ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪದವಿ ಮುಗಿಸಿ, ಉದ್ಯೋಗ ಪಡೆಯುವ, ಸ್ವಯಂ ಉದ್ಯೋಗ ಮಾಡುವ ಕನಸು ಕಾಣುತ್ತಿರುವ ಯುವಜನತೆ ಮತ್ತು ಉದ್ದಿಮೆದಾರರೊಂದಿಗೆ ನೇರ ಸಂಪರ್ಕ ಏರ್ಪಡಿಸುವ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ಪ್ರತಿ ತಿಂಗಳಿಗೊಂದು ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿದ್ಯಾರ್ಥಿ, ಯುವಜನರು ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಹಾಲಪ್ಪ ಪ್ರತಿ಼ಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.ನಗರದ ಕ್ರೋಮೋಡ್ ಬಯೋಟೆಕ್ ಆವರಣದಲ್ಲಿ ಅಂತಿಮ ವರ್ಷದ ಔಷಧ ವಿಜ್ಞಾನ ಮತ್ತು ಅರೆ ವೈದ್ಯಕೀಯ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೈಗಾರಿಕಾ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯೋಗಾಧಾರಿತ(ಜಾಬ್) ಶಿಕ್ಷಣ ಕಲಿಯುತ್ತಿರುವ ಮಕ್ಕಳು ಕೈಗಾರಿಕೆಗಳಿಗೆ ಭೇಟಿ ನೀಡುವುದರಿಂದ ಒಂದು ಉದ್ದಿಮೆ ಎಂದರೆ ಏನು, ಅದರಲ್ಲಿ ಏನೇನು ಅಡಕವಾಗಿದೆ. ಇದರ ಹಿಂದಿನ ಶ್ರಮ, ಯಾವೆಲ್ಲಾ ಇಲಾಖೆಗಳ ಸಹಕಾರ, ಸಹಯೋಗ ಇದೆ ಎಂಬುದನ್ನು ಖುದ್ದು ತಿಳಿಯುವುದರ ಜೊತೆಗೆ, ಕೈಗಾರಿಕೆಗಳಿಗೆ ಸಂಬಂಧಿಸಿದಂತಹ ಸಿಡಾಕ್, ಡಿಐಸಿ, ಕೆ.ಎಸ್.ಎಫ್.ಸಿ, ಕೆಐಎಡಿಬಿ ಹೀಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಸಹಕಾರಿಯಾಗುತ್ತದೆ ಎಂದರು.ಜಿಲ್ಲೆಯಲ್ಲಿ ಸುಮಾರು 72 ಪದವಿ ಕಾಲೇಜುಗಳಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿಯಿಂದ ಯುವಜನರಲ್ಲಿ ಒಂದು ಆತ್ಮಸ್ಥೈರ್ಯ ಮೂಡಲಿದೆ. ನೀವು ಕಲಿಯುತ್ತಿರುವ ಕಾಲೇಜುಗಳ ಆಡಳಿತ ಮಂಡಳಿಯು ಒಪ್ಪಿದರೆ, ನಿಮ್ಮಲ್ಲಿಯೇ ಇನ್ಕ್ಯೂಬೇಸೆನ್ ಸೆಂಟರ್ ತೆರೆದು ನಿಮಗೆ ಇಷ್ಟ ಬಂದ ಸ್ಟಾರ್ಟ್ ಅಫ್ ಅರಂಭಿಸಬಹುದು ಎಂದರು.
ಜಿಲ್ಲೆಯಲ್ಲಿ ಸುಮಾರು 6 ರಿಂದ 8 ಸಾವಿರ ಐಟಿ, ಬಿಟಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿದ್ದು, ಇವರಿಗೆ ಮನೆ ಬಾಗಿಲಲ್ಲಿಯೇ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಜಾಗ ನೀಡುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ವಸಂತ ನರಸಾಪುರ, ಹಿರೇಹಳ್ಳಿ, ಅಂತರಸರನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಐಟಿ, ಬಿಟಿ ಆರಂಭವಾದರೆ ತುಮಕೂರು ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಯುವಜನರು ನಾನು ಉದ್ಯೋಗಿಯಾಗಬೇಕೇ ? ಉದ್ದಿಮೆದಾರನಾಗಬೇಕೆ? ಎಂಬುದನ್ನು ನಿರ್ಧರಿಸಿ ಎಂದರು.ಆ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ಪಡೆದರೆ ಯಶಸ್ವಿ ಉದ್ದಿಮೆದಾರನಾಗಬಹುದು ಎಂದು ಮುರುಳೀಧರ ಹಾಲಪ್ಪ ಸಲಹೆ ನೀಡಿದರು.
ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಮಧು ಮಾತನಾಡಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ನಮ್ಮ ಸಂಸ್ಥೆ ಹೊಸದಾಗಿ ಉದ್ದಿಮೆ ಪ್ರಾರಂಭಿಸಬೇಕು ಎಂಬುವವರಿಗೆ ಅಗತ್ಯ ತರಬೇತಿಯ ಜೊತೆಗೆ ಮಾರ್ಗದರ್ಶನ ಮಾಡಿ, ಅವರಿಗೆ ಸರಕಾರದಿಂದ ದೊರೆಯಬಹುದಾದ ಸವಲತ್ತು, ಸಹಕಾರದ ಮಾಹಿತಿ ನೀಡಲಿದೆ ಎಂದರು.ಯುವಜನರು ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಒಂದು ಮೊಬೈಲ್ ಇದ್ದರೆ ಸಾಕು, ಇನ್ನೇನು ಬೇಡ ಎಂಬಂತಹ ಮನಸ್ಥಿತಿ ಯುವಜನರಲ್ಲಿದೆ. ಈ ದುಸ್ಥಿತಿ ಹೋಗಬೇಕೆಂದರೆ ಮುರುಳೀಧರ ಹಾಲಪ್ಪ ಅವರು ಏರ್ಪಡಿಸಿರುವ ರೀತಿ ಯುವಜನರನ್ನು ಕೈಗಾರಿಕೆಗಳಿಗೆ ಕರೆತಂದು, ಅಲ್ಲಿನ ಸಾಧಕ, ಬಾಧಕಗಳ ಪರಿಚಯ ಮಾಡಿಸಿದರೆ ಆಸಕ್ತಿ ಮೂಡಲು ಸಾಧ್ಯ ಎಂದರು.
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಎಇಇ ರಾಜೇಶ್ ಮಾತನಾಡಿ, ಉದ್ದಿಮೆ ಪ್ರಾರಂಭಿಸಬೇಕು ಎಂದು ತೀರ್ಮಾನಿಸಿದಾಗ ಅಗತ್ಯವಿರುವ ಭೂಮಿ ಕುರಿತು ಕೆಐಎಡಿಬಿಗೆ ಅಪ್ರೂವ್ಡ್ ಡಿಪಿಆರ್ನೊಂದಿಗೆ ಅರ್ಜಿ ಸಲ್ಲಿಸಿದರೆ, ಎರಡು ಎಕರೆಯವರೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶೀಲನೆ ನಡೆದು ಭೂಮಿ ಹಂಚಿಕೆಯಾಗಲಿದೆ. ಭೂಮಿ ಪಡೆದ ಐದು ವರ್ಷಗಳಲ್ಲಿ ಸಂಬಂಧಪಟ್ಟ ಉದ್ದಿಮೆ ಪ್ರಾರಂಭವಾದರೆ ಸದರಿ ಭೂಮಿ ನಿಮಗೆ ಕ್ರಯಕ್ಕೆ ನೀಡಲಾಗುವುದು. ಪ್ರಧಾನ ಮಂತ್ರಿ ಉದ್ಯೊಗ ಸೃಜನ ಯೋಜನೆ, ಮುದ್ರಾ, ಕೆ.ಎಸ್.ಎಫ್ಸಿ ಸೇರಿದಂತೆ ಹಲವು ಸಂಸ್ಥೆಗಳಿಗೆ ಆರ್ಥಿಕ ಸಹಕಾರ ದೊರೆಯಲಿದೆ. ಇದನ್ನು ಎಲ್ಲರೂ ಬಳಸಿಕೊಳ್ಳಬೇಕೆಂದರು.ಕರ್ನಾಟಕ ಕೈಗಾರಿಕಾ ಹಣಕಾಸು ನಿಗಮದ ಶ್ರೀನಿವಾಸ್, ವಿ.ಪಿ.ಆಗ್ರೋ ಸೈನ್ಸ್ ನ ಪಾರ್ಥಸಾರಥಿ, ಸಿದ್ಧಗಂಗಾ ಇನ್ಕ್ಯೂಬೇಷನ್ ಸೆಂಟರ್ನ ಶ್ರೀಕಾಂತ್ ನಾಯರ್, ಕ್ರೋಮೆಡ್ ಬೈಯೋ ಸೈನ್ಸ್ನ ನಿರ್ದೇಶಕರಾದ ರಾಜೇಶ್, ಉಮಾಶಂಕರ್, ಆಶ್ವಿನಿ ಮತ್ತಿತರರು ಯುವಜನರಿಗೆ ಕೈಗಾರಿಕೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಕಾಲೇಜುಗಳ ನೂರಾರು ಬಿ.ಎಸ್.ಸಿ, ಎಂ.ಎಸ್ಸಿ ಪಾರ್ಮಸಿ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಪಾಲ್ಗೊಂಡಿದ್ದರು.