ಹಂಪಿ ಉತ್ಸವಕ್ಕೆ ಸಕಲ ಸಿದ್ಧತೆಗಳು ಸಜ್ಜುಗೊಂಡು ಹಂಪಿ ಮಧುವಣಗಿತ್ತಿಯಂತೆ ಸಜ್ಜಾಗುತ್ತಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿ ಉತ್ಸವದಲ್ಲಿ ವಿಜಯನಗರ ಸಾಮ್ರಾಜ್ಯದ ಹಿಂದಿನ ಗತವೈಭವವನ್ನು ಸಾರುವ ಹಂಪಿ ಉತ್ಸವ ಫೆ.13, 14, 15ರಂದು ಅತ್ಯಂತ ಆಕರ್ಷಕವಾಗಿ ಮತ್ತು ‍‍ವೈಭವದಿಂದ ಆಚರಿಸಲು ಹಂಪಿಯಲ್ಲಿ ವಿವಿಧ ವೇದಿಕೆಗಳ ಸಿದ್ಧತೆ ಕುರಿತಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ಹಂಪಿ ಉತ್ಸವಕ್ಕೆ ಸಕಲ ಸಿದ್ಧತೆಗಳು ಸಜ್ಜುಗೊಂಡು ಹಂಪಿ ಮದುವಣಗಿತ್ತಿಯಂತೆ ಸಜ್ಜಗೊಳ್ಳುತ್ತಿದೆ.

ವಿಜಯನಗರದ ಗತವೈಭವವನ್ನು ನೆನಪಿಸುವಂತೆ ತಮ್ಮ ಕಲೆಯನ್ನು ಪ್ರದರ್ಶಿಸಲು ಕಲಾವಿದರು ತಮ್ಮ ಕಲೆಯನ್ನು ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನಾವರಣಗೊಳಿಸಲು ಕಲಾವಿದರು ಕಾತುರದಿಂದ ಕಾಯುತ್ತಿದ್ದಾರೆ.

ಈ ಬಾರಿ ಹಂಪಿ ಉತ್ಸವಕ್ಕೆ ವಿಶೇಷ ಮೆರುಗು ತರಲಿರುವ ಸಿನೆಮಾ ತಾರೆಯರು, ಖ್ಯಾತ ನಾಯಕ- ನಾಯಕಿಯರು ಹಂಪಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಸ್ಯಾಂಡಲ್‌ವುಡ್‌ ಸ್ಟಾರ್ಸ್:

ಹಂಪಿ ಉತ್ಸವದಲ್ಲಿ ಈ ಬಾರಿ ಸ್ಯಾಂಡಲ್‌ವುಡ್‌ ಸ್ಟಾರ್‌ ನಟರನ್ನು ಕರೆಸಲಾಗುತ್ತಿದೆ. ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಹಾಗೂ ಅಶ್ವಿನಿ ಪುನೀತ್‌ ರಾಜಕುಮಾರ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ರಿಷಬ್‌ ಶೆಟ್ಟಿ, ಡಾಲಿ ಧನಂಜಯ, ಧ್ರುವ ಸರ್ಜಾ, ರಚಿತಾ ರಾಮ್, ರುಕ್ಮಿಣಿ ವಸಂತ್‌, ರಾಜ್‌ ಬಿ. ಶೆಟ್ಟಿ, ಜೈದ್‌ ಖಾನ್‌, ಸಪ್ತಮಿ ಗೌಡ ಸೇರಿದಂತೆ ಪ್ರಮುಖ ತಾರೆಗಳು ಹಂಪಿ ಉತ್ಸವಕ್ಕೆ ಆಗಮಿಸಿ ಕಲಾಭಿಮಾನಿಗಳಿಗೆ ಸಾಂಸ್ಕೃತಿಕ ರಸದೌತಣ ಉಣ ಬಡಿಸಲಿದ್ದಾರೆ.

