ಹಂಪಿ ಉತ್ಸವ: ವಚನಾಂದಶ್ರೀಗಳ ನೇತೃತ್ವದಲ್ಲಿ ಯೋಗಾಸನ

| Published : Mar 02 2025, 01:15 AM IST

ಹಂಪಿ ಉತ್ಸವ: ವಚನಾಂದಶ್ರೀಗಳ ನೇತೃತ್ವದಲ್ಲಿ ಯೋಗಾಸನ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾಮೀಜಿಗಳು, ಯೋಗಿಗಳು ಸೇರಿದಂತೆ ಕೆಲವರ ಸ್ವತ್ತಾಗಿದ್ದ ಯೋಗಾಭ್ಯಾಸವನ್ನು ಸಾರ್ವಜನಿಕರ ಸ್ವತ್ತಾಗಿ ರೂಪಿಸಿದ ಕೀರ್ತಿ ಯೋಗ ಗುರು ಬಾಬಾ ರಾಮದೇವ ಅವರಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸ್ವಾಮೀಜಿಗಳು, ಯೋಗಿಗಳು ಸೇರಿದಂತೆ ಕೆಲವರ ಸ್ವತ್ತಾಗಿದ್ದ ಯೋಗಾಭ್ಯಾಸವನ್ನು ಸಾರ್ವಜನಿಕರ ಸ್ವತ್ತಾಗಿ ರೂಪಿಸಿದ ಕೀರ್ತಿ ಯೋಗ ಗುರು ಬಾಬಾ ರಾಮದೇವ ಅವರಿಗೆ ಸಲ್ಲುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠಾಧಿಪತಿ ಹಾಗೂ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ವಿಜಯನಗರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಂಪಿ ಉತ್ಸವದ ಪ್ರಯುಕ್ತ ವಿಜಯ ವಿಠಲ ದೇವಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ಯೋಗಾಸನದಲ್ಲಿ ಮಾತನಾಡಿದರು.

ಹಂಪಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಯೋಗವನ್ನು ಪರಿಚಯಿಸುವ ಮೂಲಕ ನಡೆಸಿದ ಮೊದಲ ಯೋಗಾಭ್ಯಾಸದಲ್ಲಿ ಪತಂಜಲಿ ಯೋಗ ಪೀಠದ ಯೋಗಗುರು ಭವರ್ ಲಾಲ್ ಆರ್ಯ ಜೊತೆಗೆ ಯೋಗಾಭ್ಯಾಸಕ್ಕೆ ಮಾರ್ಗದರ್ಶನ ನೀಡಿದ ಅವರು ಯೋಗಾಭ್ಯಾಸದ ಜೊತೆ ಯೋಗದ ಮಹತ್ವ, ಯೋಗ ಮಾಡುವ ವಿಧಾನ ಸೇರಿದಂತೆ ಅದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿಯೊಂದಿಗೆ ಅಭ್ಯಾಸ ಮಾಡಿಸಿದರು. ಪತಂಜಲಿ ಪರಿವಾರ ದೇಶ ವಿದೇಶಗಳಲ್ಲಿ ಯೋಗವನ್ನು ಉಚಿತವಾಗಿ ತರಬೇತಿಗೊಳಿಸುವ ಮೂಲಕ ಸೇವೆ ಮಾಡುತ್ತಿದೆ ಎಂದರು.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಕಠಿಣವಾದದನ್ನು ಮಾಡುವುದು, ಮನಸ್ಸು ಹಾಗೂ ದೇಹ ನಿಗ್ರಹಿಸಲು ಮಾಡುವ ದಂಡನೆ ಯೋಗವಾಗಿದೆ. ಯೋಗ ನಮ್ಮ ಜೀವನದ ಭಾಗ ಹಾಗೂ ನಿತ್ಯಕ್ರಿಯೆಯಾಗಬೇಕು ಎಂದರು.

ಪತಂಜಲಿ ಯೋಗಪೀಠ ಭವರ್ ಲಾಲ್ ಆರ್ಯ, ಆಯುಷ್ ಇಲಾಖೆಯ ಡಾ. ಸರಳಾ, ಪತಂಜಲಿ ಯೋಗ ಸಾಧಕರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸಾಧಕರು, ಹಂಪಿ ರಂಜು ಆರ್ಟ್ಸ್‌ ಯೋಗ ಸಾಧಕರು ಸೇರಿದಂತೆ ನೂರಾರು ಯೋಗಾಸಕ್ತರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.