ಸಾರಾಂಶ
ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಭಗ್ನಗೊಂಡ ಮನೆಯನ್ನು 6 ಲಕ್ಷ ವೆಚ್ಚದಲ್ಲಿ, ಕೇವಲ 80 ದಿನಗಳಲ್ಲಿ ನಿರ್ಮಿಸಿ ಹಸ್ತಾಂತರಿಸಿರುವುದು ಸಂಸ್ಥೆಯ ಮನೆ ನಿರ್ಮಾಣದ ಚರಿತ್ರೆಯಲ್ಲಿ ಹೊಸ ದಾಖಲೆಯಾಗಿದೆ. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 55 ನೆಯ ಮನೆಯಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಪ್ರಥಮ ಪಿ.ಯು.ಸಿ.ಯ ಶ್ರೀನಿಧಿ ಹಾಗೂ ಪ್ರಥಮ ಬಿ.ಇ.ಯ ಭೂಮಿಕಾ ಸಹೋದರಿಯರಿಗೆ ಬ್ರಹ್ಮಾವರ ತಾಲೂಕಿನ ಹೇರಾಡಿಯ ಸಂಕಾಡಿಯಲ್ಲಿ ಪಣಂಬೂರು ವಾಸುದೇವ ಐತಾಳ್ ಇವರು ತಮ್ಮ 60ನೇ ಹುಟ್ಟುಹಬ್ಬದ ಪ್ರಯುಕ್ತ ಪ್ರಾಯೋಜಿಸಿದ ನೂತನ ಮನೆ ‘ಕೃಪಾರಂಗ’ ಶನಿವಾರ ಹಸ್ತಾಂತರಿಸಲಾಯಿತು.ಪಣಂಬೂರು ವಾಸುದೇವ ಐತಾಳ್ - ಮೀನಾಕ್ಷಿ ವಿ. ಐತಾಳ್ ದಂಪತಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಅವರ ಸಹೋದರಿ ಜಯಶ್ರೀ ಉಪಸ್ಥಿತರಿದ್ದರು.ಕಲಾರಂಗ ವಿಶ್ವಾಸಾರ್ಹತೆ ಮತ್ತು ಸಮಾಜಪ್ರೀತಿಯಿಂದ ಕೆಲಸ ಮಾಡುವ ಅನನ್ಯ ಸಂಘಟನೆ ಸಹಾಯ ಪಡೆದ ವಿದ್ಯಾರ್ಥಿಗಳು ಪ್ರತ್ಯರ್ಪಣದಿಂದ ಸಮಾಜದ ಋಣ ತೀರಿಸಬೇಕು ಎಂದು ಐತಾಳರು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು, ಯಕ್ಷಗಾನ ಕಲಾರಂಗದ ಕಾರ್ಯಕರ್ತರ ನಿಸ್ಪೃಹ ಸಮಾಜಪರ ಕೆಲಸ ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ನಿವೃತ್ತ ಪ್ರಾಂಶುಪಾಲೆ ತಾರಾ, ಉಪನ್ಯಾಸಕಿ ಅನುರಾಧ, ನಿವೃತ್ತ ಬ್ಯಾಂಕ್ ಉದ್ಯೋಗಿಗಳಾದ ನರಸಿಂಹ ಮೂರ್ತಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು.ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಭಗ್ನಗೊಂಡ ಮನೆಯನ್ನು 6 ಲಕ್ಷ ವೆಚ್ಚದಲ್ಲಿ, ಕೇವಲ 80 ದಿನಗಳಲ್ಲಿ ನಿರ್ಮಿಸಿ ಹಸ್ತಾಂತರಿಸಿರುವುದು ಸಂಸ್ಥೆಯ ಮನೆ ನಿರ್ಮಾಣದ ಚರಿತ್ರೆಯಲ್ಲಿ ಹೊಸ ದಾಖಲೆಯಾಗಿದೆ. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿದ 55 ನೆಯ ಮನೆಯಾಗಿದೆ.