ಬುಧವಾರ ಮತ್ತು ಗುರುವಾರ ಸಂಜೆ ಕಲಾದಗಿ ಭಾಗದ ವಿವಿಧ ಗ್ರಾಮಗಳಲ್ಲಿ ಹಾಗೂ ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಲಿಕಲ್ಲು ಮಳೆಸುರಿದ ಪರಿಣಾಮ ರೈತರ ತೋಟಗಾರಿಕೆ ಬೆಳೆಗಳು, ಕೃಷಿ ಬೆಳೆ ಹಾನಿಯಾಗಿವೆ.
ಕನ್ನಡಪ್ರಭ ವಾರ್ತೆ ಕಲಾದಗಿ
ಬುಧವಾರ ಮತ್ತು ಗುರುವಾರ ಸಂಜೆ ಕಲಾದಗಿ ಭಾಗದ ವಿವಿಧ ಗ್ರಾಮಗಳಲ್ಲಿ ಹಾಗೂ ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಲಿಕಲ್ಲು ಮಳೆಸುರಿದ ಪರಿಣಾಮ ರೈತರ ತೋಟಗಾರಿಕೆ ಬೆಳೆಗಳು, ಕೃಷಿ ಬೆಳೆ ಹಾನಿಯಾಗಿವೆ.ಗುರುವಾರ ಸಂಜೆ ಚಿಕ್ಕಶೇಲ್ಲಿಕೇರಿ, ಹಿರೇಶೆಲ್ಲಿಕೇರಿ, ಕಳಸಕೊಪ್ಪ, ಹಿರೇಸಂಶಿ, ಚಿಕ್ಕಶಂಸಿ, ದೇವನಾಳ, ತುಳಸಿಗೇರಿ, ಸೊಕನಾದಗಿ, ಛಬ್ಬಿ ಭಾಗದಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ಆಲಿಕಲ್ಲು ಮಳೆ ಸುರಿಯಿತು. ತೋಟಗಾರಿಕೆ ಬೆಳೆ ದಾಳಿಂಬೆ, ಚಿಕ್ಕು, ಪಪ್ಪಾಯ, ಕಲ್ಲಂಗಡಿ ಬೆಳೆಗಳು ಹಾನಿಯಾಗಿವೆ. ಕೃಷಿ ಬೆಳೆ ಗೋದಿ ಗೋವಿನ ಜೋಳ ಹಾನಿಯಾಗಿದ್ದು, ಬದಾಮಿ ತಾಲೂಕಿನ ಅನವಾಲ ಯಂಡಿಗೇರಿ ಕಾಡರಕೊಪ್ಪ ಭಾಗದಲ್ಲಿ ಬುಧವಾರ ಮಳೆ ಸುರಿದು ರೈತರ ಬೆಳೆಗಳು ಹಾನಿಯಾದ ವರದಿಯಾಗಿದೆ.
ಹಾನಿ ಪರಿಶೀಲನೆ, ಪರಿಹಾರಕ್ಕೆ ತಕ್ಷಣ ಕ್ರಮಕ್ಕೆ ಶಾಸಕ ಜೆಟಿಪಿ ಸೂಚನೆ:ಆಲಿಕಲ್ಲು ಮಳೆಯಿಂದ ಅಪಾರ ಹಾನಿ ಆದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬುಧವಾರ ಮುಂಜಾನೆ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಸಂಗಪ್ಪ ಅವರೊಂದಿಗೆ ಹಾಗೂ ತೋಟಗಾರಿಕೆ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕ ಜೆ.ಟಿ. ಪಾಟೀಲ ಅವರು ತತಕ್ಷಣ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.
ಪಶುಸಂಗೋಪನ ಇಲಾಖೆಯ ಜಿಲ್ಲಾ ಅಧಿಕಾರಿ ತಮ್ಮ ದೂರವಾಣಿ ಕರೆ ಸ್ವೀಕರಿಸದೇ ಇದ್ದಿದ್ದಕ್ಕೆ ಅಸಹನೆ ವ್ಯಕ್ತಮಾಡಿದ್ದಾರೆ.ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು, ರೈತರು ಪ್ರಕೃತಿ ವಿಕೋಪದಿಂದ ಈ ರೀತಿ ಮತ್ತೆ ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತಿರುವ ಬಗ್ಗೆ ನೋವು ವ್ಯಕ್ತ ಮಾಡಿದರು. ಹಾನಿಗೊಳಗಾದ ರೈತರಿಗೆ ಅಗತ್ಯ ಪರಿಹಾರಧನ ಕೊಡಿಸುವುದಾಗಿ ಭರವಸೆ ನೀಡಿದ ಅವರು, ಅದಷ್ಟು ಬೇಗ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.