ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲಮುಸಲ್ಮಾನರ ಪವಿತ್ರ ಹಜ್ ಯಾತ್ರೆ ಸಂದರ್ಭ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ನೆಲದ ಮೇಲೆ ಕುಳಿತು ಸಾಮಾನ್ಯರಂತೆ ಊಟ ಮಾಡಿ, ಮೈದಾನದಲ್ಲೇ ಮಲಗಿ ನಿದ್ರಿಸುವ ಮೂಲಕ ಸರಳತೆಗೆ ಸಾಕ್ಷಿಯಾಗಿದ್ದಾರೆ.ಮೆಕ್ಕಾ ಸಮೀಪದ ಮುಜ್ಜಲಿಫಾ ಮೈದಾನದಲ್ಲಿ ರಾತ್ರಿ ಹೊತ್ತು ನೆಲದ ಮೇಲೆ ಮಲಗಿ ವಿಶ್ರಾಂತಿ ಪಡೆದಿದ್ದಾರೆ. ಈ ಫೋಟೋಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇರಳದ ಟಿ.ವಿ. ಮಾಧ್ಯಮಗಳು ಹಜ್ ಯಾತ್ರೆಯ ನಾನಾ ಹಂತಗಳ ವರದಿಯಲ್ಲಿ ಸ್ಪೀಕರ್ ಖಾದರ್ ಮರಳಿನ ಮೇಲೆ ಮಲಗಿ ನಿದ್ರಿಸುತ್ತಿರುವ ದೃಶ್ಯಗಳನ್ನು ತೋರಿಸಿದೆ.ವರ್ಷಕ್ಕೊಮ್ಮೆ ನಡೆಯುವ ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಮೆಕ್ಕಾದಲ್ಲಿ ನಡೆಯುತ್ತಿದ್ದು, ಇಲ್ಲಿ ಬಡವ-ಶ್ರೀಮಂತ, ಮೇಲೂ-ಕೀಳು ಎಂಬ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುತ್ತಿದೆ ಎಂಬ ವಿಶ್ಲೇಷಣೆಯೊಂದಿಗೆ ಖಾದರ್ ಫೋಟೊ ಮೆಚ್ಚುಗೆಗೆ ಪಾತ್ರವಾಗುತ್ತಿದೆ.ಹಜ್ ಯಾತ್ರೆ ನಾನಾ ಹಂತಗಳ ಧಾರ್ಮಿಕ ವಿಧಿಗಳನ್ನು ಒಳಗೊಂಡಿದ್ದು, ಇದರಲ್ಲಿ ಮುಜ್ಜಲಿಫಾ ಮೈದಾನದಲ್ಲಿ ತಂಗುವುದು ಕೂಡ ಸೇರಿದೆ. ಮೌಂಟ್ ಅರಾಫತ್ ಪರ್ಯಟನೆ ಬಳಿಕ ಹಜ್ ಯಾತ್ರಾರ್ಥಿಗಳು ಮುಜ್ಜಲಿಫಾ ಮೈದಾನದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಯಾತ್ರೆಯ ಸಂಕೇತವಾಗಿರುವ ಶ್ವೇತವಸ್ತ್ರ ಧರಿಸಿಕೊಂಡು ಎಲ್ಲರೂ ಸಮಾನತೆಯ ತತ್ವದಡಿ ಸರಳ ದಿನಚರಿ ಪಾಲಿಸುತ್ತಾರೆ.
ಜಗತ್ತಿನಾದ್ಯಂತ ಬಂದ ಸುಮಾರು 1.67 ಮಿಲಿಯನ್ ಮುಸ್ಲಿಂ ಯಾತ್ರಿಕರು ಯಾತ್ರಾ ವಿಧಿಗಳಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ 1.75 ಲಕ್ಷಭಾರತೀಯ ಯಾತ್ರಾರ್ಥಿಗಳು ಸೇರಿದ್ದಾರೆ. ಇದರಲ್ಲಿ ನಾನೂ ಕೂಡ ಒಬ್ಬನು. ಎಲ್ಲರಂತೆ ನಾನು ಕೂಡ ಒಂದು ದಿನ ರಸ್ತೆ ಬದಿ ಮಲಗಿ ಊಟವನ್ನು ರಸ್ತೆ ಬದಿಯಲ್ಲಿಯೇ ಸವಿದಿದ್ದೇನೆ. ಒಂದು ದಿನ ಈ ರೀತಿ ಪ್ರತಿಯೊಬ್ಬ ಯಾತ್ರಿಕನೂ ಕೂಡ ಕಡ್ಡಾಯವಾಗಿ ಮಾಡಲೇಬೇಕು ಎನ್ನುತ್ತಾರೆ ಖಾದರ್.