ತೆರಿಗೆ ವಂಚನೆ ಆರೋಪದ ಪ್ರಕರಣದಲ್ಲಿ ₹6 ಲಕ್ಷ ಲಂಚ ಸ್ವೀಕರಿಸುವಾಗ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರು (ಡೀಸಿ) ಬೆಂಗಳೂರು ಲೋಕಾಯುಕ್ತ ಪೊಲೀಸರ ಟ್ರ್ಯಾಪ್‌ಗೆ ಬಿದ್ದಿದ್ದಾರೆ.ಹುಬ್ಬಳ್ಳಿ ವಾಣಿಜ್ಯ ತೆರಿಗೆ (ಜಿಎಸ್‌ಟಿ) ಉಪ ಆಯುಕ್ತ ಭರತ್‌ ಕುಮಾರ್‌ ಹೆಗ್ಡೆ(48) ಬಂಧಿತ.

ಬೆಂಗಳೂರು : ತೆರಿಗೆ ವಂಚನೆ ಆರೋಪದ ಪ್ರಕರಣದಲ್ಲಿ ₹6 ಲಕ್ಷ ಲಂಚ ಸ್ವೀಕರಿಸುವಾಗ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತರು (ಡೀಸಿ) ಬೆಂಗಳೂರು ಲೋಕಾಯುಕ್ತ ಪೊಲೀಸರ ಟ್ರ್ಯಾಪ್‌ಗೆ ಬಿದ್ದಿದ್ದಾರೆ.

ಹುಬ್ಬಳ್ಳಿ ವಾಣಿಜ್ಯ ತೆರಿಗೆ (ಜಿಎಸ್‌ಟಿ) ಉಪ ಆಯುಕ್ತ

ಹುಬ್ಬಳ್ಳಿ ವಾಣಿಜ್ಯ ತೆರಿಗೆ (ಜಿಎಸ್‌ಟಿ) ಉಪ ಆಯುಕ್ತ ಭರತ್‌ ಕುಮಾರ್‌ ಹೆಗ್ಡೆ(48) ಬಂಧಿತ. ಜಯನಗರ 7ನೇ ಬ್ಲಾಕ್‌ ನಿವಾಸಿ ವಿಶ್ವಜೀತ್‌ ನಾಯಕ್‌ ನೀಡಿದ ದೂರಿನ ಮೇರೆಗೆ ಬೆಂಗಳೂರು ಲೋಕಾಯುಕ್ತ ಪೊಲೀಸರು ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ಕೈಗೊಂಡು ಲಂಚದ ಹಣ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ದೂರುದಾರ ವಿಶ್ವಜೀತ್‌ ನಾಯಕ್‌ ವಿರುದ್ಧ ₹60 ಲಕ್ಷ ಜಿಎಸ್‌ಟಿ ವಂಚನೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವಿಶ್ವಜೀತ್‌ ನಾಯಕ್‌ ಅವರನ್ನು ವಿಚಾರಣೆ ಮಾಡಿದ್ದ ಭರತ್‌ ಕುಮಾರ್‌ ಹೆಗ್ಡೆ, ಈ ಪ್ರಕರಣದಲ್ಲಿ ಸಹಾಯ ಮಾಡಲು ₹10 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ಅಂತಿಮವಾಗಿ ₹6 ಲಕ್ಷಕ್ಕೆ ಮಾತುಕತೆ ನಡೆಸಿದ್ದರು.

ಬೆಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು

ಈ ಸಂಬಂಧ ವಿಶ್ವಜೀತ್‌ ಬೆಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಸೋಮವಾರ ಹುಬ್ಬಳ್ಳಿಗೆ ತೆರಳಿ ಭರತ್‌ ಕುಮಾರ್‌ ಹೆಗ್ಡೆ ₹6 ಲಕ್ಷ ಲಂಚ ಸ್ವೀಕರಿಸುವಾಗಲೇ ದಾಳಿ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್‌ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.