೊಲೀಸ್ ಠಾಣೆಗೆ ನೊಂದ ಕುಟುಂಬ ದೂರು ನೀಡಲು ಹೋದಾಗ ಅದನ್ನು ಸ್ವೀಕರಿಸಿದೆ ಇರುವುದಕ್ಕೆ ಪೊಲೀಸರ ಮೇಲೆ ಯಾವ ಒತ್ತಡ ಇತ್ತು ಎಂಬುದನ್ನು ಇಲಾಖೆಯ ಮೇಲಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.ಕ್ಷೇತ್ರದ ಶಾಸಕ ಡಿ. ರವಿಶಂಕರ್ ಅವರ ಅನುಪಸ್ಥಿತಿಯಲ್ಲಿ ಸರ್ಕಾರದ ಪರಿಹಾರದ ಚೆಕ್ ನ್ನು ಮಾಜಿ ಸಚಿವ ಸಾ.ರಾ. ಮಹೇಶ್ ತಾವೇ ಖುದ್ದಾಗಿ ಮುಂದೆ ನಿಂತು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರಿಂದ ಕೊಡಿಸಿದ್ದು, ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.