ಕನ್ನಡಪ್ರಭ ವಾರ್ತೆ ಕೋಲಾರನಿವೇಶನದ ಸ್ಥಳವನ್ನು ಪರಿಶೀಲಿಸಿ ವರದಿ ನೀಡಲು ಲಂಚ ಸ್ವೀಕರಿಸುತ್ತಿದ್ದಾಗ ಆರ್ಐ ಹಾಗೂ ಬಿಲ್ ಕಲೆಕ್ಟರ್ ಹಾಗೂ ಮತ್ತೋರ್ವನನ್ನು ಲೋಕಾಯುಕ್ತ ಪೊಲೀಸ್ ಬಂಧಿಸಿದ್ದಾರೆ.
ತಾಲೂಕಿನ ಕಸಬಾ ವ್ಯಾಪ್ತಿಯ ಸುಲ್ತಾನ್ ತಿಪ್ಪಸಂದ್ರ ಪಿರಾದಿದಾರರಿಗೆ ಸೇರಿದ ಬಾಬ್ತು ಗ್ರಾಮದ ಸರ್ವೇ ನಂ.೮೧ ರಲ್ಲಿ ೧೦೦/೭೦ ಅಡಿಗಳ ನಿವೇಶನದ ಸ್ಥಳವನ್ನು ಪರಿಶೀಲಿಸಿ ವರದಿ ನೀಡಲು ನಗರಸಭೆಯ ರಾಜಸ್ವ ನಿರೀಕ್ಷಕ ಕಿರಣ್ ಕುಮಾರ್ ಎನ್. ಮತ್ತು ಬಿಲ್ ಕಲೆಕ್ಟರ್ ನಟರಾಜ್ ಒಂದು ತಿಂಗಳ ಹಿಂದೆ ಬಲವಂತವಾಗಿ ಪಿರಾದಿ ಮತ್ತು ಅಳಿಯ ಮುನಾವರ್ರಿಂದ ೮೦೦೦ ರು.ಗಳನ್ನು ತೆಗೆದುಕೊಂಡಿದ್ದನು.ಬಳಿಕ ಕೆಲಸ ಮಾಡಿಕೊಡದೇ, ಈಗ ಪುನಃ ೨೦,೦೦೦ ರು.ಗಳ ಲಂಚದ ಹಣಕ್ಕೆ ಬೇಡಿಕೆಯಿಟ್ಟು ಅದರಂತೆ ೧೫,೦೦೦ ರು.ಗಳ ಲಂಚದ ಹಣವನ್ನು ಮಂಗಳವಾರ ಸಂಜೆ ನಗರಸಭೆ ಕಾರ್ಯಾಲಯದ ಆವರಣದಲ್ಲಿ ಕಚೇರಿಯಲ್ಲಿ ಅನಧಿಕೃತವಾಗಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶಪ್ಪ ಪಡೆದುಕೊಂಡಾಗ ಲೋಕಾಯುಕ್ತ ಪೊಲೀಸ್ ನಡೆಸಿದ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ, ಪ್ರಕರಣದಲ್ಲಿ ತನಿಖೆಯು ಮುಂದುವರೆದಿದೆ ಎಂದು ತಿಳಿಸಿದ್ದಾರೆ.ಅಧೀಕ್ಷಕ ಅಂಟೋನಿ ಜಾನ್ ಜೆ.ಕೆ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಸುನಿಲ್ ಕುಮಾರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಅಂಜನಪ್ಪ ಸಿಬ್ಬಂದಿ ವಾಸು, ಮಂಜಪ್ಪ, ದೇವಪ್ಪ ಎಸ್.ಆರ್, ಕಿಶೋರ್, ರಮೇಶ್, ನಾಗಭೂಷಣ, ಅಜಯ್, ನಫೀಜ್, ಶ್ರೀಧರ್ ಇದ್ದರು.