ಸಾರಾಂಶ
ಹಗರಿಬೊಮ್ಮನಹಳ್ಳಿ: ತಾಲೂಕಿನ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಹಗರಿ ಆಂಜನೇಯ ದೇವಸ್ಥಾನ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.ಈ ಕುರಿತು ಸಂಘದ ತಾಲೂಕು ಅಧ್ಯಕ್ಷೆ ಜೆ.ಎಂ. ಜ್ಯೋತೀಶ್ವರಿ ಮಾತನಾಡಿ, ಮಕ್ಕಳ ದೈಹಿಕ ಮತ್ತು ಶೈಕ್ಷಣಿಕ ಪ್ರಗತಿ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅಂಗನವಾಡಿ ಕೇಂದ್ರ ಸೂಕ್ತವಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಶಿಕ್ಷಣ ವ್ಯವಸ್ಥೆಯನ್ನು ಮುಂದುವರಿಸಬೇಕು. ಶಿಕ್ಷಣ ಇಲಾಖೆಯ ಅನೌಪಚಾರಿಕ ಶಿಕ್ಷಣ ಕೇವಲ ಇಂಗ್ಲೀಷ್ ವರ್ಣಮಾಲೆ ಮತ್ತು ಪದಗುಚ್ಚ ಕಲಿಸಲು ಸೀಮಿತವಾಗುತ್ತದೆ. ಆದರೆ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆಗೆ ಪೂರಕವಾಗಿರುವುದಿಲ್ಲ. ಸರ್ಕಾರದ ಹೊಸ ನಿರ್ಣಯ ಅಂಗನವಾಡಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವ ಜತೆಗೆ ಅಂಗನವಾಡಿ ನೌಕರರನ್ನು ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ. ಶಿಕ್ಷಣ ಇಲಾಖೆಯಲ್ಲಿ ೩೬ಸಾವಿರ ಶಿಕ್ಷಕರ ಕೊರತೆ ಇದೆ. ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿವೆ. ಇಂತಹ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಯುಕೆಜಿ ಆರಂಭಿಸುವುದು ಸೂಕ್ತವಲ್ಲ ಎಂದರು.
ಸಂಘದ ಗೌರವಾಧ್ಯಕ್ಷ ಕೊಟಿಗಿ ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣ ಇಲಾಖೆ ಡಬ್ಲುö್ಯಸಿ ಸಮ್ಮತಿ ಪಡೆದ ಬಳಿಕ ಬದಲಾವಣೆಗಳನ್ನು ಜಾರಿಗೊಳಿಸಬೇಕು. ಕೆಕೆಆರ್ಡಿಪಿ ಯೋಜನೆಯಡಿ ಹೊಸದಾಗಿ ಪ್ರಾರಂಭವಾಗುವ ಎಲ್ಕೆಜಿ, ಯುಕೆಜಿ ಯೋಜನೆಯನ್ನು ಕೂಡಲೆ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಕಾರ್ಯದರ್ಶಿ ಗೀತಾ, ಪುಷ್ಪಾವತಿ, ಗಿರಿಜಮ್ಮ, ವಿಜಯಲಕ್ಷ್ಮಿ, ಶಾಂತ, ಮಂಜಮ್ಮ, ಇಮಾಂಭಿ, ಸರಸ್ವತಿ, ನಿರ್ಮಲಾ, ಮಾಬುನ್ನಿ, ವಿಶಾಲಾಕ್ಷಿ, ವಿನೋದ, ರೇಖಾ, ಶ್ವೇತಾ, ಕಸ್ತೂರಿ, ಗಿರಿಜಮ್ಮ, ಮಾಲಿನಿ, ನಾಗವೇಣಿ, ಉಮಾಪಾಟೀಲ್ ಇದ್ದರು.