ಕನ್ನಡಪ್ರಭ ವಾರ್ತೆ ಟೇಕಲ್ಗುರುವಾರ ಸಂಜೆ, ರಾತ್ರಿ ಸುರಿದ ಅಬ್ಬರದ ಬಿರುಗಾಳಿ ಸಹಿತ ಮಳೆಗೆ ಮಾಸ್ತಿ ಹೋಬಳಿಯಲ್ಲಿ ಕೋಟ್ಯಂತರ ರು. ಬೆಲೆ ಬಾಳುವ ಕೃಷಿ, ತೋಟಗಾರಿಕೆ ಬೆಳೆಗಳು ನೆಲಕಚ್ಚಿ ನಷ್ಟವಾಗಿದೆ. ಗಾಳಿ ಮಳೆಯಿಂದ ರೈತ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ವಿದ್ಯುತ್ ಕಂಬಗಳು, ಪಾಲಿ ಹೌಸ್, ಬೃಹತ್ ಮರಗಳು ನೆಲಕ್ಕುರುಳಿ ಹಲವು ಅವಾಂತರಗಳೆ ಸೃಷ್ಟಿಯಾಗಿರುವ ಘಟನೆ ಮಾಸ್ತಿ ಹೋಬಳಿಯ ಹಸಾಂಡಹಳ್ಳಿ, ಕುಪ್ಪೂರು ಸೇರಿದಂತೆ ಮಾಸ್ತಿ ಸುತ್ತಮುತ್ತ ನಡೆದಿದೆ.ಒಂದೂವರೆ ಕೋಟಿಯಷ್ಟು ಬೆಳೆ ಕಳೆದುಕೊಂಡು ಶಾಸಕರು, ಜನಪ್ರತಿನಿಧಿಗಳ, ಅಧಿಕಾರಿಗಳ ಎದುರು ಕಣ್ಣೀರು ಹಾಕುತ್ತಿರುವ ರೈತರು, ಮನೆ ಕಳೆದುಕೊಂಡವರು, ಶೆಡ್ ಕುಸಿದು ಮೃತಪಟ್ಟ ರೈತ ಕುಟುಂಬದ ಅಕ್ರಂದನ, ಮೃತಪಟ್ಟ ರೈತನ ಮನೆಗೆ ತೆರಳಿ ಶಾಸಕ ನಂಜೇಗೌಡ ಪರಿಹಾರದ ಚೆಕ್ ವಿತರಿಸಿದ್ದಾರೆ.ಮಾಸ್ತಿ ಸುತ್ತಮುತ್ತ ಅಬ್ಬರದ ಗಾಳಿ ಮಳೆಯಿಂದ ವಿವಿಧ ಬೆಳೆಗಳು, ಗ್ರೀನ್ ಹೌಸ್, ಮನೆಗಳು ಕುಸಿದು ಸುಮಾರು ಕೋಟ್ಯಂತರ ರುಪಾಯಿ ಹಾನಿ ಸಂಭವಿಸಿದೆ.ಮಾಸ್ತಿ ಹೋಬಳಿಯ ದೊಡ್ಡದಾನವಹಳ್ಳಿ ಬಳಿ ರೈತ ಕುಪ್ಪೂರು ಕೆ.ಎಚ್. ಚನ್ನರಾಯಪ್ಪರಿಗೆ ಸೇರಿದ ಪಾಲಿ ಹೌಸ್ ಹಾಗೂ ಅದರಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿದೆ, ೨ ಎಕರೆ ಪ್ರದೇಶದಲ್ಲಿ ಸುಮಾರು ೯೦ ಲಕ್ಷ ರು. ವೆಚ್ಚ ಮಾಡಿ ಬೆಳೆದಿದ್ದ ಕ್ಯಾಪ್ಸಿಕಂ, ಬೀನ್ಸ್ ಬೆಳೆ ಸಂಪೂರ್ಣವಾಗಿ ನಾಶವಾಗಿ, ಕೋಟ್ಯಾಂತರ ರು. ನಷ್ಟವಾಗಿದೆ. ಬಿರುಗಾಳಿಯ ಅಬ್ಬರದ ಪರಿಣಾಮ ಪಾಲಿಹೌಸ್ ಪ್ಲಾಸ್ಟಿಕ್ ಶೀಟ್, ಅದಕ್ಕೆ ಅಳವಡಿಸಿದ್ದ ನೆಟ್ ಹರಿದು ನಷ್ಟವಾಗಿದೆ.