ಇವರೊಂದಿಗೆ ಸಂಗೀತ ರಸದೌತಣವನ್ನು ಉಣಬಡಿಸಲು ಖ್ಯಾತ ಗಾಯಕರಾದ ವಿಜಯ ಪ್ರಕಾಶ್‌, ಅರ್ಜುನ್‌ ಜನ್ಯ, ರಘು ದೀಕ್ಷಿತ್‌, ಮಂಗಲಿ, ನವೀನ್‌ ಸಜ್ಜು, ಹರಿಹರನ್‌, ಎಂ.ಡಿ. ಪಲ್ಲವಿ, ವಾಸುಕಿ ವೈಭವ್‌, ಶಮಿತಾ ಮಲ್ನಾಡ್‌, ಮಣಿಕಾಂತ್ ಕದ್ರಿ, ಬಿಗ್ ಬ್ಯಾಸ್‌ ಖ್ಯಾತಿಯ ಗಿಲ್ಲಿ ಮತ್ತು ಕಾವ್ಯ, ಹನುಮಂತು ಸೇರಿದಂತೆ ಹಲವು ಕಲಾವಿದರು ಹಂಪಿ ಉತ್ಸವದ ಆಕರ್ಷಣೆಯಾಗಲಿದ್ದಾರೆ.

ತಮ್ಮ ನೆಚ್ಚಿನ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟ-ನಟಿಯರನ್ನು ಹಾಗೂ ಖ್ಯಾತ ಗಾಯಕರನ್ನು ನೋಡಲು ಮತ್ತು ಕಲಾವಿದರ ಹಾಡು ಕೇಳಲು ಜನಸಾಗರವೇ ಹಂಪಿ ಉತ್ಸವಕ್ಕೆ ಹರಿದು ಬರಲಿದೆ. ಹಂಪಿ ಉತ್ಸವಕ್ಕೆ ಮೆರಗು ನೀಡಲು ಹೆಚ್ಚಿನ ಜನರನ್ನು ಸೆಳೆಯುವ ಮೂಲಕ ಹಂಪಿ ಉತ್ಸವನ್ನು ಜನೋತ್ಸವವನ್ನಾಗಿ ರೂಪಿಸಲು ಜಿಲ್ಲಾಡಳಿತ ಸಕಲ ಪ್ರಯತ್ನ ನಡೆಸಿದೆ.

5 ಸಾವಿರ ಕಲಾವಿದರು:

ಸಿನಿಮಾ ತಾರೆಯ ಜೊತೆಗೆ ಸ್ಥಳೀಯ ಕಲಾವಿದರು ಸೇರಿ ಸುಮಾರು 5 ಸಾವಿರಕ್ಕೂ ಹೆಚ್ಚು ಕಲಾವಿದರು ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸಲಿದ್ದಾರೆ.

ಹಂಪಿ ಉತ್ಸವಕ್ಕೆ ಅದ್ಧೂರಿ ಸಿದ್ಧತೆಗಳು ನಡೆದಿವೆ. ಹಂಪಿ ಉತ್ಸವದ ಮುಖ್ಯವೇದಿಕೆ ಗಾಯತ್ರಿ ಪೀಠ, ಸಾಸಿವೆ ಕಾಳು ಗಣೇಶ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಎದುರು ಬಸವಣ್ಣ ಮಂಟಪ ಸೇರಿದಂತೆ ಒಟ್ಟು ಐದು ವೇದಿಕೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆನೆಸಾಲು ಮಂಟಪದ ಬಳಿ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವೇದಿಕಗಳು ಭರದಿಂದ ಸಾಗಿವೆ.

ಉತ್ಸವಕ್ಕೆ ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಜಿಲ್ಲಾಡಳಿತದಿಂದ ಈಗಾಗಲೇ ಗಣ್ಯರಿಗೆ ಆಹ್ವಾನ ಪತ್ರಿಕೆಗಳನ್ನು ನೀಡುವುದು. ಸಿನಿಮಾ ತಾರೆಯರನ್ನು ಹಂಪಿ ಉತ್ಸವಕ್ಕೆ ಆಹ್ವಾನಿಸುವುದು. ಸ್ಥಳೀಯ ಕಲಾವಿದರ ಆಯ್ಕೆ ಪ್ರಕ್ರಿಯೆ ಸಹ ನಡೆಯುತ್ತಿದೆ. ಆಹ್ವಾನ ಪತ್ರಿಕೆಗಳಲ್ಲಿ ಕಲಾವಿದರ ಹೆಸರು ಪ್ರಕಟಿಸಲು ಕಲಾವಿದರ ಆಯ್ಕೆ ಮಾಡಲು ಆಯ್ಕೆ ಸಮಿತಿಯವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಪ್ರವಾಸೋಧ್ಯಮ ಸಚಿವ ಎಚ್‌.ಕೆ. ಪಾಟೇಲ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಭೇಟಿಯಾಗಿ ಹಂಪಿ ಉತ್ಸವಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.