ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಹಾಗುರು ಬಸವಣ್ಣನವರ ಹೆಜ್ಜೆಯಲ್ಲಿಯೇ ಸಾಗಿದ ಹಡಪದ ಅಪ್ಪಣ್ಣ ಅವರು ಸಮಾಜಕ್ಕೆ ಹೊಸ ಬೆಳಕು ನೀಡಿದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಅಭಿಪ್ರಾಯಪಟ್ಟರು.ತಾಲೂಕಿನ ಹೇಮಾವತಿ ಬಡಾವಣೆಯ ನಯನಜ ಕ್ಷತ್ರೀಯ ಸಮಾಜದ ಕಚೇರಿ ಆವರಣದಲ್ಲಿ ಮಹಾಶರಣ ಹಡಪದ ಅಪ್ಪಣ್ಣನವರ 892 ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮಾಜದ ಪರಿವರ್ತನೆಗೆ ಶ್ರಮಿಸಿದ ಘನಶರಣರಲ್ಲಿ ಹಡಪದ ಅಪ್ಪಣ್ಣನವರಿಗೆ ಅಗ್ರಸ್ಥಾನವಿದ್ದು, ಇವರ ಸುಮಾರು 200ಕ್ಕೂ ಹೆಚ್ಚು ವಚನಗಳು ಕನ್ನಡ ಸಾಹಿತ್ಯದಲ್ಲಿ ಲಭ್ಯವಿದೆ ಎಂದರು.
ಬಸವಣ್ಣನವರ ಆಪ್ತ ಕಾರ್ಯದರ್ಶಿಯಂತಿದ್ದ ಅಪ್ಪಣ್ಣನವರು ಬಸವಣ್ಣನವರ ಮಹಾಮನೆಯಲ್ಲಿ ವೀಳ್ಯ ವಿತರಣೆಯ ಕಾಯಕದಲ್ಲಿದ್ದರು. ಇವರು ಕಲ್ಯಾಣದಲ್ಲಿ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಸನ್ನಿಧಿಯಲ್ಲಿ ನಿರ್ವಹಿಸಿದ ಕಾಲಲೋಚಿತ ಕರ್ತವ್ಯ, ಧರ್ಮಶ್ರದ್ಧೆ ಮತ್ತು ತೋರಿಸಿದ ಜಾಣ್ಮೆ ಶೂನ್ಯ ಸಂಪಾದನೆಯಲ್ಲಿ ದಾಖಲಾಗಿದೆ ಎಂದು ಹೇಳಿದರು.ಸರ್ಕಾರ ಹಡಪದ ಅಪ್ಪಣ್ಣನವರ ಜಯಂತಿಯನ್ನು ಆಚರಿಸುತ್ತಿದ್ದರೂ ಮೂಲ ಕನ್ನಡಿಗರಾದ ನಯನಜ ಕ್ಷತ್ರೀಯ ಸಮಾಜದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಿಲ್ಲ. ಕುಲ ಕಸುಬಾದ ಕ್ಷೌರಿಕ ವೃತ್ತಿಯನ್ನು ಹೊರತು ಪಡಿಸಿ ನಮ್ಮ ಸಮಾಜದ ಜನಕ್ಕೆ ಇತರ ವೃತ್ತಿಪರ ಕೌಶಲ್ಯಗಳ ಬಗ್ಗೆ ಅರಿವಿಲ್ಲ ಎಂದರು.
ತೆಲುಗು ಭಾಷಿಕ ಕುಲಕ್ಕೆ ಸೇರಿದ ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ ಪರಿಪೂರ್ಣ ಕನ್ನಡಿಗರಾದ ನಯಕನಜ ಕ್ಷತ್ರೀಯ, ಹಡಪದ, ಕ್ಷೌರಿಕ, ವಾಜರ ಮುಂತಾದ ಹೆಸರಿನಿಂದ ಗುರುತಿಸಲ್ಪಡುವ ನಮ್ಮ ಸಮುದಾಯದ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ತಾಲೂಕು ಉಪಾಧ್ಯಕ್ಷ ಕೆ.ವಿ.ಅನಂತಕುಮಾರ್, ಖಜಾಂಚಿ ಮರಿಯಯ್ಯ, ಮುಖಂಡರಾದ ರಾಮಕರಷ್ಣ, ಮಹದೇವಪ್ಪ, ಮೋಹನ್, ಚೇತನ್, ಮಂಜುನಾಥ್, ಕೆ.ಆರ್.ವೆಂಕಟರಾಮು, ಗೋವಿಂದರಾಜು, ಶ್ಯಾಮಸುಂದರ್, ಗಿರೀಶ್, ಸತೀಶ್, ತಮ್ಮಣ್ಣ, ಎಚ್.ಎನ್.ಮಂಜು, ಆರ್.ಮಂಜು, ಸಂತೋಷ್, ಕೃಷ್ಣ, ವೆಂಕಟೇಶ್, ಎಚ್.ಎಸ್.ಪುಟ್ಟಸ್ವಾಮಿ, ಪ್ರಕಾಶ್, ಚಂದ್ರು, ಹಿತೇಶ್, ಕುಮಾರ್, ವಿನಯ್, ವೇದಾಂತ್, ಹಿಂದುಳಿದ ವರ್ಗ ಕಲ್ಯಣ ಇಲಖೆಯ ಪ್ರದೀಪ್ ಗೌಡ ಮತ್ತಿತರರು ಇದ್ದರು.