ರಾಜೇನಹಳ್ಳಿ ರೈತ ಸುಬ್ರಮಣಿ ಸಾಲಸೋಲ ಮಾಡಿ ೨ ಎಕರೆ ಜಮೀನಿನಲ್ಲಿ ನೆಟ್ಹೌಸ್ನಲ್ಲಿ ಟೊಮೆಟೋ ಹಾಗೂ ಬೀನ್ಸ್ ಸುಮಾರು ೮ ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬೆಳೆ ನಷ್ಟವಾಗಿದೆ. ಫಸಲು ಕೈಗೆ ಬರುವ ಸಮಯದಲ್ಲಿ ಬಿರುಗಾಳಿಗೆ ಬೆಳೆ ನೆಲಸಮವಾಗಿದೆ. ಬೆಳೆ ಕಳೆದುಕೊಂಡ ರೈತ ಪರಿಹಾರಕ್ಕಾಗಿ ರೈತ ಮನವಿ ಮಾಡಿಕೊಂಡಿದ್ದಾರೆ.ಶಾಸಕರ ಮುಂದೆ ಕಣ್ಣೀರು: ಶಾಸಕ ಕೆ.ವೈ.ನಂಜೇಗೌಡ ಹಾಗೂ ತಹಸೀಲ್ದಾರ್ ಎಂ.ವಿ. ರೂಪ ಮಾಸ್ತಿ ಸುತ್ತಮುತ್ತ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಶಾಸಕರ ಮುಂದೆ ಬೆಳೆ ಕಳೆದುಕೊಂಡ ರೈತರು ಕಣ್ಣೀರು ಹಾಕಿದ ಪ್ರಸಂಗವು ಸಹ ನಡೆಯಿತು.
ಮಾಸ್ತಿ ಹೋಬಳಿ ಸುತ್ತಮುತ್ತ ಹಲವು ಕಡೆ ಬೃಹತ್ ಮರಗಳು ನೆಲಕ್ಕುರಳಿವೆ, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಶಾಸಕ ನಂಜೇಗೌಡ ಬೆಸ್ಕಾಂ ಅಧಿಕಾರಿಗಳಿಗೆ ಕೂಡಲೆ ಮರಗಳನ್ನು, ವಿದ್ಯುತ್ ಕಂಬಗಳ ತೆರವುಗೊಳಿಸಿ ವಿದ್ಯುತ್ ನೀಡುವಂತೆ ಸೂಚಿಸಿದರು.ಮಾಸ್ತಿ ಹೋಬಳಿಯ ಹಸಾಂಡಹಳ್ಳಿಯಲ್ಲಿ ಗುರುವಾರ ರಾತ್ರಿ ಹಾಲಿ ಕಲ್ಲು ಬಿರುಗಾಳಿ ಸಹಿತ ಮಳೆಗೆ ಕುರಿಶೆಡ್ ಕುಸಿದು ನಾರಾಯಣಪ್ಪ (೬೦) ಸಾವನ್ನಪ್ಪಿದ್ದು ಶಾಸಕರು ಮತ್ತು ತಹಸೀಲ್ದಾರರು ಸಂತ್ರಸ್ರ ಪರಿಹಾರ ನಿಧಿಯಿಂದ ೫ ಲಕ್ಷದ ಚೆಕ್ ಅನ್ನು ಕುಟುಂಬಸ್ಥರಿಗೆ ವಿತರಿಸಿ ಸಾಂತ್ವನ ಹೇಳಿದರು.ಮರ ನೆಲಕ್ಕುರಳಿ ಮನೆ ಜಖಂ:ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಹಸಾಂಡಹಳ್ಳಿಯ ಕಿರಣ್ ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಮಗು ಸೇರಿದಂತೆ ೭ ಮಂದಿ ಪ್ರಾಣಪಯದಿಂದ ಪಾರಾಗಿದ್ದಾರೆ. ಮನೆ ಕಳೆದುಕೊಂಡವರಿಗೂ ಶಾಸಕರು ಪರಿಹಾರ ನೀಡಿದರು.೨೨ಟೇಕಲ್-೨ ಮಾಸ್ತಿ ಹೋಬಳಿಯ ದೊಡ್ಡದಾನವಹಳ್ಳಿಯ ತೋಟದಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಯನ್ನು ಶಾಸಕ ಕೆ.ವೈ.ನಂಜೇಗೌಡ ಪರಿಶೀಲಿಸಿದರು.-
ಸಾವನಪ್ಪಿದ್ದ ರೈತ. ನಾರಾಯಣಪ್ಪ